ಚೆನ್ನೈ: ತಮಿಳುನಾಡಿನಲ್ಲಿ ಇಂದಿನಿಂದ ದಳಪತಿ ವಿಜಯ್ ಯುಗಾರಂಭವಾಗಿದ್ದು, ನೂತನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಜಯ್ ಜೊತೆಗೆ ಓರ್ವ ಮಹಿಳಾ ಶಾಸಕಿ ಸೇರಿದಂತೆ 9 ನಾಯಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ನಟ ವಿಜಯ್ ತಮಿಳುನಾಡಿನ 24ನೇ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. ಅವರೊಂದಿಗೆ 9 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದು, ಯಾವುದೇ ಉಪಮುಖ್ಯಮಂತ್ರಿ ಹುದ್ದೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ನೆಹರು ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳು ಮತ್ತು ಬೆಂಬಲಿಗರ ಸಮ್ಮುಖದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಟಿ ತ್ರಿಶಾ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು. ಎಂಜಿಆರ್, ಕರುಣಾನಿಧಿ ಮತ್ತು ಜಯಲಲಿತಾರಂತಹ ದಿಗ್ಗಜರು ಆಳಿದ ನೆಲದಲ್ಲಿ ಈಗ ವಿಜಯ್ ಆಡಳಿತ ಆರಂಭವಾಗಿದೆ.
ವಿಜಯ್ ಅವರೊಂದಿಗೆ ಒಂಬತ್ತು ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಎಸ್. ಕೀರ್ತನಾ
ಕೆ.ಎ. ಸೆಂಗೊಟ್ಟೈಯನ್
ಆಧವ್ ಅರ್ಜುನ್
ಬಸ್ಸಿ ಆನಂದ್
ಡಾ. ಅರುಣ್ ರಾಜ್
ವೆಂಕಟರಮಣನ್
ನಿರ್ಮಲ್ ಕುಮಾರ್
ರಾಜ್ ಮೋಹನ್
ಡಾ. ಟಿ.ಕೆ. ಪ್ರಭು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಶಿವಕಾಶಿ ಕ್ಷೇತ್ರದ 29 ವರ್ಷದ ಟಿವಿಕೆ ಶಾಸಕಿ ಸೆಲ್ವಿ ಕೀರ್ತನಾ ಇದೀಗ ಸಿಎಂ ವಿಜಯ್ ಅವರ ಸಂಪುಟದಲ್ಲಿ ಸಚಿವೆಯಾಗಿದ್ದಾರೆ. ಪ್ರಮಾಣವಚನ ಸಮಾರಂಭದಲ್ಲಿ ಎಸ್.ಕೀರ್ತನಾ ಗಮನ ಸೆಳೆದಿದ್ದಾರೆ.
29 ವರ್ಷದ ಕೀರ್ತನಾ ತಮಿಳುನಾಡಿನ ಅತ್ಯಂತ ಕಿರಿಯ ಸಚಿವರು. ಸಿಎಂ ವಿಜಯ್ ಅವರ ಸಂಪುಟದಲ್ಲಿ ಮೊದಲ ಏಕೈಕ ಮಹಿಳಾ ಸಚಿವೆ. ಭಾರತದ ಪಟಾಕಿ ರಾಜಧಾನಿ ಎಂದೇ ಹೆಸರಾಗಿರುವ ಶಿವಕಾಶಿ ಕ್ಷೇತ್ರದಲ್ಲಿ 7 ದಶಕಗಳ ಪುರುಷ ಪ್ರಾಬಲ್ಯವನ್ನು ಕೊನೆಗೊಳಿಸಿ ಆ ಕ್ಷೇತ್ರದಲ್ಲಿ ಮೊದಲ ಬಾರಿ ಟಿವಿಕೆಯಿಂದ ಗೆಲುವು ಸಾಧಿಸಿ ಮೊದಲ ಮಹಿಳಾ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಈಗ ವಿಜಯ್ ಸಂಪುಟದಲ್ಲಿ ಸಚಿವೆಯಾಗಿ ಪದಗ್ರಹಣ ಮಾಡಿದ್ದಾರೆ.
ಸ್ನಾತಕೋತ್ತರ ಪದವೀಧರೆಯಾಗಿರುವ ಕೀರ್ತನಾ, ಈ ಹಿಂದೆ ತಮಿಳುನಾಡು ಮಾಜಿ ಸಿಎಂ ಎಂ.ಕೆ.ಸ್ಟಾಲಿನ್ ಸೇರಿದಂತೆ ಹಲವು ಪ್ರಮುಖ ನಾಯಕರಿಗೆ ರಾಜಕೀಯ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದರು.