ನವದೆಹಲಿ: ಸರ್ಕಾರ ರಚನೆಗೆ ನಟ, ಟಿವಿಕೆ ಪಕ್ಷದ ಸಂಸ್ಥಾಪಕ ವಿಜಯ್ ಕಾಂಗ್ರೆಸ್ ಬೆಂಬಲ ಕೋರಿದ್ದಾರೆ ಎಂದು ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಜನಾದೇಶವು ಜಾತ್ಯಾತೀತ ಸರ್ಕಾರಕ್ಕೆ ಹಾಗೂ ಸಂವಿಧಾನವನ್ನು ಅಕ್ಷರಶಃ ರಕ್ಷಿಸಲು ಬದ್ಧವಾಗಿದೆ ಎಂಬುದು ಸ್ಪಷ್ಟವಾಗಿದೆ. ಸರ್ಕಾರ ರಚನೆಯಿಂದ ಬಿಜೆಪಿಯನ್ನು ದೂರವಿಡಲು ದೃಢ ನಿಶ್ಚಯ ಹೊಂದಿದ್ದೇವೆ. ಅದರಂತೆ ಚುನಾವಣೆ ತೀರ್ಪಿನಲ್ಲಿ ಪ್ರತಿಫಲಿಸುವ ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಟಿವಿಕೆ ಮುಖ್ಯಸ್ಥ ವಿಜಯ್ ಅವರ ಮನವಿಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ವರಿಷ್ಠರು ತಮಿಳುನಾಡು ಕಾಂಗ್ರೆಸ್ ಕಮಿಟಿಗೆ ನಿರ್ದೇಶನ ನೀಡಿದ್ದಾರೆ ಎಂದು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯ ಬಳಿಕ ವೇಣುಗೋಪಾಲ್ ಹೇಳಿದ್ದಾರೆ.
ನಾಳೆ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ ಸಾಧ್ಯತೆ
ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷದಿಂದ ಸರ್ಕಾರ ರಚನೆಯಾಗಲಿದ್ದು, ನಾಳೆ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ತಮಿಳುನಾಡು ಮುಖ್ಯಮಂತ್ರಿಯ ಪ್ರತಿಜ್ಞಾವಿಧಿ ಸ್ವೀಕಾರಕ್ಕೆ ಸಮಯ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ.
ಇಂದು ತಮಿಳುನಾಡು ರಾಜ್ಯಪಾಲ ರಾಜೇಂದ್ರ ಅರಳೇಕರ್ ಚೆನ್ನೈಗೆ ಆಗಮಿಸಲಿದ್ದಾರೆ. ತಮಿಳುನಾಡಿನ ಪ್ರಭಾರ ರಾಜ್ಯಪಾಲರಾಗಿರುವ ರಾಜೇಂದ್ರ ಅರಳೇಕರ್ ಚೆನ್ನೈಗೆ ಆಗಮಿಸಲಿದ್ದು, ನಾಳೆ ವಿಜಯ್ ಗೆ ಪ್ರಮಾಣ ವಚನ ಬೋಧಿಸುವ ಸಾಧ್ಯತೆ ಇದೆ. ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ವಿಜಯ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯ ಸಂಪರ್ಕದಲ್ಲಿದ್ದಾರೆ.