ಮಂಡ್ಯ: ಕರ್ನಾಟಕದಲ್ಲಿ ತೀವ್ರ ಬರಗಾಲವಿದ್ದರೂ ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ರಾಜ್ಯಕ್ಕೆ ಆಘಾತ ನೀಡಿದೆ. ತಮಿಳುನಾಡಿಗೆ ಪ್ರತಿನಿತ್ಯ 3,500 ಕ್ಯೂಸೆಕ್ನಂತೆ 15 ದಿನಗಳ ಕಾಲ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ. CWRC ಆದೇಶ ಹೊರ ಬೀಳುತ್ತಿದ್ದಂತೆ ರಾಜ್ಯದಲ್ಲಿ ರೈತರು ಸಿಡಿದೆದ್ದಿದ್ದಾರೆ.
ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ CWRC, ಪ್ರತಿ ದಿನ 3,500 ಕ್ಯೂಸೆಕ್ನಂತೆ 15 ದಿನಗಳ ಕಾಲ ಒಟ್ಟು 4 ಟಿಎಂಸಿ ಗಳಷ್ಟು ನೀರು ತಮಿಳುನಾಡಿಗೆ ಹರಿಸಲು ಆದೇಶ ನೀಡಿದೆ. ಇದಕ್ಕೆ ಕರ್ನಾಟಕ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೇ ಮಂಡ್ಯ ಭಾಗದ ರೈತರ ಆಕ್ರೋಶ ಭುಗಿಲೆದ್ದಿದೆ.
CWRC ಆದೇಶಕ್ಕೆ ತೀವ್ರವಾಗಿ ವಿರೋಧಿಸಿರುವ ಕಾವೇರಿ ಕೊಳ್ಳದ ರೈತರು ಮಂಡ್ಯದಲ್ಲಿ ಬೀದಿಗಿಳುದು ಹೋರಾಟ ನಡೆಸುತ್ತಿದ್ದಾರೆ. ರಸ್ತೆಗಳಲ್ಲಿಯೇ ಉರುಳು ಸೇವೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಕ್ತ ಹೋದರು ನೀರು ಬಿಡಲ್ಲ ಎಂದು ಕಿಡಿಕಾರಿದ್ದಾರೆ.
ಮಂಡ್ಯದ ಸಂಜಯ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ಕುಡಿಯಲು ನೀರಿಲ್ಲ. ಬೆಳೆಗಳಿಗೂ ನೀರಿಲ್ಲದೇ ಒಣಗುತ್ತಿವೆ. ಇಂತಹ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಕೊಡಿ ಎಂದು ಹೇಳಿದರೆ ಎಲ್ಲಿಂದ ಕೊಡುವುದು. CWRC ಆದೇಶ ರಾಜ್ಯದ ರೈತರಿಗೆ ಮರಣ ಶಾಸನವಾಗುತ್ತಿದೆ. ಕರ್ನಾಟಕದ ರೈತರ ಸ್ಥಿತಿಯನ್ನು ಮಾನವೀಯತೆಯಿಂದಲಾದರೂ ನೋಡುವುದು ಬೇಡವೇ? ಎಂದು ಗುಡುಗಿದ್ದಾರೆ.
ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿರುವುದರಿಂದ ನೀರಿಗಾಗಿ ಜನ-ಜಾನುವಾರುಗಳು ಪರಿತಪಿಸುತ್ತಿರುವ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡಿ ಎಂದು ಹೇಳುವುದು ಯಾವ ನ್ಯಾಯ? ಮಳೆ ಇಲ್ಲ, ಬೆಳೆ ಇಲ್ಲ. ಇಂತಹ ಸ್ಥಿತಿಯಲ್ಲಿ ರಾಜ್ಯ ಸರ್ಕಾತ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಒಂದು ಹನಿ ನೀರು ಬಿಡಬಾರದು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಈಗಲೇ ಮನವಿ ಮಾಡುತ್ತಿದ್ದೇವೆ. ರಾಜ್ಯದ ರೈತರ ಸಂಕಷ್ಟ ಆಲಿಸಿ ಎಂದಿದ್ದಾರೆ.
ಒಂದೇ ಒಂದು ಹನಿ ನೀರು ತಮಿಳುನಾಡಿಗೆ ಬಿಟ್ಟರೆ ಬೆಂಗಳೂರಿಗೆ ನೀರು ಪೂರೈಕೆಯಾಗುತ್ತಿರುವ ಕಾವೇರಿ ನೀರಿನ ಪೈಪ್ ಲೈನ್ ಒಡೆದು ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇಲ್ಲಿನ ರೈತರು ಬೆಳೆಗಳಿಗಲ್ಲ, ಕುಡಿಯಲು ನೀರಲ್ಲದೇ ಸಾಯುವ ಸ್ಥಿತಿ ಬಂದಿದೆ. ಇಂತಹ ಸಂಕಷ್ಟದಲ್ಲಿ ನೀರು ಕೊಡಲು ಬಿಡುವುದಿಲ್ಲ. CWRCಗೆ ರಾಜ್ಯ ಸರ್ಕಾರ ಕರ್ನಾಟಕದ ರೈತರ ಸ್ಥಿತಿ, ಬರಗಾಲದ ಸ್ಥಿತಿಯನ್ನು ಮನವರಿಕೆ ಮಾಡಬೇಕು. ರಾಜ್ಯದ ರೈತರ ಹಿತ ಕಾಯಬೇಕು. ರೈತರು ರಕ್ತ ಕೊಟ್ಟರೂ ಈ ಬಾರಿ ನೀರು ಮಾತ್ರ ಬಿಡುವುದಿಲ್ಲ. ಇಷ್ಟಾದರೂ ನೀರು ಬಿಟ್ಟರೆ ಸರ್ಕಾರದ ಕಲ್ಪನೆಗೂ ಮೀರಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.