ದಾವಣಗೆರೆ: ನಗರದ ಬೀಡಿ ಲೇಔಟ್ನಲ್ಲಿ ಕಳೆದ ಭಾನುವಾರ ತಡರಾತ್ರಿ ಎರಡು ಕುಟುಂಬಗಳ ನಡುವೆ ನಡೆದಿದ್ದ ರಕ್ತಸಿಕ್ತ ಗಲಭೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನೊಬ್ಬ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಕೊನೆಯುಸಿರೆಳೆದಿದ್ದಾನೆ.
ಬೀಡಿ ಲೇಔಟ್ನ ಹೆಚ್ಕೆಜಿಎನ್ ಶಾದಿ ಮಹಲ್ ಸಮೀಪದ ನಿವಾಸಿ ಮೊಹಮ್ಮದ್ ಹುಸೇನ್ (23) ಮೃತ ದುರ್ದೈವಿ. ಘಟನೆಯಿಂದಾಗಿ ಆಜಾದ್ ನಗರ ಠಾಣಾ ವ್ಯಾಪ್ತಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಕಣ್ಗಾವಲು ಏರ್ಪಡಿಸಲಾಗಿದೆ.
ಹಳೇ ದ್ವೇಷವೇ ಮಾರಾಮಾರಿಗೆ ಕಾರಣ
ಸೆಪ್ಟೆಂಬರ್ 6ರ ತಡರಾತ್ರಿ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ವಾಗ್ವಾದ ತೀವ್ರ ಹೊಡೆದಾಟಕ್ಕೆ ತಿರುಗಿತ್ತು. ಬುತ್ತಿ ಮೊಯ್ದಿನ್ ಕುಟುಂಬ ಹಾಗೂ ಮತ್ತೊಂದು ಕುಟುಂಬದ ನಡುವೆ 2025ರಲ್ಲೇ ವೈಯಕ್ತಿಕ ವಿಚಾರವಾಗಿ ಪರಸ್ಪರ ದೂರು-ಪ್ರತಿದೂರು ದಾಖಲಾಗಿದ್ದವು. ನ್ಯಾಯಾಲಯಕ್ಕೆ ಹಾಜರಾಗುವ ಸಂದರ್ಭದಲ್ಲಿ ಉಂಟಾಗಿದ್ದ ಮಾತಿನ ಚಕಮಕಿ ಮತ್ತು ನಿಂದನೆಯೇ ಈ ಮಾರಣಾಂತಿಕ ಹಲ್ಲೆಗೆ ದಾರಿಯಾಗಿದೆ ಎಂದು ತಿಳಿದುಬಂದಿದೆ.
ಆ ರಾತ್ರಿ ನಡೆದ ಮಾರಾಮಾರಿಯಲ್ಲಿ ಒಟ್ಟು ಐವರು ಗಾಯಗೊಂಡಿದ್ದರು. ನಾಲ್ವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ತಲೆಗೆ ಮಾರಣಾಂತಿಕ ಪೆಟ್ಟು ಬಿದ್ದಿದ್ದ ಮೊಹಮ್ಮದ್ ಹುಸೇನ್ನ ಸ್ಥಿತಿ ಚಿಂತಾಜನಕವಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೆದುಳಿಗೆ ತೀವ್ರ ಹಾನಿಯಾಗಿದ್ದ ಕಾರಣ ಆತ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ.
ಮನೆಯ ಬಳಿ ಹೆಚ್ಚಿದ ಆಕ್ರಂದನ, ಭದ್ರತೆ ಹೆಚ್ಚಳ
ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತದೇಹವು ಸಂಜೆ ವೇಳೆ ದಾವಣಗೆರೆಗೆ ಆಗಮಿಸುತ್ತಿದ್ದಂತೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮೃತನ ನಿವಾಸ ಹಾಗೂ ಬೀಡಿ ಲೇಔಟ್ ಸುತ್ತಮುತ್ತ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
ಎಸ್ಪಿ ಶೇಖರ್ ಹೆಚ್.ಟಿ ಪ್ರತಿಕ್ರಿಯೆ
ಪ್ರಕರಣದ ಕುರಿತು ಮಾಹಿತಿ ನೀಡಿರುವ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಶೇಖರ್ ಹೆಚ್.ಟಿ, "ಎರಡು ಕುಟುಂಬಗಳ ಹಳೇ ವೈಷಮ್ಯದಿಂದಾಗಿ ಈ ಘರ್ಷಣೆ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಮೊಹಮ್ಮದ್ ಹುಸೇನ್ ನಿಮ್ಹಾನ್ಸ್ನಲ್ಲಿ ಸಾವನ್ನಪ್ಪಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಜಾದ್ ನಗರ ಠಾಣೆಯಲ್ಲಿ 15ಕ್ಕೂ ಹೆಚ್ಚು ಜನರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಈಗಾಗಲೇ ಆರು ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳನ್ನು ಶೀಘ್ರದಲ್ಲೇ ಸೆರೆಹಿಡಿಯಲಾಗುವುದು" ಎಂದು ಸ್ಪಷ್ಟಪಡಿಸಿದ್ದಾರೆ.