ಬೆಂಗಳೂರು: ರಾಜ್ಯದಲ್ಲಿ ಪಡಿತರ ಚೀಟಿ (Ration Card) ದುರ್ಬಳಕೆ ತಡೆಯಲು ಹಾಗೂ ಮಾಹಿತಿಯನ್ನು ನಿಖರಗೊಳಿಸಲು ರಾಜ್ಯ ಸರ್ಕಾರವು ಇ-ಕೆವೈಸಿ (E-KYC) ಮಾಡಿಸುವುದನ್ನು ಕಡ್ಡಾಯಗೊಳಿಸಿದೆ. ಇದಕ್ಕೆ ಸೆಪ್ಟೆಂಬರ್ 30ರ ವರೆಗೆ ಗಡುವು ನೀಡಲಾಗಿದ್ದು, ಈ ನಿಗದಿತ ಅವಧಿಯೊಳಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಪಡಿತರ ಚೀಟಿ ರದ್ದಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ, ಪ್ರಸ್ತುತ ಉಚಿತವಾಗಿ ಸಿಗುತ್ತಿರುವ ಅಕ್ಕಿ ಸೇರಿದಂತೆ ಯಾವುದೇ ಆಹಾರ ಪದಾರ್ಥಗಳ ಪೂರೈಕೆ ಸಂಪೂರ್ಣ ಬಂದ್ ಆಗಲಿದೆ.
ಇ-ಕೆವೈಸಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಮಹತ್ವದ ಸ್ಪಷ್ಟನೆ ನೀಡಿದ್ದು, ಇ-ಕೆವೈಸಿ ಮಾಡಿಸಲು ಎಲ್ಲರಿಗೂ ಜಾತಿ ಪ್ರಮಾಣ ಪತ್ರ ಕಡ್ಡಾಯವಲ್ಲ ಎಂದು ತಿಳಿಸಿದೆ. SC/ST ಸಮುದಾಯಕ್ಕೆ ಸೇರಿದವರು ಮಾತ್ರ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕಿದ್ದು, ಉಳಿದಂತೆ ಆಧಾರ್ ಕಾರ್ಡ್, ಆಧಾರ್ಗೆ ಲಿಂಕ್ ಆದ ಮೊಬೈಲ್ ಸಂಖ್ಯೆ ಹಾಗೂ LPG ಸಿಲಿಂಡರ್ ಗ್ರಾಹಕರ ಬುಕ್ಗಳನ್ನು ಕಡ್ಡಾಯವಾಗಿ ಒದಗಿಸಬೇಕಾಗಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳಗ್ಗೆ 7 ರಿಂದ ರಾತ್ರಿ 10ರ ವರೆಗೆ ಉಚಿತವಾಗಿ ಇ-ಕೆವೈಸಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನ ನಿವಾಸಿಗಳು ಹತ್ತಿರದ GBA ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲೂ ಈ ಸೇವೆ ಪಡೆಯಬಹುದು. ಕೊನೆಯ ದಿನಗಳಲ್ಲಿ ಸರ್ವರ್ ಸಮಸ್ಯೆಯಿಂದ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಮುಂಚಿತವಾಗಿ ಪ್ರಕ್ರಿಯೆ ಮುಗಿಸಿಕೊಳ್ಳಲು ಅಧಿಕಾರಿಗಳು ಸೂಚಿಸಿದ್ದಾರೆ. ಒಂದು ವೇಳೆ ಬೆರಳಚ್ಚು (Fingerprint) ಹೊಂದಾಣಿಕೆಯಾಗದಿದ್ದರೆ, ಆಧಾರ್ ಕೇಂದ್ರದಲ್ಲಿ ಅಪ್ಡೇಟ್ ಮಾಡಿದ 15 ದಿನಗಳ ನಂತರ ಮತ್ತೆ ಇ-ಕೆವೈಸಿ ಮಾಡಿಕೊಳ್ಳಬಹುದು.
ಮನೆಯಲ್ಲೇ ಕುಳಿತು ಇ-ಕೆವೈಸಿ ಹಾಗೂ ಸ್ಟೇಟಸ್ ಚೆಕ್ ಮಾಡುವ ಸರಳ ವಿಧಾನ:
ಆಧಾರ್ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಸಾರ್ವಜನಿಕರು ಗೂಗಲ್ ಪ್ಲೇ ಸ್ಟೋರ್ನಿಂದ 'Mera Ration' ಹಾಗೂ 'Aadhaar FaceRD' ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಂಡು ಆನ್ಲೈನ್ ಮೂಲಕವೇ ಇ-ಕೆವೈಸಿ ಪೂರ್ಣಗೊಳಿಸಬಹುದು. ಇದಲ್ಲದೆ, ಇ-ಕೆವೈಸಿ ಆಗಿದೆಯೇ ಎಂದು ತಿಳಿಯಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ (ahara.kar.nic.in) ಮೂಲಕ 'ಇ-ಸೇವೆಗಳು' ಆಯ್ಕೆಯಲ್ಲಿ ನಿಮ್ಮ 12 ಅಂಕಿಯ ರೇಷನ್ ಕಾರ್ಡ್ ನಂಬರ್ ನಮೂದಿಸಿ RC Status ಪರಿಶೀಲಿಸಬಹುದು. ಅಲ್ಲಿ ಹೆಸರುಗಳ ಮುಂದೆ 'Success' ಎಂದು ಹಸಿರು ಬಣ್ಣದಲ್ಲಿದ್ದರೆ ಇ-ಕೆವೈಸಿ ಪೂರ್ಣಗೊಂಡಿದೆ ಎಂದರ್ಥ.