ಬೆಂಗಳೂರು: ಆರೆಸ್ಸೆಸ್ನಂತಹ ನೂರು ಸಂಘಟನೆಗಳು ಬಂದರೂ ಈ ದೇಶವನ್ನು ಹಾಳು ಮಾಡಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿರುವ ಹಿಂದುಳಿದವರು, ದಲಿತರು ಹಾಗೂ ಅಲ್ಪಸಂಖ್ಯಾತರು ಈ ದೇಶದ ಆತ್ಮವಿದ್ದಂತೆ, ಅವರೇ ಈ ದೇಶವನ್ನು ಕಾಯುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ. ನಗರದ ಗಾಂಧಿ ಭವನದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕುರಿತು ಬರೆಯಲಾದ "ಅರೆಸ್ಸೆಸ್ ಕುದುರೆ ಕಟ್ಟಿಹಾಕಿದ ಖಂಬರ" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಆರೆಸ್ಸೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಆರೆಸ್ಸೆಸ್ ಎಂದರೆ ರೂಮರ್ಗಳನ್ನು ಹಬ್ಬಿಸುವ ಸಂಘಟನೆ ಎಂದು ವ್ಯಂಗ್ಯವಾಡಿದರು. ದಕ್ಷಿಣ ಭಾರತೀಯರಾದ ನಾವೆಲ್ಲರೂ ಪುಣ್ಯವಂತರು. ಮಹಾರಾಷ್ಟ್ರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್, ಕರ್ನಾಟಕದಲ್ಲಿ ಜಗಜ್ಯೋತಿ ಬಸವಣ್ಣ, ಕೇರಳದಲ್ಲಿ ನಾರಾಯಣಗುರು ಹಾಗೂ ತಮಿಳುನಾಡಿನಲ್ಲಿ ತಂದೈ ಪೆರಿಯಾರ್ ಸೇರಿದಂತೆ ಹಲವು ಮಹಾನ್ ಸಾಮಾಜಿಕ ಹರಿಕಾರರು ಹುಟ್ಟಿ ದಕ್ಷಿಣ ಭಾರತವನ್ನು ಸುಧಾರಿಸಿದ್ದಾರೆ ಎಂದು ಸ್ಮರಿಸಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಚಾಟಿ ಬೀಸಿದ ಅವರು, ಮಹಾತ್ಮ ಗಾಂಧೀಜಿಯವರ ಹತ್ಯೆಯಾದಾಗ ಸರ್ದಾರ್ ವಲ್ಲಭಬಾಯಿ ಪಟೇಲರು ಪ್ರಥಮ ಬಾರಿಗೆ ಆರೆಸ್ಸೆಸ್ ಅನ್ನು ನಿಷೇಧಿಸಿದ್ದರು. ಪ್ರಧಾನಿ ಮೋದಿ ಅವರು ಇಂದು 3 ಸಾವಿರ ಕೋಟಿ ರೂ. ವೆಚ್ಚ ಮಾಡಿ ಪಟೇಲರ ಬೃಹತ್ ಪ್ರತಿಮೆ ಸ್ಥಾಪಿಸಿ ಗೌರವಿಸಿದ್ದಾರೆ ಎಂದರೆ, ಪಟೇಲರು ಅಂದು ಆರೆಸ್ಸೆಸ್ ನಿಷೇಧಿಸಿದ್ದು ಸರಿ ಎಂದೇ ಮೋದಿ ಅವರಿಗೂ ಅನಿಸಿದಂತಿದೆ ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದರು. ಸಾಹಿತಿ ಬಂಜಗೆರೆ ಜಯಪ್ರಕಾಶ್ ಮಾತನಾಡಿದ ಈ ಕಾರ್ಯಕ್ರಮದಲ್ಲಿ ಶಾಸಕ ಎಂ.ವೈ. ಪಾಟೀಲ್, ಪುಸ್ತಕದ ಸಂಪಾದಕಿ ರೇಣುಕಾ ಶಿಂಗೆ, ಸಿಪಿಎಂ ರಾಜ್ಯ ಕಾರ್ಯದರ್ಶಿ ಕೆ. ಪ್ರಕಾಶ್ ಹಾಗೂ ಜಗದೀಶ್ ಗುತ್ತೇದಾರ್ ಉಪಸ್ಥಿತರಿದ್ದರು.