ಬೆಂಗಳೂರು, ಜು.16: ಕರ್ನಾಟಕ ಸರ್ಕಾರವು 2026-27ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಿದ್ದ ಆದೇಶವನ್ನು ಹಿಂಪಡೆದಿದೆ. ಈ ಮೂಲಕ ಜುಲೈ 15ರಂದು ಹೊರಡಿಸಿದ್ದ ವಿಸ್ತರಣೆಯ ಆದೇಶವು ತಕ್ಷಣದಿಂದಲೇ ಅಮಾನ್ಯವಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-3) ಈ ಕುರಿತು ಜುಲೈ 16ರಂದು ಹೊಸ ಸರ್ಕಾರಿ ಆದೇಶ ಹೊರಡಿಸಿದೆ. ಈ ಹಿಂದೆ 2026-27ನೇ ಸಾಲಿನ ಸಾರ್ವತ್ರಿಕ ವರ್ಗಾವಣೆಯನ್ನು ಏಪ್ರಿಲ್ 15ರಿಂದ ಮೇ 31, 2026ರವರೆಗೆ ನಡೆಸಲು ಏಪ್ರಿಲ್ 13ರಂದು ಸರ್ಕಾರ ಅನುಮತಿ ನೀಡಿತ್ತು. ಬಳಿಕ ವಿವಿಧ ಹಂತಗಳಲ್ಲಿ ಆದೇಶಗಳನ್ನು ಹೊರಡಿಸಿ, ಕೊನೆಯದಾಗಿ ಜುಲೈ 15ರಂದು ವರ್ಗಾವಣೆ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಲಾಗಿತ್ತು.
ಆದರೆ, ಕಾರಣಾಂತರಗಳಿಂದ ಈ ವಿಸ್ತರಣೆಯನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ, ಜುಲೈ 15ರ ಸರ್ಕಾರಿ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದರೊಂದಿಗೆ, ಜುಲೈ 31ರವರೆಗೆ ವರ್ಗಾವಣೆ ಪ್ರಕ್ರಿಯೆ ನಡೆಸುವ ಅವಕಾಶ ಇನ್ನು ಇರುವುದಿಲ್ಲ. ಏಪ್ರಿಲ್ 13ರಂದು ಹೊರಡಿಸಿದ್ದ ಮೂಲ ಆದೇಶದಲ್ಲಿನ ಷರತ್ತು ಹಾಗೂ ನಿರ್ಬಂಧಗಳೇ ಅನ್ವಯವಾಗಲಿವೆ. ಸರ್ಕಾರದ ಉಪ ಕಾರ್ಯದರ್ಶಿ ಎಸ್.ಆರ್. ಶಿವಶಂಕರ್ ಅವರು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಈ ಆದೇಶಕ್ಕೆ ಸಹಿ ಹಾಕಿದ್ದಾರೆ.
