ಬೆಂಗಳೂರು: ನಟ ದರ್ಶನ್ ಅವರ ಪುತ್ರ ವಿನೀಶ್ ಪ್ರಯಾಣಿಸುತ್ತಿದ್ದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿ ಕೆಲಕಾಲ ಗಲಾಟೆ ನಡೆದ ಘಟನೆ ಕೂಡ ನಡೆದಿದೆ. ಈ ವೇಳೆ ಸ್ಥಳೀಯರು ಹಾಗೂ ವಿನೀಶ್ ನಡುವೆ ವಾಗ್ವಾದ ನಡೆದಿದೆ.
ಬೆಂಗಳೂರಿನ ಆರ್.ಆರ್. ನಗರದ ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ವೇಳೆ ವಿನೀಶ್ ಕಾರು ಓಡಿಸುತ್ತಿದ್ದರು ಎನ್ನಲಾಗಿತ್ತು. ಆದರೆ ನಿನೀಷ್ ಕಾರು ಓಡಿಸುತ್ತಿರಲಿಲ್ಲ. ಚಾಲಕ ಕಾರು ಓಡಿಸುತ್ತಿದ್ದು, ವಿನೀಶ್ ಪಕ್ಕದ ಸೀಟ್ ನಲ್ಲಿ ಕುಳಿತಿದ್ದರು ಎಂದು ತಿಳಿದುಬಂದಿದೆ.
ವಿನೀಶ್ ಅವರು KA01 MU9969 ಸಂಖ್ಯೆಯ ಫೋರ್ಡ್ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರು ಅಪಘಾತವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸದ್ಯಕ್ಕೆ ಪೊಲೀಸ್ ಠಾಣೆಯಲ್ಲಿ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.
ಅಪಘಾತಕ್ಕೆ ಸಂಬಂಧಿಸಿದಂತೆ ವಿನೀಶ್ ತಾಯಿ ವಿಜಯಲಕ್ಷ್ಮೀ ದರ್ಶನ್ ಸ್ಪಷ್ಟನೆ ನೀಡಿದ್ದಾರೆ. ವಿನೀಶ್ಗೆ ದೊಡ್ಡ ಅಪಘಾತವಾಗಿದೆ ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹರಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು. ವಿನೀಶ್ ಸುರಕ್ಷಿತವಾಗಿದ್ದಾನೆ ಮತ್ತು ಆರಾಮಾಗಿದ್ದಾನೆ. ಎಂದಿನಂತೆ ನಮ್ಮ ಚಾಲಕನೇ ಕಾರನ್ನು ಚಲಾಯಿಸುತ್ತಿದ್ದನು. ವಿನೀಶ್ ವಾಹನ ಚಲಾಯಿಸುತ್ತಿರಲಿಲ್ಲ. ಬೆಂಗಳೂರಿನ ಟ್ರಾಫಿಕ್ನಲ್ಲಿ ಸಾಮಾನ್ಯ ಎನ್ನುವಂತಹ ಒಂದು ಸಣ್ಣ ರಸ್ತೆ ಅಪಘಾತ ಸಂಭವಿಸಿದೆ ಅಷ್ಟೆ. ಎದುರಿಗಿದ್ದ ಬೈಕ್ ಸವಾರರು ಕೂಡ ತಮ್ಮದೇ ತಪ್ಪು ಎಂದು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಬೈಕ್ನಲ್ಲಿದ್ದವರು ಸುರಕ್ಷಿತವಾಗಿದ್ದಾರೆಯೇ ಎಂದು ನೋಡಲು ವಿನೀಶ್ ಕಾರಿನಿಂದ ಕೆಳಗಿಳಿದಿದ್ದನು. ಆದರೆ ಆ ಕೆಲವು ಕ್ಷಣಗಳ ದೃಶ್ಯಗಳನ್ನು ಸಂದರ್ಭಕ್ಕೆ ತಕ್ಕುದಲ್ಲದ ರೀತಿಯಲ್ಲಿ ಮತ್ತು ತಪ್ಪು ದಾರಿಗೆಳೆಯುವಂತೆ ಬಿಂಬಿಸಲಾಗಿದೆ. ಯಾರು ಕೂಡ ಇಂತಹ ಸುಳ್ಳು ವರದಿಗಳನ್ನು ನಂಬಬೇಡಿ ಮತ್ತು ಶೇರ್ ಮಾಡಬೇಡಿ ಎಂದು ವಿಜಯಲಕ್ಷ್ಮೀ ತಿಳಿಸಿದ್ದಾರೆ.