ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ರೈತರ ನಡುವೆ ಬಂದು ಚರ್ಚೆ ಮಾಡಲು ನಾನು ಈಗಲೂ ಸಿದ್ಧ. ನನ್ನ ಪತ್ರಗಳಿಗೆ ಮುಖ್ಯಮಂತ್ರುಇಗಳು ಯಾವುದೇ ಉತ್ತರ ನೀಡಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಬಿಡದಿ ಟೌನ್ ಶಿಪ್ ವಿಚಾರವಾಗಿ ಸಿಎಂ ಈ ಸಂಬಂಧ ಚರ್ಚೆಗೆ ಬರುವಂತೆ ನಾನು ಪತ್ರ ಬರೆದೆ, ಉತ್ತರ ಬಂದಿಲ್ಲ. ರೈತರ ನಡುವೆ ಬಂದು ಚರ್ಚೆ ಮಾಡುವುದಕ್ಕೆ ನಾನು ಈಗಲೂ ಸಿದ್ದ ಎಂದರು.
ಬಿಡದಿಯಲ್ಲಿ ಭೂಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. ಅದರ ವಿರುದ್ಧ 475 ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಇದು ಅಂತಿಮವಾಗಿ ನ್ಯಾಯಾಲಯದಲ್ಲೇ ತೀರ್ಮಾನ ಆಗಬೇಕು ಅಲ್ಲಿನ ಜನರ ಭಾವನೆಗಳ ಜತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಪ್ರತಿಷ್ಠೆ ಇಟ್ಟುಕೊಂಡು ಹೊರಟಿದ್ದಾರೆ. ಸಾವಿರಾರು ಕೋಟಿ ಅಕ್ರಮಕ್ಕೆ ಬಾಗಿಲು ತೆರೆದಿದ್ದಾರೆ. ನಾಡಿನಲ್ಲಿ ಹಲವಾರು ಭಾಗಗಳಿಂದ ಬೆಂಬಲ ಸಿಕ್ಕಿದೆ ಎಂದು ಹೇಳಿದರು.
ರಾಜ್ಯದಲ್ಲಿ ಭೂಸ್ವಾಧೀನ ಪ್ರಕ್ರಿಯೆಗಳು ನಡೆಯುತ್ತಿವೆ. ಫಲವತ್ತಾದ ಭೂಮಿಯನ್ನು ಅಭಿವೃದ್ಧಿ ಹೆಸರಲ್ಲಿ ವಶಪಡಿಸಿಕೊಂಡು, ರೈತರ ಜೀವನದಲ್ಲಿ ಚೆಲ್ಲಾಟವಾಡಬಾರದು. ಬೆಳೆ ಬೆಳೆಯುವುದಕ್ಕೆ ಆಗುವುದಿಲ್ಲ, ಸರ್ಕಾರದ ಭೂಮಿ ಹಲವು ಕಡೆ ಇದೆ. ಸರ್ಕಾರಿ ಭೂಮಿಗಳನ್ನು ಲಪಟಾಯಿಸಲು ಮಧ್ಯವರ್ತಿಗಳಿಗೆ ಸರ್ಕಾರ ಬೆಂಬಲ ಕೊಡುತ್ತಿದೆ. ಇವತ್ತು ಆ ಭಾಗಗಳಲ್ಲಿ ಮಾಡಲಿ ಎಂಬುದು ನನ್ನ ಅಭಿಪ್ರಾಯ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಸಿಎಂ ಆಗ್ತಿದ್ದಂತೆ ಜೆಡಿಎಸ್ ಆಕ್ಟೀವ್ ಎಂಬ ಕಾಂಗ್ರೆಸ್ ಟೀಕೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನನ್ನ ಹೋರಾಟ ಡಿ.ಕೆ.ಶಿವಕುಮಾರ್ ವಿರುದ್ಧವಲ್ಲ. ಡಿ.ಕೆ.ಶಿವಕುಮಾರ್ ಆ ಭಾಗದ ರೈತರನ್ನು ಯಾವ ಪರಿಸ್ಥಿತಿಗೆ ತಂದಿದ್ದಾರೆ ಎಂಬುದರ ವಿರುದ್ಧ ನಮ್ಮ ಹೋರಾಟ. ಇದು ಯಾರೋ ಒಬ್ಬ ವ್ಯಕ್ತಿಯ ವಿರುದ್ಧದ ಹೋರಾಟವಲ್ಲ. 1,119 ಕೋಟಿ ರೂ ವೆಚ್ಚದಲ್ಲಿ ಸುರಂಗ ಮಾರ್ಗದ ರಸ್ತೆ, ಅದೇನೋ ಕನಸು ಅಂತೆ. ನಾನು ಸಿಎಂ ಆಗಿದ್ದಾಗ ಒಂದು ಕಂಪನಿ ಮೂಲಕ ಅವತ್ತೇ ಎಲ್ಲಾ ರೀತಿಯ ಸಿದ್ದತೆ ಮಾಡಿದ್ದೆ. ಆದರೆ ಅವಾಗ ನನ್ನ ಸರ್ಕಾರ ಹೋಯ್ತು ಎಂದರು.
ಈ 20 ವರ್ಷಗಳಲ್ಲಿ 1,100 ಕೋಟಿಗೆ ಏರಿಕೆ ಆಗಿದೆ. ಅವತ್ತು ನಾನು ಕೇವಲ 20 ಕೋಟಿಗೆ ಮಾಡುತ್ತಿದ್ದೆ. ಇದಕ್ಕೆ ಯಾರು ಜವಾಬ್ದಾರರು? ಬೆಂಗಳೂರಿನ ಜನರ ತೆರಿಗೆ ಹಣ. ಸರಿಯಾದ ಸಮಯಕ್ಕೆ ಸರಿಯಾದ ತೀರ್ಮಾನ ತೆಗೆದುಕೊಳ್ಳದೇ ಜನರನ್ನು ಸಮಸ್ಯೆಗೆ ದೂಡಿದ್ದೀರಿ. ಸುರಂಗ ಮಾರ್ಗ, ಅಲ್ಲಿ ಏನಿದೆ ಅಂತಾ ಆಮೇಲೆ ಹೇಳುತ್ತೇನೆ. ಇದು ವ್ಯಕ್ತಿಯ ವಿರುದ್ಧ ಅಲ್ಲ, ಕೆಲಸ ಮಾಡುವುದಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ. ನಾಡಿನ ಅಭಿವೃದ್ಧಿಯನ್ನು ಪ್ರಾಮಾಣಿಕವಾಗಿ ಮಾಡಲಿ ಎಂದರು.
ಇದೇ ವೇಳೆ ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ ಅಕ್ಬರ್-ಬೀರ್ಬಲ್ ಕಥೆಗೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಅಯ್ಯೋ ರಾಮನೇ ಹೊಟ್ಟೆ ಹಿಸುಕಿಕೊಳ್ಳುವುದು ಬೇಡ್ವಾ? ಬರೀ ಕೈ ಹಿಸುಕಿಕೊಳ್ತಾರಾ? ಏನು ಇದೆಲ್ಲಾ ಶಾಶ್ವತವೇ? ಇದೆಲ್ಲ ನಾನು ನೋಡಿ, ಬಿಟ್ಟು ಆಗಿದೆ. ಎರಡು ಬಾರಿ ಈ ಸಿಎಂ ಚೇರ್ ಮೇಲೆ ಕುಳಿತು ಎಲ್ಲಾ ಅನುಭವಿಸಿ ಆಗಿದೆ. ಏನೋ ದೇವರು ಕೊಟ್ಟ ಅನುಗ್ರಹದಲ್ಲಿ ಮಾಡಿದ್ದೇವೆ. ಆದರೆ ಈ ರೀತಿ ನಿಮ್ಮ ಉದ್ಧಟತನಕ್ಕೆ ನಾವು ಏನು ಮಾಡಿಲ್ಲ. ನನಗೆ ಅಕ್ಬರ್-ಬೀರ್ಬಲ್ ಕಥೆ ಬೇಕಿಲ್ಲ. ರಾಜ್ಯದ ಜನತೆಯ ಕಥೆ ಹೇಳಿ, ಅದನ್ನು ಬೇಕಿದ್ದರೆ ಒಪ್ಪಿಕೊಳ್ಳುತ್ತೇನೆ. ನಿಮ್ಮ ಅಕ್ಬರ್-ಬೀರ್ಬಲ್ ಕಥೆ ಕಟ್ಟಿಕೊಂಡು ನನಗೇನು ಆಗಬೇಕು? ನಾಯಕನಾಗಿ ಬೆಳೆಯುವುದಕ್ಕೆ ಜನರು ಈವಾಗ ಪೆನ್ನು, ಪೇಪರ್ ಕೊಟ್ಟಿಲ್ವಾ? ನಾನು ಯಾಕೆ ಅಸೂಯೆ ಪಡಲಿ, ಒಳ್ಳೆಯ ಕೆಲಸ ಮಾಡಿದರೆ ಅಭಿನಂದಿಸುತ್ತೇವೆ ಎಂದರು.