ಬೆಂಗಳೂರು: ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಅವರು ಬ್ಯಾಕ್-ಟು-ಬ್ಯಾಕ್ ಸಿನಿಮಾಗಳ ಮೂಲಕ ಸಖತ್ ಬ್ಯುಸಿಯಾಗಿದ್ದಾರೆ. ಕೇವಲ ನಾಯಕನಾಗಿ ಮಾತ್ರವಲ್ಲದೆ, ಕಥೆಗೆ ತೂಕ ತರುವಂತಹ ವಿಶೇಷ ಪಾತ್ರಗಳಿಗೂ ಶಿವಣ್ಣ ಸೈ ಎನ್ನುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ, ನಟ ವಿಜಯ್ ರಾಘವೇಂದ್ರ ಅಭಿನಯದ ಬಹುನಿರೀಕ್ಷಿತ ಮಹಾನ್ ಚಿತ್ರದಲ್ಲಿ ಶಿವಣ್ಣ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಭೈರತಿ ರಣಗಲ್ ಚಿತ್ರದ ಯಶಸ್ಸಿನ ಬಳಿಕ ಶಿವರಾಜ್ಕುಮಾರ್ ಅವರು ಮತ್ತೊಮ್ಮೆ ಕಪ್ಪು ಕೋಟು ಧರಿಸಿ, ಹಿರಿಯ ವಕೀಲರಾಗಿ ಅಬ್ಬರಿಸಲಿದ್ದಾರೆ ಎಂಬ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಹಲವು ವರ್ಷಗಳ ನಂತರ ಶಿವಣ್ಣ ಹಾಗೂ ವಿಜಯ್ ರಾಘವೇಂದ್ರ ಒಂದೇ ಪರದೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಕುತೂಹಲವನ್ನು ದುಪ್ಪಟ್ಟು ಮಾಡಿದೆ.
ರೈತರ ಬದುಕು ಮತ್ತು ಸಾಮಾಜಿಕ ಜವಾಬ್ದಾರಿಯ ಕಥೆ
ಆಕಾಶ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪ್ರಕಾಶ್ ಬುದ್ದೂರು ನಿರ್ಮಿಸುತ್ತಿರುವ ಈ ಚಿತ್ರವನ್ನು ಖ್ಯಾತ ನಿರ್ದೇಶಕ ಪಿ.ಸಿ. ಶೇಖರ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ ರೈತರ ಬದುಕು, ಅವರ ಹೋರಾಟಗಳು ಮತ್ತು ಸಮಾಜದ ಜವಾಬ್ದಾರಿಯ ಸುತ್ತ ಸಾಗುವ ಒಂದು ಅರ್ಥಪೂರ್ಣ ಕಥಾಹಂದರವನ್ನು ಹೊಂದಿದೆ.
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಪಿ.ಸಿ. ಶೇಖರ್ ಮನೆಯಲ್ಲಿ ತಪ್ಪು ಮಾಡಿದಾಗ ತಿದ್ದಲು ಹೆತ್ತವರು ಇರುವಂತೆ ಸಮಾಜದಲ್ಲಿ ವ್ಯವಸ್ಥೆ ಹಳಿ ತಪ್ಪಿದಾಗ ಅದನ್ನು ಸರಿಪಡಿಸಲು ಒಬ್ಬ ಮಹಾನ್ ವ್ಯಕ್ತಿಯ ಅಗತ್ಯವಿರುತ್ತದೆ. ಅಂತಹ ಜವಾಬ್ದಾರಿಯುತ ಪಾತ್ರದಲ್ಲೇ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಇದು ಕೇವಲ ಅತಿಥಿ ಪಾತ್ರವಾಗಿರದೆ, ಚಿತ್ರದ ತಿರುವುಗಳಿಗೆ ಕಾರಣವಾಗುವ ಅತ್ಯಂತ ಪ್ರಮುಖ ಕೊಂಡಿಯಾಗಿದೆ,ಎಂದು ತಿಳಿಸಿದ್ದಾರೆ.
ನನ್ನ ಬಹುಕಾಲದ ಕನಸು ಈಡೇರಿದೆ
ಶಿವಣ್ಣ ಅವರ ಜೊತೆ ಕೆಲಸ ಮಾಡಿದ ಅನುಭವಕ್ಕೆ ಮಾರುಹೋಗಿರುವ ನಿರ್ದೇಶಕರು, “ಪ್ರತಿಯೊಬ್ಬ ನಿರ್ದೇಶಕನಿಗೂ ಶಿವರಾಜ್ಕುಮಾರ್ ಅವರಂತಹ ಲೆಜೆಂಡರಿ ಕಲಾವಿದರನ್ನು ನಿರ್ದೇಶಿಸಬೇಕೆಂಬ ಆಸೆ ಇರುತ್ತದೆ. ನನಗೂ ಅದು ಬಹಳ ವರ್ಷಗಳ ಹಂಬಲವಾಗಿತ್ತು, ಮಹಾನ್ ಚಿತ್ರದ ಮೂಲಕ ನನ್ನ ಆ ಕನಸು ನನಸಾಗಿದೆ. ಅವರು ನಮ್ಮ ಚಿತ್ರದ ಭಾಗವಾಗಿರುವುದು ಇಡೀ ತಂಡದ ಹೆಮ್ಮೆ ಎಂದು ನಿರ್ದೇಶಕ ಶೇಖರ್ ಹರ್ಷ ಕೃತಜ್ಞತೆ ಸಲ್ಲಿಸಿದ್ದಾರೆ.
ಸ್ಟಾರ್ ತಾರಾಗಣದ ಮಹಾನ್
ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ರಾಧಿಕಾ ನಾರಾಯಣ್, ಮಿತ್ರ, ನಮ್ರತಾ ಗೌಡ, ವರ್ಷ ಬೊಳ್ಳಮ್ಮ ಹಾಗೂ ಕಿರಣ್ ಶ್ರೀನಿವಾಸ್ ಸೇರಿದಂತೆ ಪ್ರಮುಖ ನಟರು ಬಣ್ಣ ಹಚ್ಚಿದ್ದಾರೆ. ಕಮರ್ಷಿಯಲ್ ಎಲಿಮೆಂಟ್ಗಳ ಜೊತೆಗೆ ಸಮಾಜಕ್ಕೊಂದು ಉತ್ತಮ ಸಂದೇಶ ನೀಡಲು ಹೊರಟಿರುವ ಮಹಾನ್, ಸ್ಯಾಂಡಲ್ವುಡ್ನಲ್ಲಿ ಸದ್ಯಕ್ಕಂತೂ ಭಾರೀ ಹೈಪ್ ಕ್ರಿಯೇಟ್ ಮಾಡುತ್ತಿದೆ.