ಶಿವಮೊಗ್ಗ : ಚಿಕಿತ್ಸೆಯ ಬಿಲ್ ಮರುಪಾವತಿ ಮಾಡದೆ ಸೇವಾ ನ್ಯೂನತೆ ಎಸಗಿದ ನಿವ ಭೂಪ ಹೆಲ್ತ್ ಇನ್ಶೂರೆನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ಹಾಗೂ ಬಡ್ಡಿ ಸಹಿತ ಪರಿಹಾರ ಪಾವತಿಸುವಂತೆ ಆದೇಶಿಸಿದೆ.
ಶಿವಮೊಗ್ಗ ಗಾಂಧಿ ಬಜಾರ್ನ ನಿವಾಸಿ ವಿವೇಕ ಸಿ.ಬಿ. ಎಂಬುವವರು 2021ರಲ್ಲಿ ರೂ. 53,854 ಪಾವತಿಸಿ, 2024 ರವರೆಗಿನ ಅವಧಿಗೆ ನಿವ ಭೂಪ ಹೆಲ್ತ್ ಇನ್ಸೂರೆನ್ಸ್ ಪಾಲಿಸಿ ಪಡೆದಿದ್ದರು. 2023ರಲ್ಲಿ ಅನಾರೋಗ್ಯದ ಕಾರಣ ಅವರು ಶಿವಮೊಗ್ಗದ ಅಶೋಕ ಸಂಜೀವಿನಿ ಆಸ್ಪತ್ರೆಯಲ್ಲಿ ಎರಡು ದಿನ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆಗೆ ರೂ. 25,000 ವರೆಗೆ ಕಂಪನಿಯು ಅನುಮೋದನೆ ನೀಡಿದ್ದರೂ, ಅಂತಿಮ ಬಿಲ್ ವೆಚ್ಚವಾದ ರೂ. 19,342 ಅನ್ನು ಆಸ್ಪತ್ರೆಗೆ ಪಾವತಿಸಿರಲಿಲ್ಲ.
ವಿಮಾ ಕಂಪನಿಯು ಹಲವು ಬಾರಿ ವಿನಂತಿಸಿಕೊಂಡರೂ ಹಾಗೂ 2025ರಲ್ಲಿ ಕಾನೂನು ನೋಟೀಸ್ ನೀಡಿದರೂ ಹಣ ಪಾವತಿಸದ ಕಾರಣ, ದೂರುದಾರರು ತಮ್ಮ ವಕೀಲರ ಮೂಲಕ ಜಿಲ್ಲಾ ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.ದೂರು ಮತ್ತು ದಾಖಲೆಗಳನ್ನು ಪರಿಶೀಲಿಸಿದ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಹಾಗೂ ಸದಸ್ಯರಾದ ಬಿ.ಡಿ. ಯೋಗಾನಂದ ಅವರನ್ನೊಳಗೊಂಡ ಪೀಠವು, ವಿಮಾ ಸಂಸ್ಥೆಯಿಂದ ಸೇವಾ ನ್ಯೂನತೆಯಾಗಿರುವುದು ಸಾಬೀತಾಗಿದೆ ಎಂದು ತೀರ್ಪು ನೀಡಿದ್ದು, ಈ ಕೆಳಗಿನಂತೆ ಆದೇಶಿಸಿದೆ:
ವಿಮಾ ಕಂಪನಿಯು ಚಿಕಿತ್ಸಾ ವೆಚ್ಚ ರೂ. 19,342 ಅನ್ನು ದಿನಾಂಕ 24/11/2023 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ. 8 ರಷ್ಟು ಬಡ್ಡಿಯೊಂದಿಗೆ 45 ದಿನಗಳ ಒಳಗಾಗಿ ಪಾವತಿಸಬೇಕು. ತಪ್ಪಿದ್ದಲ್ಲಿ ಶೇ. 10 ರಷ್ಟು ಬಡ್ಡಿಯೊಂದಿಗೆ ಸಂಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ದೂರುದಾರರಿಗೆ ಉಂಟಾದ ಮಾನಸಿಕ ಹಿಂಸೆಗೆ ರೂ. 10,000 ದಂಡ.ದೂರಿನ ಖರ್ಚಿಗಾಗಿ ಪ್ರತ್ಯೇಕವಾಗಿ ರೂ. 10,000 ಪಾವತಿಸಬೇಕು. ನಿವ ಭೂಪ ಕಂಪನಿಯ ನವದೆಹಲಿ, ಗುರುಗ್ರಾಮ್ ಹಾಗೂ ಶಿವಮೊಗ್ಗ ಶಾಖೆಯ ಅಧಿಕಾರಿಗಳು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ಈ ಪರಿಹಾರವನ್ನು ನೀಡಬೇಕೆಂದು ಆಯೋಗ ಸ್ಪಷ್ಟಪಡಿಸಿದೆ