ಶಿವಮೊಗ್ಗ: ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿ ಎಂದು ಸುಳ್ಳು ಹೇಳಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಗೆ ವಾಟ್ಸಾಪ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟು ವಂಚಿಸಲು ಯತ್ನಿಸಿದ್ದ ಆಂಧ್ರಪ್ರದೇಶ ಮೂಲದ ಆರೋಪಿಯನ್ನು ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಧನಂಜಯ ರೆಡ್ಡಿ(33) ಬಂಧಿತ ಆರೋಪಿ.
ಶಿವಮೊಗ್ಗ ಲೋಕೋಪಯೋಗಿ ಇಲಾಖೆ ವಿದ್ಯುತ್ ಉಪ ವಿಭಾಗ ಸಹಾಯಕ ಕಾರ್ಯಪಾಲಕ ಅಭಿಯಂತರ ತಿಪ್ಪೇಸ್ವಾಮಿ(59) ಈ ಕುರಿತಾಗಿ ದೂರು ನೀಡಿದ್ದರು.
ಅವರಿಗೆ ವಾಟ್ಸಾಪ್ ಕರೆ ಮಾಡಿ ತಾನು ಲೋಕಾಯುಕ್ತ ಬೆಂಗಳೂರು ಹೆಡ್ ಆಫೀಸ್ ನ ಲೋಕಾಯುಕ್ತ ಅಧಿಕಾರಿ ದಯಾನಂದ ಎಂದು ಪರಿಚಯ ಮಾಡಿಕೊಂಡು ನಿಮ್ಮ ಮೇಲೆ ಎಫ್ಐಆರ್ ದಾಖಲಾಗಿದ್ದು, ಈ ಕೇಸಿನಲ್ಲಿ ‘ಬಿ’ ರಿಪೋರ್ಟ್ ಮಾಡಲು ನೀವು ನಮಗೆ ಆನ್ ಲೈನ್ ಮೂಲಕ ಹಣವನ್ನು ಹಾಕಲು ರೆಡಿ ಇರಿ ಎಂದು ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದಲ್ಲಿ ಆರೋಪಿ ಬಗ್ಗೆ ಎಸ್ಪಿ ನಿಖೀಲ್ ಬಿ., ಹೆಚ್ಚುವರಿ ಪೊಲೀಸ್ ಅಧಿಕ್ಷಕರು-1 ಕಾರಿಯಪ್ಪ ಎ.ಜಿ. ಮಾರ್ಗದರ್ಶನದಲ್ಲಿ, ಸೈಬರ್ ಕ್ರೈಂ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಮಂಜುನಾಥ್ ಅವರ ನೇತೃತ್ವದಲ್ಲಿ ಎಎಸ್ಐ ಪ್ರಕಾಶ್ ಜೆ.ಕೆ., ಸಿಬ್ಬಂದಿಗಳಾದ ಕಿರಣ್ ಕುಮಾರ್, ಸಂಗಮೇಶ, ಶರತ್ ಕುಮಾರ್ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿರುತ್ತದೆ.
ಸದರಿ ತನಿಖಾ ತಂಡವು ಪ್ರಕರಣದ ಆರೋಪಿಯಾದ ಟಿ ಧನಂಜಯ ರೆಡ್ಡಿ ಬಿನ್ ಟಿ ಮಲ್ಲಿರೆಡ್ಡಿ 33 ವರ್ಷ, ಖಾಯಂ ವಾಸ: ನಲ್ಲಗುತ್ತಲಾ ಪಲ್ಲಿ ವೆಂಕಟಾಪುರಂ ಆನಂತಪುರ ಜಿಲ್ಲೆ ಆಂಧ್ರ ಪ್ರದೇಶ ರಾಜ್ಯ. ಹಾಲಿ ವಾಸ: ನಾಗಿರೆಡ್ಡಿಪಲ್ಲಿ ಮೇನ್ ರೋಡ್ ಭರತ್ ಪೆಟ್ರೋಲ್ ಬಂಕ್ ಹತ್ತಿರ ಕದಿರಿ, ಸತ್ಯಸಾಯಿ ಜಿಲ್ಲೆ ಆಂಧ್ರ ಪ್ರದೇಶ ರಾಜ್ಯ. ಈತನನ್ನು ಆಂಧ್ರ ಪ್ರದೇಶದ ಕದಿರಿ ನಗರದಿಂದ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.