ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಆನ್ಲೈನ್ ಹಣಕಾಸು ವಂಚನೆಗೆ ಒಳಗಾಗುವ ಗ್ರಾಹಕರಿಗೆ ದೊಡ್ಡ ನೆಮ್ಮದಿ ನೀಡುವ ಮಹತ್ವದ ನಿರ್ಧಾರವನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಕೈಗೊಂಡಿದೆ. ಹೊಸ ಡಿಜಿಟಲ್ ಫ್ರಾಡ್ ಪರಿಹಾರ (Digital Fraud Compensation Framework) ಅಡಿಯಲ್ಲಿ, ಸಣ್ಣ ಪ್ರಮಾಣದ ಡಿಜಿಟಲ್ ವಂಚನೆಗೆ ಒಳಗಾದ ಗ್ರಾಹಕರು ಗರಿಷ್ಠ ₹25,000ವರೆಗೆ ಪರಿಹಾರ ಪಡೆಯಬಹುದಾಗಿದೆ. ಆದರೆ ಈ ಹೊಸ ನಿಯಮಗಳು 2027ರ ಜನವರಿ 1ರಿಂದ ಜಾರಿಗೆ ಬರಲಿವೆ.
₹25,000ವರೆಗೆ ಪರಿಹಾರ ಹೇಗೆ ಸಿಗುತ್ತದೆ ?
ಕೊರೊನಾ ಬಳಿಕ ಯುಪಿಐ (UPI), ಇಂಟರ್ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಬಳಕೆ ಹೆಚ್ಚಿದಂತೆ ಸೈಬರ್ ವಂಚನೆ ಪ್ರಕರಣಗಳೂ ಏರಿಕೆಯಾಗಿವೆ. ಈ ಹಿನ್ನೆಲೆಯಲ್ಲಿ ಡಿಜಿಟಲ್ ವಂಚನೆಯಿಂದ ಹಣ ಕಳೆದುಕೊಳ್ಳುವ ಗ್ರಾಹಕರಿಗೆ ಆರ್ಥಿಕ ನೆರವು ನೀಡಲು ಆರ್ಬಿಐ ಈ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ.
ಹೊಸ ನಿಯಮದ ಪ್ರಕಾರ, ನಿಮ್ಮ ಖಾತೆಯಿಂದ ನಿಮ್ಮ ಅನುಮತಿಯಿಲ್ಲದೆ ಹಣ ವರ್ಗಾವಣೆಯಾಗಿರುವುದು ಗಮನಕ್ಕೆ ಬಂದರೆ, 5 ದಿನಗಳೊಳಗೆ ನಿಮ್ಮ ಬ್ಯಾಂಕ್ಗೆ ದೂರು ನೀಡಬೇಕು. ತನಿಖೆ ಪೂರ್ಣಗೊಂಡ ಬಳಿಕ ನಿಗದಿತ ಷರತ್ತುಗಳಿಗೆ ಒಳಪಟ್ಟು ಗರಿಷ್ಠ ₹25,000ವರೆಗೆ ಪರಿಹಾರ ಪಡೆಯುವ ಅವಕಾಶ ಇರುತ್ತದೆ.
5 ದಿನಗಳೊಳಗೆ ಈ ಕ್ರಮ ಕಡ್ಡಾಯ
ಆರ್ಬಿಐ ಮಾರ್ಗಸೂಚಿಯಂತೆ, ಅನಧಿಕೃತ ಡಿಜಿಟಲ್ ವಹಿವಾಟು ನಡೆದಿರುವುದು ಗೊತ್ತಾದ ತಕ್ಷಣ:1930 ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿಗೆ ಕರೆ ಮಾಡಬೇಕು. ನಿಮ್ಮ ಬ್ಯಾಂಕ್ನ 24×7 ಸಹಾಯವಾಣಿ ಅಥವಾ ಮೊಬೈಲ್ ಆ್ಯಪ್ ಮೂಲಕ ಕೂಡಲೇ ದೂರು ದಾಖಲಿಸಬೇಕು.ದೂರು ದಾಖಲಾದ ಬಳಿಕ ದೊರೆಯುವ ಅಧಿಕೃತ ರೆಫರೆನ್ಸ್ ಸಂಖ್ಯೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.
- ಈ ಎಲ್ಲಾ ಪ್ರಕ್ರಿಯೆಯನ್ನು 5 ಕೆಲಸದ ದಿನಗಳೊಳಗೆ ಪೂರ್ಣಗೊಳಿಸಬೇಕು. ನಂತರ ತನಿಖೆಯ ಆಧಾರದ ಮೇಲೆ ಅರ್ಹತೆ ಇದ್ದರೆ ಪರಿಹಾರದ ಮೊತ್ತವನ್ನು ನಿಮ್ಮ ಖಾತೆಗೆ ಜಮೆ ಮಾಡಲಾಗುತ್ತದೆ.
ಪ್ರಮುಖ ನಿಯಮಗಳು
- ₹25,000 ಪರಿಹಾರದ ಸೌಲಭ್ಯ ಜೀವನದಲ್ಲಿ ಒಮ್ಮೆ ಮಾತ್ರ ದೊರೆಯುತ್ತದೆ.
- ₹500ಕ್ಕಿಂತ ಹೆಚ್ಚಿನ ಪ್ರತಿಯೊಂದು ವಹಿವಾಟಿಗೂ ಬ್ಯಾಂಕುಗಳು ಕಡ್ಡಾಯವಾಗಿ SMS ಎಚ್ಚರಿಕೆ ಕಳುಹಿಸಬೇಕು.
- ಎಲ್ಲಾ ಬ್ಯಾಂಕುಗಳು 24×7 ದೂರು ಸ್ವೀಕರಿಸುವ ವ್ಯವಸ್ಥೆ ಹೊಂದಿರಬೇಕು.
ಬ್ಯಾಂಕುಗಳಿಗೆ ಆರ್ಬಿಐ ಹೊಸ ಸೂಚನೆ
ಸೈಬರ್ ವಂಚನೆಗಳನ್ನು ತಡೆಗಟ್ಟಲು ಬ್ಯಾಂಕುಗಳು ತಮ್ಮ ಆಂತರಿಕ ಅಪಾಯ ನಿರ್ವಹಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಆರ್ಬಿಐ ಸೂಚಿಸಿದೆ. ಇದಕ್ಕಾಗಿ ಕೃತಕ ಬುದ್ಧಿಮತ್ತೆ (AI) ಮತ್ತು ಮೆಷಿನ್ ಲರ್ನಿಂಗ್ (ML) ತಂತ್ರಜ್ಞಾನವನ್ನು ಪಾರದರ್ಶಕವಾಗಿ ಬಳಸುವಂತೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಈ ತಂತ್ರಜ್ಞಾನಗಳ ಮೂಲಕ ಅನುಮಾನಾಸ್ಪದ ವಹಿವಾಟುಗಳನ್ನು ತಕ್ಷಣವೇ ಪತ್ತೆಹಚ್ಚಿ, ವಂಚನೆಗಳನ್ನು ಆರಂಭದಲ್ಲೇ ತಡೆಯುವ ವ್ಯವಸ್ಥೆಯನ್ನು ಬ್ಯಾಂಕುಗಳು ಅಭಿವೃದ್ಧಿಪಡಿಸಬೇಕೆಂದು ಆರ್ಬಿಐ ಸೂಚಿಸಿದೆ.
ಡಿಜಿಟಲ್ ವಹಿವಾಟು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸೈಬರ್ ವಂಚನೆ ಸಂತ್ರಸ್ತರಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಆರ್ಬಿಐ ಈ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಆದರೆ ಈ ಸೌಲಭ್ಯ 2027ರ ಜನವರಿ 1ರಿಂದ ಮಾತ್ರ ಜಾರಿಗೆ ಬರಲಿದ್ದು, ವಂಚನೆ ಸಂಭವಿಸಿದ ತಕ್ಷಣ 5 ದಿನಗಳೊಳಗೆ ದೂರು ನೀಡುವುದು ಅತ್ಯಂತ ಮುಖ್ಯವಾಗಿದೆ.