ಬೆಂಗಳೂರು: ಇಂದು 12ನೇ ಅಂತರಾಷ್ಟ್ರೀಯ ಯೋಗ ದಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೋಲ್ಕತ್ತಾದ ರೆಡ್ ರೋಡ್ ನಲ್ಲಿ 30 ಸಾವಿರ ಜನರೊಂದಿಗೆ ಯೋಗಾಸನಗಳನ್ನು ಮಾಡುವ ಮೂಲಕ ಗಮನಸೆಳೆದರು.
ಅಂತರಾಷ್ಟ್ರೀಯ ಯೋಗ ದಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗ್ರಹದಲ್ಲಿಯೂ ಯೋಗ ದಿನ ಆಚರಿಸಲಾಯಿತು. ಜೈಲಿನಲ್ಲಿರುವ ಕಿಅದಿಗಳು, ವಿಚಾರಣಾದೀನ ಕೈದಿಗಳು ಯೋಗಾಸನಗಳನ್ನು ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾದರು. ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಕೂಡ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು.
ಮತ್ತೊಂದೆಡೆ ಅದೇ ಜೈಲಿನಲ್ಲಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ೧ ಆರೋಪಿ ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳು ಕೂಡ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಯೋಗಾಭ್ಯಾಸ ಮಾಡಿದ್ದಾರೆ.
ಆರಂಭದಲ್ಲಿ ನಟ ದರ್ಶನ್ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲ್ಲ. ತನಗೆ ಬೆನ್ನು ನೋವಿದೆ ಎಂದು ತಿಳಿಸಿದ್ದರು. ಆದರೆ ಎಡಿಜಿಪಿ ಅಲೋಕ್ ಕುಮಾರ್ ಅವರು ದರ್ಶನ್ ಅವರಿಗೆ ಯೋಗಾಭ್ಯಾಸದ ಮಹತ್ವ ಹಾಗೂ ಜೈಲಿನಲ್ಲಿರುವ ಎಲ್ಲಾ ಕೈದಿಗಳು ಯೋಗದಿನದಲ್ಲಿ ಭಾಗಿಯಾಗುವಂತೆ ತಿಳಿಸಿದ್ದರು. ಅಲ್ಲದೇ ಯೋಗಾಸನದಿಂದ ಬೆನ್ನು ನೋವು ಕಡಿಮೆಯಾಗಲಿದೆ ಎಂದು ತಿಳಿ ಹೇಳಿದ್ದರು. ಅಲೋಕ್ ಕುಮಾರ್ ಸೂಚನೆ ಮೇರೆಗೆ ದರ್ಶನ್ ಇಂದಿನ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.