ಬೆಂಗಳೂರು: ರಾಜ್ಯ ಸರ್ಕಾರ ಶೇಕಡ 12.5 ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿರುವುದನ್ನು ಒಪ್ಪದ ಕೆಎಸ್ಆರ್ಟಿಸಿ ಸೇರಿ 4 ನಿಗಮಗಳ ಸಾರಿಗೆ ನೌಕರರು ಮೇ 20ರಿಂದ ಮುಷ್ಕರ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದರಿಂದಾಗಿ ಸಮಸ್ಯೆ ಬಿಗಡಾಯಿಸಿದೆ. ವೇತನ ಹೆಚ್ಚಳವನ್ನು 2024ರ ಏಪ್ರಿಲ್ ನಿಂದಲೇ ಜಾರಿಗೊಳಿಸಬೇಕು. ಶೇ. 25 ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಈ ಹಿಂದೆ ಮಾಡಲಾಗಿದ್ದ ವೇತನ ಪರಿಷ್ಕರಣೆಯ ಹಿಂಬಾಕಿ ಒಂದು ವರ್ಷ ಬಾಕಿ ಉಳಿದಿದ್ದು, ಅದನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಲಾಗಿದೆ. ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ಕೈಗೊಳ್ಳುವುದಾಗಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ತಿಳಿಸಿದೆ.
2023ರ ಮಾರ್ಚ್ ವೇತನ ಪರಿಷ್ಕರಣೆಯ 26 ತಿಂಗಳ ಹಿಂಬಾಕಿ ಮೊತ್ತ 1271.92 ಕೋಟಿ ರೂ.ಗಳಲ್ಲಿ ಮೊದಲ ಕಂತಿನ 450 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು ನೌಕರರ ಖಾತೆಗಳಿಗೆ ಜಮಾ ಆಗಿದೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಅವರಿಗೆ ಸಿಗುವ ಎಲ್ಲಾ ಸೌಲಭ್ಯ ನೀಡಬೇಕು. ಬಾಕಿ ಇರುವ ಭತ್ಯೆ ಮತ್ತು ರಜೆ ನಗದೀಕರಣದ ಹಣವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಲಾಗಿದೆ.