ಉದ್ಯೋಗದ ಹುಡುಕಾಟದಲ್ಲಿರುವ ಯುವಕರಿಗೆ ಇಂತಹ ಅನುಭವಗಳು ತೀವ್ರ ನಿರಾಶೆಯನ್ನು ಉಂಟುಮಾಡುತ್ತವೆ. ತಮ್ಮ ಊರನ್ನು ಬಿಟ್ಟು, ಉತ್ತಮ ಉದ್ಯೋಗವನ್ನು ಪಡೆಯುವ ಹಂಬಲದಿಂದ ಕಷ್ಟಪಟ್ಟು ದೂರದ ಸ್ಥಳಗಳಿಗೆ ಹೋದರೂ, ಕೆಲವು ಕಂಪನಿಗಳ ವರ್ತನೆ ಅಭ್ಯರ್ಥಿಗಳಿಗೆ ತೀವ್ರ ಬೇಸರ ತರಿಸುತ್ತದೆ.
ಇತ್ತೀಚೆಗೆ ದೆಹಲಿಯ ಯುವಕನೊಬ್ಬ ಹೈದರಾಬಾದ್ನ ಪ್ರಮುಖ ಫಾರ್ಮಾ ಕಂಪನಿಯೊಂದರಲ್ಲಿ ಸಂದರ್ಶನಕ್ಕಾಗಿ ಬರೋಬ್ಬರಿ ರೂ. 14,000 ಖರ್ಚು ಮಾಡಿ ವಿಮಾನದಲ್ಲಿ ಬಂದಿದ್ದನು. ಆದರೆ, ಅಲ್ಲಿಗೆ ಹೋದ ನಂತರ ಕಂಪನಿಯ ಪ್ರತಿನಿಧಿಗಳು ಕೇವಲ 10 ನಿಮಿಷಗಳಲ್ಲಿ ಸಂದರ್ಶನವನ್ನು ಮುಗಿಸಿ, ಆತನನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದ್ದಾರೆ. ಈ ಕಹಿ ಅನುಭವವನ್ನು ಆ ಅಭ್ಯರ್ಥಿ ‘ರೆಡಿಟ್’ (Reddit) ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಈಗ ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಏನಿದು ಘಟನೆ ? ಸಿಯಾಸಾತ್ ವರದಿಯ ಪ್ರಕಾರ, ಈ ಯುವಕ ಕೈಗಾರಿಕಾ ಫರ್ಮೆಂಟೇಶನ್ (Industrial Fermentation) ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾನೆ. ಹೈದರಾಬಾದ್ನ ಬಹುರಾಷ್ಟ್ರೀಯ ಫಾರ್ಮಾ ಕಂಪನಿಯೊಂದರಲ್ಲಿ ಫರ್ಮೆಂಟೇಶನ್ ವಿಭಾಗದ ಉದ್ಯೋಗವೊಂದಕ್ಕೆ ಆತನ ಪ್ರೊಫೈಲ್ ಶಾರ್ಟ್ಲಿಸ್ಟ್ ಆಗಿತ್ತು. ಕಂಪನಿಯವರು ತನ್ನ ಬಯೋಡೇಟಾ ಮತ್ತು ಕೆಲಸದ ಅನುಭವವನ್ನು ಪರಿಶೀಲಿಸಿಯೇ ಕರೆದಿರಬಹುದು ಎಂದು ನಂಬಿದ್ದ ಆ ಯುವಕ, ರಜೆ ಹಾಕಿ, ವಿಮಾನದ ಟಿಕೆಟ್ಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಹೈದರಾಬಾದ್ಗೆ ಬಂದಿದ್ದನು.
10 ನಿಮಿಷಗಳಲ್ಲೇ ಮುಗಿದ ಸಂದರ್ಶನ: ಸಂದರ್ಶನ ನಡೆಯುವ ಸ್ಥಳಕ್ಕೆ ಹೋದಾಗ ಆತನಿಗೆ ಅಚ್ಚರಿಯೊಂದು ಕಾದಿತ್ತು. ತನ್ನ ನಂತರ ಬಂದ ಅಭ್ಯರ್ಥಿಗಳನ್ನು ಕಂಪನಿಯವರು ಹೆಚ್ಚು ಸಮಯ ಸಂದರ್ಶನ ಮಾಡಿದರು. ಆದರೆ, ಈತನ ಸರದಿ ಬಂದಾಗ ಕೇವಲ 10 ನಿಮಿಷಗಳಲ್ಲಿ ಸಂದರ್ಶನವನ್ನು ಮುಗಿಸಿದರು. ಸಂದರ್ಶನ ಮಂಡಳಿ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ತಾನು ಸರಿಯಾಗಿ ಉತ್ತರಿಸಿದ್ದರೂ, ತನ್ನ ತಾಂತ್ರಿಕ ಜ್ಞಾನ ಮತ್ತು ನೈಪುಣ್ಯತೆಯನ್ನು ಸಂಪೂರ್ಣವಾಗಿ ವಿವರಿಸಲು ಅವರು ಅವಕಾಶ ನೀಡಲಿಲ್ಲ ಎಂದು ಯುವಕ ಅಳಲು ತೋಡಿಕೊಂಡಿದ್ದಾನೆ.
ಸಂದರ್ಶನಕ್ಕೂ ಮುನ್ನವೇ ಕಂಪನಿಯವರು ನಿರ್ದಿಷ್ಟ ಅಭ್ಯರ್ಥಿಯನ್ನು ಆಯ್ಕೆ ಮಾಡಿರಬಹುದು ಮತ್ತು ಕೇವಲ ಫಾರ್ಮಾಲಿಟಿಗಾಗಿ ತನ್ನನ್ನು ಕರೆಸಿರಬಹುದು ಎಂದು ಆತ ಅನುಮಾನ ವ್ಯಕ್ತಪಡಿಸಿದ್ದಾನೆ. “ನನ್ನ ಪ್ರೊಫೈಲ್ ಆ ಕೆಲಸಕ್ಕೆ ಸರಿಹೊಂದದಿದ್ದರೆ, ಯಾಕೆ ಕರೆಸಿದ್ದೀರಿ? ನನ್ನ ಸಮಯ ಮತ್ತು ಹಣವನ್ನು ಯಾರು ಮರುಪಾವತಿಸುತ್ತಾರೆ?” ಎಂದು ಆತ ಪ್ರಶ್ನಿಸಿದ್ದಾನೆ.
ನೆಟ್ಟಿಗರ ಆಕ್ರೋಶ: ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಯುವಕನ ಪರವಾಗಿ ಧ್ವನಿ ಎತ್ತಿದ್ದಾರೆ. ಉದ್ಯೋಗದ ಹೆಸರಿನಲ್ಲಿ ನಿರುದ್ಯೋಗಿಗಳ ಸಮಯ ಮತ್ತು ಹಣವನ್ನು ವ್ಯರ್ಥ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನ್ಲೈನ್ ಸಂದರ್ಶನದ ಅವಕಾಶವಿದ್ದರೂ, ಇಂತಹ ದೂರದ ಸ್ಥಳಗಳಿಗೆ ಅಭ್ಯರ್ಥಿಗಳನ್ನು ಕರೆಯಿಸಿ ಅವಮಾನಿಸುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ. ಮೊದಲ ಸುತ್ತಿನ ಸಂದರ್ಶನವನ್ನು ಆನ್ಲೈನ್ನಲ್ಲಿ ನಡೆಸಿ, ಅರ್ಹರನ್ನು ಮಾತ್ರ ಅಂತಿಮ ಸುತ್ತಿಗೆ ಕರೆಸಿಕೊಂಡರೆ ಅಭ್ಯರ್ಥಿಗಳಿಗೆ ಆರ್ಥಿಕ ಹೊರೆ ತಪ್ಪುತ್ತದೆ ಎಂದು ಹಲವರು ಸಲಹೆ ನೀಡಿದ್ದಾರೆ.