ಕೆಎಸ್ಆರ್ಟಿಸಿ ಬಸ್ನ ಮುಂಗಡ ಟಿಕೆಟ್ ಬುಕ್ ಮಾಡಿ ಸರಿಯಾದ ಸಮಯಕ್ಕೆ ಬಸ್ ನಿಲ್ದಾಣಕ್ಕೆ ಆಗಮಿಸಿ ಬಸ್ಗಾಗಿ ಕಾಯುತ್ತಿದ್ದ ಮಹಿಳೆಯ ಹೋರಾಟಕ್ಕೆ ಜಯ ಸಿಕ್ಕಿದ್ದು ಗ್ರಾಹಕರ ಆಯೋಗ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಛೀಮಾರಿ ಹಾಕಿದೆ.
ಹೌದು, 2024ರ ಆಗಸ್ಟ್ 24ರಂದು ಕೇರಳದ ಮಹಿಳೆಯೊಬ್ಬರು ತಿರುವಲ್ಲಾದಿಂದ ಎರ್ನಾಕುಲಂಗೆ ತೆರಳುವ ಸಲುವಾಗಿ 146 ರೂಪಾಯಿಯ ಟಿಕೆಟ್ ಬುಕ್ ಮಾಡಿದ್ದರು. ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳುತ್ತಿದ್ದ ಇವರು ತಮ್ಮ ಕೆಲಸಕ್ಕೆ ರಜೆ ಹಾಕಿ ಆಸ್ಪತ್ರೆಗೆ 500 ರೂ ಪಾವತಿಸಿ ಅಲ್ಲಿಯೂ ಮುಂಗಡ ಬುಕಿಂಗ್ ಮಾಡಿಕೊಂಡಿದ್ದರು.
ತಿರುವಲ್ಲಾ ನಿಲ್ದಾಣಕ್ಕೆ ಎಂಟು ಗಂಟೆಗೆ ಆಗಮಿಸಲಿದೆ ಎಂದು ಬಂದಿದ್ದ ಸಂದೇಶದ ಆಧಾರದ ಮೇಲೆ 7.30ಕ್ಕೆ ಆ ಮಹಿಳೆ ಬಸ್ ನಿಲ್ದಾಣಕ್ಕೆ ಆಗಮಿಸಿ ಕಾಯುತ್ತಾ ಕುಳಿತಿದ್ದರು. ಆದರೆ 8.10 ಆದರೂ ಸಹ ಬಸ್ ಬಾರದ ಕಾರಣ ಮಹಿಳೆ ಬಸ್ ಕಂಡಕ್ಟರ್ ನಂಬರ್ಗೆ ಕರೆ ಮಾಡಿದ್ದಾರೆ. ಉತ್ತರಿಸಿದ ನಿರ್ವಾಹಕ ಬಸ್ ಈಗಾಗಲೇ ತಿರುವಲ್ಲಾ ದಾಟಿ ಕೊಟ್ಟಾಯಂ ತಲುಪಿದೆ, ಬೇರೆ ಯಾವುದಾದಾರೂ ಬಸ್ ಹಿಡಿದು ಹೊರಡಿ ಎಂದಿದ್ದಾರೆ.
ಇದರ ವಿರುದ್ಧ ಆಕ್ರೋಶಗೊಂಡ ಮಹಿಳೆ ತನಗಾದ ಅನ್ಯಾಯದ ವಿರುದ್ಧ ಗ್ರಾಹಕರ ನ್ಯಾಯಾಲಯದ ಮೊರೆ ಹೋದರು. ಬಸ್ ಬುಕ್ ಮಾಡಿ ಹಣ ವ್ಯರ್ಥವಾದದಲ್ಲದೇ ಆಸ್ಪತ್ರೆಗೆ ಕೊಟ್ಟ ಹಣವೂ ನಷ್ಟವಾಯಿತು. ಅಲ್ಲದೇ ಇನ್ನೊಂದು ದಿನ ರಜೆ ಹಾಕಿ ಆಸ್ಪತ್ರೆಗೆ ಹೋಗುವಂತಾಯಿತು ಎಂದು ಉಲ್ಲೇಖಿಸಿ ದೂರು ನೀಡಿದರು.
ನ್ಯಾಯಾಲಯದಲ್ಲಿ ಕೆಎಸ್ಆರ್ಟಿಸಿ ತಮ್ಮದೇನೂ ತಪ್ಪಿಲ್ಲ, ಕಂಡಕ್ಟರ್ ಬಳಿ ಮುಂಗಡ ಬುಕಿಂಗ್ ಚಾರ್ಟ್ ಇತ್ತು ಎಂದು ವಾದಿಸಿತು. ಅಲ್ಲದೇ ಆ ದಿನ ಕರ್ತವ್ಯದಲ್ಲಿದ್ದ ನಿರ್ವಾಹಕನನ್ನು ಈ ಪ್ರಕರಣದಲ್ಲಿ ಆರೋಪಿ ಮಾಡಿಲ್ಲ ಎಂದೂ ಸಹ ತಾಂತ್ರಿಕ ಕಾರಣ ನೀಡಿತು. ಆದರೆ ಇದನ್ನು ಪರಿಗಣಿಸದ ಕೋರ್ಟ್ ಕೆಎಸ್ಆರ್ಟಿಸಿಗೆ ಛೀಮಾರಿ ಹಾಕಿತು.
ಇಷ್ಟು ಗಂಟೆಗೆ ಬರಲಿದೆ ಎಂದು ಸಂದೇಶ ಕಳುಹಿಸಿ ಬಳಿಕ ಅದನ್ನು ಪಾಲಿಸದೇ ಇರುವುದು ತಪ್ಪು ನಿರೂಪಣೆ ಎಂದು ಹೇಳಿಕೆ ನೀಡಿದ ನ್ಯಾಯಾಲಯ ಮಹಿಳೆಗೆ 146 ಬಸ್ ಟಿಕೆಟ್ ದರವನ್ನು ಮರು ಪಾವತಿ ಮಾಡಬೇಕು. ಅಲ್ಲದೇ ದೂರು ಸಲ್ಲಿಸಿದ ದಿನಾಂಕದಿಂದ ವಾರ್ಷಿಕ 9% ಬಡ್ಡಿ ದರ ಪಾವತಿಸಬೇಕು, ಮಹಿಳೆಗೆ 25000 ಪರಿಹಾರ ಧನ ನೀಡಬೇಕು, 10000 ರೂ ನ್ಯಾಯಾಲಯ ವೆಚ್ಚ ಪಾವತಿಸಬೇಕು ಎಂದು ತೀರ್ಪು ನೀಡಿದೆ.