ಬೆಂಗಳೂರಿನ ಕಂಟೆಂಟ್ ಕ್ರಿಯೇಟರ್ ಒಬ್ಬರು ಹಂಚಿಕೊಂಡ ವಿಡಿಯೋ ಈಗ ವೈರಲ್ ಆಗಿದೆ. ಭಾರಿ ಮಳೆಯ ಸಮಯದಲ್ಲಿ ತಮ್ಮ ಸ್ನೇಹಿತೆಯೊಬ್ಬರು 15 ಕಿಲೋಮೀಟರ್ ಪ್ರಯಾಣಕ್ಕಾಗಿ ಬರೋಬ್ಬರಿ 1,200 ರೂಪಾಯಿ ಆಟೋ ಬಾಡಿಗೆ ಪಾವತಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ವಿಡಿಯೋ ನಗರದ ಪೀಕ್ ಅವರ್ ಟ್ರಾಫಿಕ್ ಮತ್ತು ಮಳೆಯ ನಡುವಿನ ಪ್ರಯಾಣದ ಕಷ್ಟಗಳನ್ನು ಎತ್ತಿ ತೋರಿಸುತ್ತಿದ್ದು, ಅಂತರ್ಜಾಲದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಇನ್ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಸಾನ್ಯಾ ಸಿಂಗ್ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಮಾತನಾಡುತ್ತಾ, “ನಾನು ಬೆಂಗಳೂರಿನಿಂದ ಇದನ್ನು ನಿರೀಕ್ಷಿಸಿರಲಿಲ್ಲ! ನಿನ್ನೆ ನನ್ನ ಸ್ನೇಹಿತೆಯೊಬ್ಬರು 15 ಕಿಮೀ ಪ್ರಯಾಣಕ್ಕೆ ಆಟೋ ಚಾಲಕನಿಗೆ 1,200 ರೂಪಾಯಿ ನೀಡಿದ್ದಾರೆ. 1,200 ರೂಪಾಯಿ ಎಂದರೆ ನೀವು ಎರಡು ಬಾರಿ ಮನೆಯ ದಿನಸಿ ಸಾಮಗ್ರಿಗಳನ್ನು ಖರೀದಿಸಬಹುದು. ಅದಕ್ಕಾಗಿಯೇ ನಾನು ಬೆಂಗಳೂರಿನ ಮಳೆಯನ್ನು ರೋಮ್ಯಾಂಟಿಕ್ ಆಗಿ ನೋಡಲು ಸಾಧ್ಯವಿಲ್ಲ, ಏಕೆಂದರೆ ಇಲ್ಲಿ ವಯಲಿನ್ ಸದ್ದಿಗಿಂತ ಹಾರ್ನ್ ಶಬ್ದವೇ ಹೆಚ್ಚು ಕೇಳಿಸುತ್ತದೆ. ಕಾಲೇಜು ಪ್ರವೇಶ ಪಡೆಯುವುದಕ್ಕಿಂತ ಹೆಚ್ಚಾಗಿ ಇಲ್ಲಿ ರೈಡ್ ಬುಕ್ ಮಾಡುವುದು ಕಷ್ಟದ ಕೆಲಸವಾಗಿದೆ. ನಮ್ಮ ಕೆರಿಯರ್ ಎತ್ತರಕ್ಕೆ ಹೋಗುತ್ತದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಈ ಆಟೋ ಚಾಲಕರು ಮಾತ್ರ ಖಂಡಿತ ಶ್ರೀಮಂತರಾಗುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ಯಾಪ್ಷನ್ನಲ್ಲಿ ಏನಿದೆ ?: “ಆಕೆಗೆ ಮನೆ ತಲುಪಲು 3 ಗಂಟೆ ಸಮಯ ಹಿಡಿಯಿತು. ಆಟೋ ಚಾಲಕ ದಾರಿಯ ಮಧ್ಯೆ ಬಿಟ್ಟು ಹೋಗಬಾರದು ಎಂಬ ಕಾರಣಕ್ಕೆ ಆಕೆ 1.2 ಸಾವಿರ ರೂಪಾಯಿ ಪಾವತಿಸಿದಳು. ಮಳೆಯ ಸಮಯದಲ್ಲಿ ಪೀಕ್ ಟ್ರಾಫಿಕ್ ಹೀಗಿರುತ್ತದೆ” ಎಂದು ವಿಡಿಯೋದ ಕ್ಯಾಪ್ಷನ್ನಲ್ಲಿ ಬರೆಯಲಾಗಿದೆ.
ಸಾಮಾಜಿಕ ಜಾಲತಾಣದ ಪ್ರತಿಕ್ರಿಯೆಗಳು: ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅನೇಕರು ಬೆಂಗಳೂರಿನ ಮಳೆಯ ಪ್ರಯಾಣದ ಕಷ್ಟಗಳನ್ನು ಹಂಚಿಕೊಂಡಿದ್ದಾರೆ.”ಬೆಂಗಳೂರಿನ ಮಳೆ ದುರ್ಬಲರಿಗಲ್ಲ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.”ಮಳೆ ಶುರುವಾದ ತಕ್ಷಣ ಪ್ರತಿಯೊಂದು ದರವೂ ಪ್ರೀಮಿಯಂ ದರವಾಗಿ ಬದಲಾಗುತ್ತದೆ” ಎಂದು ಮತ್ತೊಬ್ಬರು ಕಿಡಿಕಾರಿದ್ದಾರೆ.”15 ಕಿಮೀಗೆ 1,200 ರೂಪಾಯಿ ನೀಡುವುದು ನೋವಿನ ಸಂಗತಿ, ಆದರೆ ಪೀಕ್ ಟ್ರಾಫಿಕ್ನಲ್ಲಿ ಸುರಕ್ಷಿತವಾಗಿ ಮನೆ ತಲುಪುವುದೇ ಒಂದು ಐಷಾರಾಮಿ ಎನಿಸುತ್ತದೆ” ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ.”15 ಕಿಮೀ ಕ್ರಮಿಸಲು 3 ಗಂಟೆ ಬೇಕಾಯಿತು ಎನ್ನುವುದೇ ಇಲ್ಲಿನ ಅಸಲಿ ಸಮಸ್ಯೆ, ಬಾಡಿಗೆಗಿಂತ ಟ್ರಾಫಿಕ್ ಪರಿಸ್ಥಿತಿ ಕೆಟ್ಟದಾಗಿದೆ” ಎಂದು ಬಳಕೆದಾರರು ದೂರಿದ್ದಾರೆ.