ತಾಂತ್ರಿಕ ಯುಗದಲ್ಲಿ ಸಣ್ಣದೊಂದು ಅಜಾಗರೂಕತೆ ದೊಡ್ಡ ನಷ್ಟಕ್ಕೆ ದಾರಿ ಮಾಡಿಕೊಡಬಹುದು ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಆದರೆ, ಈ ಘಟನೆಯಲ್ಲಿ ನಷ್ಟಕ್ಕಿಂತ ಹೆಚ್ಚಾಗಿ ಮಾನವೀಯತೆ ಗೆದ್ದಿದೆ.
ಸ್ನೇಹಿತರ ಜೊತೆಗಿನ ಹರಟೆಯಲ್ಲಿ ಮೈಮರೆತು ಹಣ್ಣು ಖರೀದಿಸಿದ ಗ್ರಾಹಕರೊಬ್ಬರು, ₹15ರ ಬದಲು ಬರೋಬ್ಬರಿ ₹1515 ಹಣವನ್ನು ಯುಪಿಐ ಮೂಲಕ ಪಾವತಿಸಿದ್ದರು. ಇದನ್ನು ಗಮನಿಸಿದ ಹಣ್ಣಿನ ವ್ಯಾಪಾರಿ, ತಕ್ಷಣವೇ ಗ್ರಾಹಕನ ಬೆನ್ನಟ್ಟಿ ಹೋಗಿ ಹೆಚ್ಚುವರಿ ಹಣವನ್ನು ಮರಳಿಸುವ ಮೂಲಕ ಇಂದಿನ ಕಾಲದಲ್ಲೂ ಪ್ರಾಮಾಣಿಕತೆ ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಹಣ್ಣಿನ ಅಂಗಡಿಯಲ್ಲಿ ನಡೆದ ಒಂದು ಘಟನೆ
SUPERBRO ಎಂಬ ಹೆಸರಿನ ಬಳಕೆದಾರರು ಈ ರೀತಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ‘’ನಿನ್ನೆ ಸಂಜೆ ಸ್ನೇಹಿತರ ಜೊತೆ ಮಾತನಾಡುತ್ತಾ ನಾನು 15 ರೂಪಾಯಿ ಬೆಲೆಯ 3 ಬಾಳೆಹಣ್ಣುಗಳನ್ನು ಖರೀದಿಸಿದೆ.ಮಾತಿನ ಗಡಿಬಿಡಿಯಲ್ಲಿ ಸ್ಕ್ರೀನ್ ಕಡೆ ಸರಿಯಾಗಿ ಗಮನ ಕೊಡದೆ ಮೊತ್ತವನ್ನು ನಮೂದಿಸಿ, UPI ಪಿನ್ ಒತ್ತಿ, ಹಣ್ಣುಗಳನ್ನು ತೆಗೆದುಕೊಂಡು ಅಲ್ಲಿಂದ ಹೊರಟೆ’’
‘’ಹಠಾತ್ತನೆ ಅಂಗಡಿಯ ಮಾಲೀಕ ಜೋರಾಗಿ ಕೂಗಲು ಶುರು ಮಾಡಿದರು. ವಾಹನಗಳ ಶಬ್ದದ ನಡುವೆ ನಾನು ಕೇಳಿಸಿಕೊಳ್ಳದಿದ್ದಾಗ, ಅವರು ಅಕ್ಷರಶಃ ನನ್ನ ಹಿಂದೆ ಓಡಿಬಂದರು.ನೋಡಿದರೆ, ನಾನು 15 ರೂಪಾಯಿಯ ಬದಲು ಆಕಸ್ಮಿಕವಾಗಿ ₹1515 ಪಾವತಿಸಿದ್ದೆ’’
‘’ತಕ್ಷಣವೇ ಅವರು ನನ್ನ ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡಿ ₹1500 ಮರಳಿಸಿದರು. ನಾನು ಅವರಿಗೆ ತುಂಬು ಹೃದಯದ ಧನ್ಯವಾದ ಹೇಳಿದೆ. ಅವರು ಬಹಳ ಸಮಾಧಾನದಿಂದ “ಮುಂದಿನ ಬಾರಿ ಹಣ ಪಾವತಿಸುವಾಗ ಸರಿಯಾಗಿ ಗಮನಿಸಿ ಪಾವತಿಸಿ” ಎಂದು ಹೇಳಿದರು. ನನ್ನ ಈ ಅಜಾಗರೂಕತೆಯ ಬಗ್ಗೆ ನಾನು, ನನ್ನ ಸ್ನೇಹಿತರು ಮತ್ತು ಆ ಮಾಲೀಕರು ಎಲ್ಲರೂ ಸೇರಿ ಜೋರಾಗಿ ನಕ್ಕೆವು ಎಂದು ಬರೆದುಕೊಂಡಿದ್ದಾರೆ.