ಚಿತ್ರದುರ್ಗ : ಕುಡಿಯುವ ನೀರಿನ ಸಮಸ್ಯೆ ತಲೆದೊರಿದ ಹಳ್ಳಿಗಳಲ್ಲಿ 24 ಗಂಟೆಯೊಳಗಾಗಿ ಸಮಸ್ಯೆ ನಿವಾರಿಸಬೇಕು. ತಕ್ಷಣವೇ ಆರ್.ಓ. ಘಟಕಗಳ ದುರಸ್ಥಿಗೆ ಕ್ರಮ ಕೈಗೊಳ್ಳುವಂತೆ ಸಂಸದ ಗೋವಿಂದ ಎಂ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಕುರಿತು ಸಭೆ ನಡೆಸಿ ಅವರು ಮಾತನಾಡಿದರು.
ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆ ಕುರಿತು ದೂರವಾಣಿಯ ಮೂಲಕ ಅಳಲು ತೋಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ ತಕ್ಷಣವೇ ಸ್ಪಂದಿಸಬೇಕು. ತೀವ್ರ ನೀರಿನ ಅಭಾವವಿರುವ ಗ್ರಾಮಗಳಲ್ಲಿ ಸುತ್ತಮುತ್ತಲಿನ ರೈತರ ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಬೇಕು. ಬೋರ್ವೆಲ್ ಸೌಲಭ್ಯವಿಲ್ಲದ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಸಂಸದ ಗೋವಿಂದ ಎಂ ಕಾರಜೋಳ ನಿರ್ದೇಶನ ನೀಡಿದರು.
ಬೇಸಿಗೆಯ ಅವಧಿಯಲ್ಲಿ ಮನುಷ್ಯರಷ್ಟೇ ಅಲ್ಲದೆ ಜಾನುವಾರು ಮತ್ತು ಪಕ್ಷಿಗಳಿಗೂ ನೀರಿನ ಅಗತ್ಯವಿರುವುದರಿಂದ, ಸಾರ್ವಜನಿಕರು ನೀರನ್ನು ವ್ಯರ್ಥ ಮಾಡದೆ ಮಿತವಾಗಿ ಬಳಸಬೇಕು. ಉಪ್ಪು ನೀರು ಲಭ್ಯವಿರುವ ಕಡೆಗಳಲ್ಲಿ ಅದನ್ನು ಮನೆ ಬಳಕೆಗೆ ಮತ್ತು ಸಿಹಿ ನೀರನ್ನು ಕುಡಿಯಲು ಮಾತ್ರ ಉಪಯೋಗಿಸಬೇಕು ಎಂದು ಸಂಸದರು ಸಾರ್ವಜನಿಕರಲ್ಲಿ ವಿನಂತಿಸಿದರು.
ಜಲಶಕ್ತಿ ಮಂತ್ರಾಲಯ ಹಾಗೂ ಟಿ.ಬಿ.ಡ್ಯಾಂ ಮಂಡಳಿಗೆ ಪತ್ರ: ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವುದಿಂದ, ಮೊಳಕಾಲ್ಮೂರು, ಚಳ್ಳಕೆರೆ, ಪಾವಗಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೀರು ಒದಗಿಸುವುದನ್ನು ಟಿ.ಬಿ.ಡ್ಯಾಂ ಮಂಡಳಿ ನಿಲ್ಲಿಸಿದೆ. ಇದರಿಂದ ಮುಂಬರುವ ಕೆಲ ವಾರಗಳಲ್ಲಿ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲ್ಲೂಕುಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಪರಿಸ್ಥಿತಿ ಎದುರಾಗಿದೆ. ಮಳೆಯ ಕೊರತೆ ಇರುವುದಿಂದ ಕುಡಿಯವ ನೀರಿಗೆ ಆದ್ಯತೆ ನೀಡಿ, ಜಲಾಶಯದ ನೀರು ಬಳಸಲು ಅನುಮತಿ ನೀಡುವಂತೆ ಕೇಂದ್ರ ಜಲಶಕ್ತಿ ಮಂತ್ರಾಲಯ ಹಾಗೂ ಟಿ.ಬಿ.ಡ್ಯಾಂ ಮಂಡಳಿಗೆ ಪತ್ರ ಬರೆಯುವುದಾಗಿ ಸಂಸದ ಗೋವಿಂದ ಎಂ ಕಾರಜೋಳ ತಿಳಿಸಿದರು.
ವಿ.ವಿ.ಸಾಗರದಿಂದ ಹಿರಿಯೂರಿನ ಸುವರ್ಣಮುಖಿ ನದಿ ಬ್ಯಾರೇಜ್ಗೆ ಕುಡಿಯುವ ನೀರಿನ ಬಳಕೆಗೆ 0.1 ಟಿಎಂಸಿ ನೀರು ಹರಿಸಲು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಂದ ಅನುಮತಿ ಪಡೆಯುವಂತೆ ಸಂಸದರು ಇದೇ ಸಂದರ್ಭದಲ್ಲಿ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಮಾತನಾಡಿ, ಜಿಲ್ಲೆಯ ಸುಮಾರು 93 ಗ್ರಾಮ ಪಂಚಾಯತ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, ಒಟ್ಟು 216 ಜನವಸತಿ ಪ್ರದೇಶಗಳಲ್ಲಿ ನೀರಿನ ಅಭಾವವಿದೆ. ಪ್ರಸಕ್ತ ವರ್ಷದಲ್ಲಿ ಹೊಸದಾಗಿ 54 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಇದರಲ್ಲಿ 7 ಕೊಳವೆ ಬಾವಿಗಳಲ್ಲಿ ಕಡಿಮೆ ನೀರು ಲಭ್ಯವಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಆರ್.ನುಲೇನೂರು ಗ್ರಾ.ಪಂ. ರಂಗಾಪುರ ಲಂಬಾಣಿಹಟ್ಟಿ, ಚಿಕ್ಕಜಾಜೂರಿನ ಮಾರುತಿ ನಗರ, ಹಿರಿಯೂರು ತಾಲ್ಲೂಕಿನ ಕುಂಟಪ್ಪನಹಟ್ಟಿ ಜನವಸತಿ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ 1045 ಆರ್.ಓ. ಘಟಕಗಳು ಇದ್ದು, 832 ಕಾರ್ಯಾಚರಣೆಯಲ್ಲಿವೆ. 133 ಘಟಕಗಳು ಸ್ಥಗಿತಗೊಂಡಿವೆ. ಆರ್.ಓ.ಘಟಕಗಳ ದುರಸ್ತಿಗೆ ರೂ.63 ಲಕ್ಷ ಅನುದಾನದ ಅವಶ್ಯಕತೆ ಇದೆ ಎಂದು ತಿಳಿಸಿದ ಅವರು, ಹೊಸ ಆರ್.ಓ. ಘಟಕಗಳ ನಿರ್ಮಾಣಕ್ಕೆ ಕೆ.ಎಂ.ಇ.ಆರ್.ಸಿ ಅಡಿ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಲಮಾಣಿ, ಜಿ.ಪಂ.ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಅಮರನಾಥ್ ಜೈನ್, ಪೌರಾಯುಕ್ತೆ ಲಕ್ಷ್ಮೀ ಸೇರಿದಂತೆ ತಾಲ್ಲೂಕು ಪಂಚಾಯಿತಿ ಇಓಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಇಂಜಿನಿಯರ್ಗಳು ಉಪಸ್ಥಿತರಿದ್ದರು.