ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಪಿಂಚಣಿಗಳನ್ನು ಪಡೆಯುತ್ತಿರುವ ಫಲಾನುಭವಿಗಳ ಪಾರದರ್ಶಕತೆ ಮತ್ತು ಅರ್ಹತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ.
ರಾಜ್ಯಾದ್ಯಂತ ಪ್ರಸ್ತುತ ಒಟ್ಟು 83,11,493 ಫಲಾನುಭವಿಗಳು ಪಿಂಚಣಿ ಪಡೆಯುತ್ತಿದ್ದು, ಇವರ ಪೈಕಿ ಪ್ರಾಥಮಿಕ ತಪಾಸಣೆಯಲ್ಲಿ 23,13,664 ಫಲಾನುಭವಿಗಳ ವಿವರಗಳು ಸಂದೇಹಾಸ್ಪದವೆಂದು ಕಂಡುಬಂದಿರುತ್ತದೆ. ಈ ಸಂದೇಹಾಸ್ಪದ ಖಾತೆಗಳನ್ನು ‘ಸಂಯೋಜನೆ’ ಮೊಬೈಲ್ ಆ್ಯಪ್ ಮೂಲಕ ಪ್ರಸ್ತುತ ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ.
ಅರ್ಹ ಫಲಾನುಭವಿಗಳಿಗೆ ಪಿಂಚಣಿ ಪಾವತಿ:
ಸಂದೇಹಾಸ್ಪದವೆಂದು ಗುರುತಿಸಲಾಗಿದ್ದ ಖಾತೆಗಳ ಪೈಕಿ, ಗ್ರಾಮ ಆಡಳಿತ ಅಧಿಕಾರಿಗಳು (VA) ಸ್ಥಳದಲ್ಲೇ ಪರಿಶೀಲನೆ ನಡೆಸಿ ಅರ್ಹರೆಂದು ವರದಿ ಮಾಡಿದ 3,35,610 ಫಲಾನುಭವಿಗಳು ಸೇರಿದಂತೆ ರಾಜ್ಯದ ಒಟ್ಟು 63,04,554 ಅರ್ಹ ಫಲಾನುಭವಿಗಳಿಗೆ ಮೇ-2026 ರ ಮಾಹೆಯವರೆಗಿನ ಪಿಂಚಣಿಯನ್ನು ಯಶಸ್ವಿಯಾಗಿ ಪಾವತಿಸಲಾಗಿದೆ.
ಅನರ್ಹ ಹಾಗೂ ತಪ್ಪು ದಾಖಲೆ ನೀಡಿದವರ ಪಿಂಚಣಿ ರದ್ದು: ಮಂಜೂರಾತಿ ಸಮಯದಲ್ಲಿ ವಯಸ್ಸಿನ ದೃಢೀಕರಣದ ಬಗ್ಗೆ ತಪ್ಪು ಮತ್ತು ನಕಲಿ ದಾಖಲೆಗಳನ್ನು ನೀಡಿ ಕಾನೂನುಬಾಹಿರವಾಗಿ ಪಿಂಚಣಿ ಪಡೆಯುತ್ತಿದ್ದ 91,152 ಅನರ್ಹ ಫಲಾನುಭವಿಗಳನ್ನು ಪತ್ತೆಹಚ್ಚಲಾಗಿದ್ದು, ಇವರುಗಳ ಪಿಂಚಣಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಲು ತೀರ್ಮಾನಿಸಲಾಗಿದೆ.
ದಾಖಲೆ ಸಲ್ಲಿಸದವರಿಗೆ ಅಂತಿಮ ಅವಕಾಶ ಹಾಗೂ ತಾತ್ಕಾಲಿಕ ಅಮಾನತು:
ಗ್ರಾಮ ಆಡಳಿತ ಅಧಿಕಾರಿಗಳ ಪರಿಶೀಲನೆ ಸಮಯದಲ್ಲಿ ಯಾವುದೇ ಅಧಿಕೃತ ದಾಖಲೆಗಳನ್ನು ಹಾಜರುಪಡಿಸಲು ವಿಫಲರಾದ, ನೀಡಲಾದ ವಿಳಾಸದಲ್ಲಿ ವಾಸವಿಲ್ಲದ ಹಾಗೂ ಆದಾಯ ಪ್ರಮಾಣ ಪತ್ರ ಸಲ್ಲಿಸದ ಒಟ್ಟು 16,42,303 ಫಲಾನುಭವಿಗಳ ಪಿಂಚಣಿಯನ್ನು ಸದ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ದಾಖಲೆಗಳ ಕೊರತೆಯಿಂದಾಗಿ ಪಿಂಚಣಿ ಸ್ಥಗಿತಗೊಂಡಿರುವ 16,42,303 ಫಲಾನುಭವಿಗಳಿಗೆ ಕಂದಾಯ ಇಲಾಖೆಯು ಸೂಕ್ತ ತಿಳುವಳಿಕೆ ಪತ್ರವನ್ನು ನೀಡಲು ಆದೇಶಿಸಿದೆ. ಸಂಬಂಧಪಟ್ಟ ತಹಸೀಲ್ದಾರರ ಮೂಲಕ ಇವರಿಗೆ ನೋಟಿಸ್ ನೀಡಿ, ತಮ್ಮ ಅರ್ಹತಾ ದಾಖಲೆಗಳನ್ನು ಸಲ್ಲಿಸಲು 30 ದಿನಗಳ ಕಾಲಾವಕಾಶವನ್ನು ಕಲ್ಪಿಸಿಕೊಡಲಾಗಿದೆ.
ನಿಗದಿತ ಅವಧಿಯಲ್ಲಿ ಫಲಾನುಭವಿಗಳು ಸಲ್ಲಿಸುವ ದಾಖಲೆಗಳನ್ನು ಪರಿಶೀಲಿಸಿದ ನಂತರ, ಅವರು ನಿಜವಾಗಿಯೂ ಅರ್ಹರಾಗಿದ್ದಲ್ಲಿ ಅಂತಹವರ ಪಿಂಚಣಿ ಸೌಲಭ್ಯವನ್ನು ತಕ್ಷಣವೇ ಮುಂದುವರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಸೀಲ್ದಾರರುಗಳಿಗೆ ಇಲಾಖೆಯು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಸರ್ಕಾರದ ಈ ಕ್ರಮವು ಅರ್ಹ ಬಡ ಮತ್ತು ಅಗತ್ಯವಿರುವ ಜನರಿಗೆ ಸಾಮಾಜಿಕ ಭದ್ರತೆಯ ಪ್ರಯೋಜನಗಳನ್ನು ತಲುಪಿಸುವ ಮತ್ತು ಯೋಜನೆಯ ದುರುಪಯೋಗವನ್ನು ಸಂಪೂರ್ಣವಾಗಿ ತಡೆಯುವ ಉದ್ದೇಶವನ್ನು ಹೊಂದಿದೆ. ಎಂದು ಕಂದಾಯ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.