ರಾವಲಕೋಟ್: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (POK) ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನ ಸೇನೆ ಕ್ರೌರ್ಯ ಮೆರೆದಿದ್ದು, ಗುಂಡಿನ ದಾಳಿಗೆ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಅನರು ಗಾಯಗೊಂಡಿದ್ದಾರೆ.
ಪಿಒಕೆಯಲ್ಲಿ ಅಶಾಂತಿ ತಲೆದೋರಿದ್ದು, ಸಾಮಾಜಿಕ-ರಾಜಕೀಯ ಸಂಘಟನೆಯಾದ ಜಂಟಿ ಅವಾಮಿ ಕ್ರಿಯಾ ಸಮಿತಿ (JAAC) ಮೇಲಿನ ನಿಷೇಧದ ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ 30 ಜನ ಪ್ರತಿಭಟನಾಕಾರರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪಾಕ್ ಸೇನೆ ಪ್ರತಿಭಟನಾಕಾರರ ಮೇಲೆ ಕಂಡ ಕಂಡಲ್ಲಿ ಗುಂಡಿನ ದಾಳಿ ನಡೆಸಿದೆ. ಮತ್ತೊಂದೆಡೆ ಇಂಟರ್ ನೆಟ್ ಸೇವೆ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
ಜೂನ್ 9ರಂದು ಜೆಎಎಸಿ ಕರೆ ನೀಡಿದ್ದ ಬಂದ್ಗೆ ಮುನ್ನವೇ ರಾವಲಕೋಟ್ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈ ನಡುವೆ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದ ಸಂಘಟನೆಯ ಕಾರ್ಯಕರ್ತನ ಮೃತದೇಹವನ್ನು ಇರಿಸಲಾಗಿದ್ದ ಆಸ್ಪತ್ರೆಯ ಶವಾಗಾರದ ಹೊರಗೆ ಸಾವಿರಾರು ಬೆಂಬಲಿಗರು ಜಮಾಯಿಸಿದ್ದರು. ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದು, ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದೆ. ಶಬಾಜ್ ಷರೀಫ್ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
45 ಸದಸ್ಯರ ಶಾಸಕಾಂಗ ಸಭೆಯಲ್ಲಿ 12 ಸ್ಥಾನಗಳನ್ನು ಕಾಶ್ಮೀರದ ಹೊರಗೆ ಆದರೆ ಪಾಕಿಸ್ತಾನದ ಇತರ ಭಾಗಗಳಲ್ಲಿ ವಾಸಿಸುವ ನಿರಾಶ್ರಿತರಿಗೆ ಮೀಸಲಿಡುವ ಆಡಳಿತದ ನಿರ್ಧಾರವೇ ಅಶಾಂತಿಗೆ ಪ್ರಮುಖ ಕಾರಣವಾಗಿದೆ. ಈ ಕ್ರಮವು ಸ್ಥಳೀಯ ಜನರ ರಾಜಕೀಯ ಪ್ರಾತಿನಿಧ್ಯವನ್ನು ದುರ್ಬಲಗೊಳಿಸುತ್ತದೆ ಎಂದು ಜೆಎಎಸಿ ಆರೋಪಿಸಿದ್ದು, ಮೀಸಲು ಸ್ಥಾನಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದೆ.
ಇದರೊಂದಿಗೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಣದುಬ್ಬರ, ವಿದ್ಯುತ್ ಕೊರತೆ, ನಿರುದ್ಯೋಗ, ಆಹಾರ ಪದಾರ್ಥಗಳ ಬೆಲೆ ಏರಿಕೆ ಹಾಗೂ ಆಡಳಿತದ ವಿರುದ್ಧದ ಅಸಮಾಧಾನವೂ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಎರಡು ವರ್ಷಗಳಿಂದ ವಿದ್ಯುತ್ ಮತ್ತು ಹಿಟ್ಟಿನ ಬೆಲೆ ಏರಿಕೆಯನ್ನು ವಿರೋಧಿಸಿ ಸಂಘಟನೆ ಹಲವು ಬಾರಿ ಪ್ರತಿಭಟನೆ ನಡೆಸಿತ್ತು.