ಪ್ರೇಮವೆಂಬ ಅಂಧಾಭಿಮಾನ, ಮದುವೆಯಾಗಬೇಕಿದ್ದ ಭಾವಿ ಪತಿಯನ್ನೇ ಕಂದಕಕ್ಕೆ ತಳ್ಳಿ ಬಲಿಪಡೆದಿದೆ ಮಹಾರಾಷ್ಟ್ರದ ಲೋನಾವಾಲಾ ಸಮೀಪದ ಪ್ರಸಿದ್ಧ ಲೋಹಗಢ ಕೋಟೆಯಲ್ಲಿ (Lohagad Fort) ಜೂನ್ 18 ರಂದು ನಡೆದಿದ್ದ 26 ವರ್ಷದ ಯುವ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ ಅವರ ನಿಗೂಢ ಸಾವು, ಇದೀಗ ಕೊಲೆ ಪ್ರಕರಣವಾಗಿ ಬದಲಾಗಿದೆ.
ಆರಂಭದಲ್ಲಿ ಆಯತಪ್ಪಿ ಬಿದ್ದು ಸತ್ತಿದ್ದಾನೆ ಎಂದು ನಂಬಿಸಿ ನಾಟಕವಾಡಿದ್ದ ಕೇತನ್ನ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಸೀಕ್ರೆಟ್ ಪ್ರಿಯಕರ ಚೇತನ್ ಚೌಧರಿಯನ್ನು ಪುಣೆ ಗ್ರಾಮಾಂತರ ಪೊಲೀಸರು ಕೊಲೆ ಆರೋಪದ ಮೇಲೆ ಅರೆಸ್ಟ್ ಮಾಡಿದ್ದಾರೆ
ಬರ್ತ್ಡೇ ಸಂಭ್ರಮದ ಹೆಸರಲ್ಲಿ ಕರೆಯೊಯ್ದು ಕಂದಕಕ್ಕೆ ತಳ್ಳಿದರು
ಘಟನೆಯ ಕರಾಳ ಹಿನ್ನೆಲೆ ಹೀಗಿದೆ: ಜೂನ್ 19 ರಂದು ಸಿಯಾ ಗೋಯಲ್ ಹುಟ್ಟುಹಬ್ಬವಿತ್ತು. ಇದರ ಮುನ್ನಾದಿನ ಅಂದರೆ ಜೂನ್ 18 ರಂದು ಬೆಳಗ್ಗೆ, ತನ್ನ ಬರ್ತ್ಡೇ ಆಚರಣೆ ಹಾಗೂ ಪ್ರಿ-ವೆಡ್ಡಿಂಗ್ ಫೋಟೋಶೂಟ್ಗಾಗಿ ಕೇತನ್ನನ್ನು ಪ್ರೀತಿಯ ನಾಟಕವಾಡಿ ಸಿಯಾ ಲೋಹಗಢ ಕೋಟೆಗೆ ಟ್ರೆಕ್ಕಿಂಗ್ ಕರೆತಂದಿದ್ದಳು.
ಕೋಟೆಯ ತುದಿಯಲ್ಲಿ ಬೆಳಗ್ಗೆ 10:30ರ ಸುಮಾರಿಗೆ ಫೋಟೋ ತೆಗೆದುಕೊಳ್ಳುವಾಗ ತೀವ್ರ ಗಾಳಿಗೆ ಕೇತನ್ ಆಯತಪ್ಪಿ 400 ಅಡಿ ಆಳದ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಸಿಯಾ ಕಥೆ ಕಟ್ಟಿದ್ದಳು. ಪೊಲೀಸರು ಕೂಡ ಮೊದಲಿಗೆ ಇದನ್ನು ಆಕಸ್ಮಿಕ ಸಾವು (Accidental Death) ಎಂದೇ ಕೇಸ್ ದಾಖಲಿಸಿಕೊಂಡಿದ್ದರು.
ಮೊಬೈಲ್ ಕಾಲ್ ಹಿಸ್ಟರಿಯಿಂದ ಬಯಲಾಯ್ತು ಕರಾಳ ರಹಸ್ಯ
ಪೊಲೀಸರು ತನಿಖೆ ಮುಂದುವರಿಸಿದಾಗ ಸಿಯಾ ನೀಡುತ್ತಿದ್ದ ಹೇಳಿಕೆಗಳಲ್ಲಿ ಸಾಕಷ್ಟು ಗೊಂದಲಗಳು ಕಂಡುಬಂದವು. ಅನುಮಾನಗೊಂಡ ಪೊಲೀಸರು ಆಕೆಯ ಮೊಬೈಲ್ ಕರೆಗಳ ವಿವರ (CDR), ಸಾಮಾಜಿಕ ಜಾಲತಾಣಗಳ ಚಟುವಟಿಕೆ ಮತ್ತು ಡಿಜಿಟಲ್ ಪುರಾವೆಗಳನ್ನು ಜಾಲಾಡಿದಾಗ ಇಡೀ ಸತ್ಯ ಹೊರಬಿದ್ದಿದೆ
ಮದುವೆ ಇಷ್ಟವಿರಲಿಲ್ಲ: ಸಿಯಾಳಿಗೆ ಶ್ರೀಮಂತ ಉದ್ಯಮಿ ಕೇತನ್ ಜೊತೆ ಮದುವೆಯಾಗಲು ಕಿಂಚಿತ್ತೂ ಇಷ್ಟವಿರಲಿಲ್ಲ. ತಾನು ಪ್ರೀತಿಸುತ್ತಿದ್ದ ಪ್ರಿಯಕರ ಚೇತನ್ ಚೌಧರಿ ಜೊತೆ ಬಾಳಲು ಕೇತನ್ ಅಡ್ಡಿಯಾಗಿದ್ದಾನೆಂದು ಭಾವಿಸಿ ಇಬ್ಬರೂ ಸೇರಿ ಈ ಕೊಲೆಗೆ ಸ್ಕೆಚ್ ಹಾಕಿದ್ದರು.
ಕೋಟೆಯ ಮೇಲೆ ಕಾದು ಕುಳಿತಿದ್ದ ಪ್ರಿಯಕರ: ಪ್ಲಾನ್ ಪ್ರಕಾರ ಸಿಯಾ ತನ್ನ ಪ್ರಿಯಕರ ಚೇತನ್ನನ್ನು ರಹಸ್ಯವಾಗಿ ಮೊದಲೇ ಕೋಟೆಯ ತುದಿಗೆ ಬಂದು ನಿಲ್ಲುವಂತೆ ಮಾಡಿದ್ದಳು. ಕೇತನ್ ಫೋಟೋಶೂಟ್ನಲ್ಲಿ ಬ್ಯುಸಿಯಾಗಿದ್ದಾಗ ಇಬ್ಬರೂ ಸೇರಿ ಆತನನ್ನು 400 ಅಡಿ ಆಳದ ಪ್ರಪಾತಕ್ಕೆ ತಳ್ಳಿ ಮುಗಿಸಿಬಿಟ್ಟಿದ್ದರು
ಇದು ಎರಡನೇ ಪ್ರಯತ್ನ: ಈ ಹಿಂದೆ ಹಾವಿನ ಭಯ ಹುಟ್ಟಿಸಿ ಕೊಲ್ಲಲು ಯತ್ನ
ಪೊಲೀಸ್ ಮೂಲಗಳ ಪ್ರಕಾರ, ಕೇತನ್ನನ್ನು ಮುಗಿಸಲು ಈ ಕಿರಾತಕ ಜೋಡಿ ನಡೆಸಿದ ಎರಡನೇ ಪ್ರಯತ್ನ ಇದಾಗಿತ್ತು ಜೂನ್ 14 ರಂದೂ ಇದೇ ಕೋಟೆಗೆ ಕೇತನ್ನನ್ನು ಕರೆತಂದು ಹಾವಿನ ಭಯ ಹುಟ್ಟಿಸಿ ಕಂದಕಕ್ಕೆ ತಳ್ಳಲು ಪ್ಲಾನ್ ಮಾಡಿದ್ದರು, ಆದರೆ ಅದು ಮಿಸ್ ಆಗಿತ್ತು.
ಬಾಲಿ ಪ್ರವಾಸದಲ್ಲೂ ಹರಿದು ಹಾಕಿದ್ದಳು ಪಾಸ್ಪೋರ್ಟ್
ಮದುವೆಗೂ ಮುನ್ನ ಇವರಿಬ್ಬರೂ ಇಂಡೋನೇಷ್ಯಾದ ಬಾಲಿ ಪ್ರವಾಸಕ್ಕೆ ತೆರಳಲು ವಿಮಾನ ಹಾಗೂ ಹೋಟೆಲ್ ಬುಕ್ಕಿಂಗ್ ಮುಗಿಸಿದ್ದರು. ಆದರೆ ಪ್ರವಾಸಕ್ಕೆ ಹೊರಡುವ ದಿನವೇ ಹೋಟೆಲ್ ಒಂದರ ಶೌಚಾಲಯದಲ್ಲಿ ಸಿಯಾ ತನ್ನ ಪಾಸ್ಪೋರ್ಟ್ ಅನ್ನು ತಾನೇ ಹರಿದು ಹಾಕಿ, ಪಾಸ್ಪೋರ್ಟ್ ಕಳೆದುಹೋಗಿದೆ ಎಂದು ಡ್ರಾಮಾ ಮಾಡಿ ಪ್ರವಾಸ ರದ್ದಾಗುವಂತೆ ಮಾಡಿದ್ದಳು ಎಂಬ ಆಘಾತಕಾರಿ ವಿಷಯವನ್ನು ಕೇತನ್ ಕುಟುಂಬಸ್ಥರು ಕಣ್ಣೀರಿಡುತ್ತಾ ಬಹಿರಂಗಪಡಿಸಿದ್ದಾರೆ.
ರಾಜಸ್ಥಾನದ ಅರಮನೆಯಲ್ಲಿ ನಿಗದಿಯಾಗಿತ್ತು ಅದ್ಧೂರಿ ಮದುವೆ
ಮೃತ ಕೇತನ್ ದೊಡ್ಡ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಇವರಿಬ್ಬರ ವಿವಾಹ ಈ ವರ್ಷದ ನವೆಂಬರ್ನಲ್ಲಿ ನಿಗದಿಯಾಗಿತ್ತು. ಉಭಯ ಕುಟುಂಬಗಳು ರಾಜಸ್ಥಾನದ ಪ್ರಸಿದ್ಧ ಅರಮನೆಯೊಂದರಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅದ್ಧೂರಿ ಮದುವೆಗೆ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದವು. ಆದರೆ ಮದುವೆ ಮಂಟಪ ಏರಬೇಕಾಗಿದ್ದ ಮಗ, ಭಾವಿ ಪತ್ನಿಯ ಕ್ರೂರತ್ವಕ್ಕೆ ಶವವಾಗಿ ಮನೆಗೆ ಬಂದಿರುವುದು ಕೇತನ್ ಕುಟುಂಬವನ್ನು ತೀವ್ರ ಆಘಾತಕ್ಕೀಡು ಮಾಡಿದೆ