ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಪರ ವಕೀಲರು ಕೇಸ್ ನಿಂದ ಹಿಂದೆ ಸರಿದಿದ್ದಾರೆ.
ಕೊಲೆ ಕೇಸ್ ನಲ್ಲಿ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದಲ್ಲಿ ಕನಿಷ್ಟ ಇನ್ನು ಒಂದು ವರ್ಷದವರೆಗೆ ದರ್ಶನ್ ಅವರಿಗೆ ಜಾಮೀನು ಸಿಗುವುದಿಲ್ಲ ಎಂಬುದು ಖಾತ್ರಿ ಆಗಿದೆ. ಪ್ರಕರಣದ ವಿಚಾರಣೆ ಮುಂದುವರೆದಿದೆ. ಇನ್ನೊಂದು ವರ್ಷದಲ್ಲಿ ನಿಗದಿತ ಸಂಖ್ಯೆಯ ಸಾಕ್ಷಿಗಳ ವಿಚಾರಣೆ ನಡೆಯದಿದ್ದಲ್ಲಿ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಇದೀಗ ದರ್ಶನ್ ಅವರನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸುತ್ತಿದ್ದ ವಕೀಲರು ಪ್ರಕರಣದಿಂದ ಹಿಂದೆ ಸರಿದಿದ್ದಾರೆ.
ದರ್ಶನ್ ಪರ ವಕಾಲತ್ತು ನಡೆಸುತ್ತಿದ್ದ ವಕೀಲ ಸುನಿಲ್ ಅವರು ಪ್ರಕರಣದಿಂದ ಹಿಂದೆ ಸರಿದಿದ್ದು, ಬೇರೊಬ್ಬ ವಕೀಲರು ದರ್ಶನ್ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ದರ್ಶನ್ ಪರವಾಗಿ ಆರಂಭದಿಂದಲೂ ವಕಾಲತ್ತು ಮಾಡುತ್ತಿದ್ದ ವಕೀಲ ಸುನಿಲ್ ಅವರು ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿ ಪ್ರಕರಣದಿಂದ ನಿವೃತ್ತರಾಗಿದ್ದಾರೆ.
59ನೇ ಸಿಸಿಎಚ್ ನ್ಯಾಯಾಲಯಕ್ಕೆ ಮೆಮೊ ಸಲ್ಲಿಕೆ ಮಾಡುವ ಮೂಲಕ ತಾವು ಇನ್ನು ಮುಂದೆ ಈ ಪ್ರಕರಣದಲ್ಲಿ ವಕಾಲತ್ತು ವಹಿಸುವುದಿಲ್ಲ ಎಂದಿದ್ದಾರೆ. ದರ್ಶನ್ ಮಾತ್ರವಲ್ಲ ಇದೇ ಪ್ರಕರಣದಲ್ಲಿ ಆರೋಪಿಗಳಾದ ನಾಗರಾಜ್ ಮತ್ತು ಲಕ್ಷ್ಮಣ್ ಪರವಾಗಿಯೂ ಸುನಿಲ್ ವಕಾಲತ್ತು ವಹಿಸಿದ್ದರು.
ಇನ್ನು ಸುನಿಲ್ ಅವರು ವಕಾಲತ್ತಿನಿಂದ ಹಿಂದೆ ಸರಿದ ಕಾರಣ ಸುನಿಲ್ ಬದಲಾಗಿ ವಕೀಲ ಹಷ್ಮತ್ ಪಾಷಾ ಅವರು ದರ್ಶನ್ ಪರ ವಕೀಲರಾಗಿ ನ್ಯಾಯಾಲಯದಲ್ಲಿ ಹಾಜರಾಗಿದ್ದಾರೆ. ಇನ್ನು ಮುಂದೆ ದರ್ಶನ್ ಪರವಾಗಿ ಹಷ್ಮತ್ ಪಾಷಾ ಅವರು ವಾದಗಳನ್ನು ಮಾಡಲಿದ್ದಾರೆ. ದರ್ಶನ್ಗೆ ಸಹ ಈ ಮಾಹಿತಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನೀಡಲಾಗಿದೆ. ‘ನಾನು ಕುಟುಂಬದವರ ಬಳಿ ಚರ್ಚಿಸಿ ಈ ಬಗ್ಗೆ ನಿರ್ಧಾರ ತಿಳಿಸುವೆ’ ಎಂದು ದರ್ಶನ್, ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ.