ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ರಾಜ್ಯಾದ್ಯಂತ ಸರ್ಕಾರಿ ಕ್ಯಾಂಟೀನ್ಗಳಲ್ಲಿ ಕೇವಲ 5 ರೂಪಾಯಿಗೆ ಮೀನಿನ ಸಾರು ಸಹಿತ ಊಟವನ್ನು ನೀಡಲಾಗುವುದು ಎಂದು ಅವರು ಪ್ರಕಟಿಸಿದ್ದಾರೆ. ಸಭೆಯಲ್ಲಿ ಮಾತನಾಡಿದ ಸುವೇಂದು ಅಧಿಕಾರಿ, ಪಶ್ಚಿಮ ಬಂಗಾಳದಾದ್ಯಂತ ಇರುವ ಒಟ್ಟು 400 ಕ್ಯಾಂಟೀನ್ಗಳಲ್ಲಿ ರಿಯಾಯಿತಿ ದರದಲ್ಲಿ ಈ ಭೋಜನ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಅಧಿಕಾರಕ್ಕೆ ಬಂದರೆ ಪಶ್ಚಿಮ ಬಂಗಾಳದಲ್ಲಿ ಮೀನು, ಮಾಂಸ ಮತ್ತು ಮೊಟ್ಟೆಗಳ ಮೇಲೆ ಬಿಜೆಪಿ ಸಂಪೂರ್ಣ ನಿಷೇಧ ಹೇರಲಿದೆ ಎಂದು ತೃಣಮೂಲ ಕಾಂಗ್ರೆಸ್ ನಾಯಕರು ಮಾಡುತ್ತಿದ್ದ ಆರೋಪಗಳಿಗೆ ತಿರುಗೇಟು ನೀಡುವ ರೀತಿಯಲ್ಲಿ ಈ ಘೋಷಣೆ ಹೊರಬಿದ್ದಿದೆ. ಈ ವಿಷಯದಲ್ಲಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಾಯಕರ ನಡುವೆ ಮಾತಿನ ಸಮರವೇ ನಡೆದಿತ್ತು.
ಏಪ್ರಿಲ್ನಲ್ಲಿ ನಡೆದ ಬಹಿರಂಗ ಸಭೆಯೊಂದರಲ್ಲಿ ಮಾತನಾಡಿದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಾ, “ಬಂಗಾಳದ ಜನರು ಮೀನು ಮತ್ತು ಅನ್ನ ತಿಂದು ಬದುಕುತ್ತಾರೆ. ನೀವು ಈಗ ಜನರಿಗೆ ಮೀನು ತಿನ್ನಬೇಡಿ, ಮಾಂಸ ತಿನ್ನಬೇಡಿ, ಮೊಟ್ಟೆ ತಿನ್ನಬೇಡಿ ಎಂದು ಹೇಳುತ್ತಿದ್ದೀರಿ.. ಹಾಗಾದರೆ ಅವರು ಏನು ತಿನ್ನಬೇಕು?” ಎಂದು ಪ್ರಶ್ನಿಸಿದ್ದರು.
ಆದರೆ, ಬಿಜೆಪಿ ಈ ಆರೋಪಗಳನ್ನು ತಳ್ಳಿಹಾಕಿದ್ದು, ತಾವು ಅಧಿಕಾರಕ್ಕೆ ಬಂದರೆ ಅಂತಹ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದೆ. ವಾಸ್ತವವಾಗಿ, ಅನುರಾಗ್ ಠಾಕೂರ್ ಸೇರಿದಂತೆ ಕೆಲವು ಬಿಜೆಪಿ ನಾಯಕರು ಬಂಗಾಳಿ ಸಂಸ್ಕೃತಿಯ ಮೇಲಿನ ತಮ್ಮ ಒಲವನ್ನು ತೋರಿಸಲು ಮೀನು-ಅನ್ನದ ಔತಣಕೂಟಗಳಲ್ಲಿ ಭಾಗವಹಿಸಿದ್ದರು. ನಾಮಿನೇಷನ್ ರ್ಯಾಲಿಗಳ ಸಮಯದಲ್ಲಿ ಮೀನುಗಳನ್ನು ಹಿಡಿದು ಪ್ರದರ್ಶಿಸಿದ್ದರು.
“ನಾವು ಮಾಂಸ, ಮೀನು, ಅನ್ನ ತಿನ್ನುತ್ತೇವೆ. 16 ರಾಜ್ಯಗಳಲ್ಲಿ ಬಿಜೆಪಿ ಸ್ವಂತ ಸರ್ಕಾರಗಳನ್ನು ಹೊಂದಿದೆ. 20 ರಾಜ್ಯಗಳಲ್ಲಿ ಎನ್ಡಿಎ ಸರ್ಕಾರಗಳಿವೆ. ಎಲ್ಲಿಯೂ ಜನರ ಆಹಾರ ಪದ್ಧತಿಯ ಮೇಲೆ ಯಾವುದೇ ನಿರ್ಬಂಧಗಳಿಲ್ಲ. ಆದರೆ, ಮಮತಾ ಬ್ಯಾನರ್ಜಿ ಜನರ ಮನಸ್ಸಿನಲ್ಲಿ ಭಯ ಮತ್ತು ಗೊಂದಲವನ್ನು ಹರಡುತ್ತಿದ್ದಾರೆ” ಎಂದು ಅನುರಾಗ್ ಠಾಕೂರ್ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 5 ರೂಪಾಯಿಯ ಊಟ: ಪಶ್ಚಿಮ ಬಂಗಾಳದಲ್ಲಿ 5 ರೂಪಾಯಿಯ ರಿಯಾಯಿತಿ ದರದಲ್ಲಿ ಆಹಾರ ನೀಡುವ ಕ್ಯಾಂಟೀನ್ಗಳು ಈಗಾಗಲೇ ಜನಪ್ರಿಯವಾಗಿವೆ. 2021ರ ಫೆಬ್ರವರಿಯಲ್ಲಿ ಅಂದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಾರಂಭಿಸಿದ ಈ ಕ್ಯಾಂಟೀನ್ಗಳನ್ನು ‘ಮಾ ಕ್ಯಾಂಟೀನ್’ ಎಂದು ಕರೆಯಲಾಗುತ್ತದೆ. ಇವು ಪ್ರತಿದಿನ ಮಧ್ಯಾಹ್ನ 12:30 ರಿಂದ 3:00 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಹಿಂದಿನ ಸರ್ಕಾರವು ಇಲ್ಲಿ ಅನ್ನ, ಬೇಳೆ ಸಾರು, ತರಕಾರಿ ಪಲ್ಯ ಮತ್ತು ಮೊಟ್ಟೆಯ ಸಾರನ್ನು ನೀಡುತ್ತಿತ್ತು.