ಬೆಂಗಳೂರು: ಭಾರೀ ವಿರೋಧದ ನಡುವೆಯೂ ಬಿಡದಿ ಟೌನ್ ಶಿಪ್ ಗೆ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಮೊದಲ ಹಂತದಲ್ಲಿ 500 ಎಕರೆ ಭೂಸ್ವಾಧೀನಕ್ಕೆ ಚಾಲನೆ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ರಾಮನಗರ ಭಾಗದಲ್ಲಿ ಬಿಡದಿ ಬಳಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.
ರೈತರ ಪ್ರತಿಭಟನೆಯ ನಡುವೆಯೇ ಬಿಡದಿ ಟೌನ್ ಶಿಪ್ ಗಾಗಿ ರಾಮನಗರ ಮತ್ತು ಹಾರೋಹಳ್ಳಿ ತಾಲೂಕು ವ್ಯಾಪ್ತಿಯ ಮೂರು ಗ್ರಾಮಗಳ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿದೆ. ರಾಮನಗರ ತಾಲೂಕಿನ ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಮತ್ತು ಹಾರೋಹಳ್ಳಿ ತಾಲೂಕಿನ ವಡೇರಹಳ್ಳಿಗಳ 755 ಭೂ ಮಾಲೀಕರಿಂದ 519.05 ಎಕರೆ ಭೂಸ್ವಾಧೀನಕ್ಕೆ 2025ರ ಮಾರ್ಚ್ ನಲ್ಲಿ ಪ್ರಾಥಮಿಕ ಅಧಿಸೂಚನೆ ಪ್ರಕಟಿಸಲಾಗಿತ್ತು. ಇದೀಗ ಆ ಭೂಮಿಯ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿದೆ. ಈ ಪೈಕಿ 20 ಎಕರೆ ಕರಾಬು ಭೂಮಿಯಾಗಿದ್ದು, ಉಳಿದ 499.14 ಎಕರೆ ಖಾಸಗಿ ಭೂಮಿಯಾಗಿದೆ.
ಈ ಭೂಮಿಯನ್ನು ಈಗ ಪರಿಹಾರ ನೀಡಿ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಯೋಜನೆಗಾಗಿ ಭೂಮಿ ನೀಡುವವರಿಗೆ ಸರ್ಕಾರ ಪರಿಹಾರ ನಿಗದಿಪಡಿಸಿದೆ. ಕೆಂಪಯ್ಯನ ಪಾಳ್ಯ ವ್ಯಾಪ್ತಿ ಭೂಮಿ ನೀಡುವವರಿಗೆ ಎಕರೆಗೆ ತಲಾ 2.07 ಕೋಟಿ ರೂ. ಪರಿಹಾರ ನೀಡಲಾಗುವುದು. ಮಂಡಲಹಳ್ಳಿ, ವಡೇರಹಳ್ಳಿ ಗ್ರಾಮಗಳ ಭೂಮಿಗೆ ಎಕರೆಗೆ ತಲಾ 2.14 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ. ನಗದು ಪರಿಹಾರ ಪಡೆದುಕೊಳ್ಳದವರಿಗೆ ತಮ್ಮ ಭೂಮಿ ಪ್ರಮಾಣದ ಶೇಕಡ 50ರಷ್ಟು ಅಭಿವೃದ್ಧಿ ಹೊಂದಿದ ಭೂಮಿ ನೀಡಲು ನಿರ್ಧರಿಸಲಾಗಿದೆ. ಬಿಡದಿ ಟೌನ್ ಶಿಪ್ ಯೋಜನೆಗಾಗಿ 9 ಗ್ರಾಮಗಳ 7400 ಎಕರೆಗೂ ಹೆಚ್ಚಿನ ಭೂಮಿ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಚಿತ್ರಕೃಪೆ: ಎಐ