ಬೆಂಗಳೂರು: ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಹುದ್ದೆಗಳ ಬದಲಾವಣೆ ಮಾಡಿದ್ದು, ಬುಧವಾರ ಮೂವರು ಹಿರಿಯ ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಈ ಕೆಳಗಿನ ಅಧಿಕಾರಿಗಳಿಗೆ ಹೊಸ ಜವಾಬ್ದಾರಿ ನೀಡಲಾಗಿದೆ.
ವರ್ಗಾವಣೆಗೊಂಡ ಅಧಿಕಾರಿಗಳ ವಿವರ:
ರವಿ ಎಸ್. (IPS 1998): ಗುಪ್ತಚರ ವಿಭಾಗದ ಎಡಿಜಿಪಿ (ADGP) ಆಗಿದ್ದ ಇವರನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP) ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ನೇಮಿಸಲಾಗಿದೆ.
ಲಾಭೂ ರಾಮ್ (IPS 2004): ಬೆಂಗಳೂರು ಕೇಂದ್ರ ವಲಯದ ಐಜಿಪಿ (IGP) ಆಗಿದ್ದ ಇವರನ್ನು ಗುಪ್ತಚರ ವಿಭಾಗದ (Intelligence) ಪೊಲೀಸ್ ಮಹಾನಿರೀಕ್ಷಕರನ್ನಾಗಿ ವರ್ಗಾಯಿಸಲಾಗಿದೆ.
ಎಸ್. ಗಿರೀಶ್ (IPS 2012): ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಯ ಡಿಐಜಿಪಿ (DIGP) ಆಗಿದ್ದ ಇವರಿಗೆ ಬೆಂಗಳೂರು ಕೇಂದ್ರ ವಲಯದ ಉಪ ಪೊಲೀಸ್ ಮಹಾನಿರೀಕ್ಷಕ ಹುದ್ದೆಯ ಜವಾಬ್ದಾರಿ ನೀಡಲಾಗಿದೆ.
ಎಸ್. ಗಿರೀಶ್ IPS ಸ್ಯಾಂಡಲ್ವುಡ್ ನಟ ದರ್ಶನ್ ತೂಗುದೀಪ ಭಾಗಿಯಾಗಿದ್ದ ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಅತ್ಯಂತ ಚಾಣಾಕ್ಷತನದಿಂದ ನಡೆಸಿ ಇಡೀ ರಾಜ್ಯದ ಗಮನ ಸೆಳೆದಿದ್ದ ಐಪಿಎಸ್ ಅಧಿಕಾರಿ ಎಸ್. ಗಿರೀಶ್ ಅವರಿಗೆ ರಾಜ್ಯ ಸರ್ಕಾರ ಈಗ ಪದೋನ್ನತಿಯ ಸಿಹಿ ಸುದ್ದಿ ನೀಡಿದೆ. ಇವರನ್ನು ಡಿಐಜಿ (Deputy Inspector General of Police) ಹುದ್ದೆಗೆ ಏರಿಸಿ, ಕೇಂದ್ರ ವಲಯದ ಜವಾಬ್ದಾರಿಯನ್ನು ನೀಡಲಾಗಿದೆ.
ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಯಾಗಿದ್ದ (DCP West) ಅವಧಿಯಲ್ಲಿ, ನಟ ದರ್ಶನ್ ಬಂಧನ ಸೇರಿದಂತೆ ಅತ್ಯಂತ ಸಂವೇದನಾಶೀಲ ಪ್ರಕರಣವನ್ನು ಸಮರ್ಥವಾಗಿ ಮುನ್ನಡೆಸಿದ್ದರು. ಯಾವುದೇ ದೊಡ್ಡ ವ್ಯಕ್ತಿಗಳ ಒತ್ತಡಕ್ಕೂ ಮಣಿಯದೆ, ವ್ಯವಸ್ಥಿತವಾಗಿ ಸಾಕ್ಷ್ಯಗಳನ್ನು ಕಲೆಹಾಕುವಲ್ಲಿ ಎಸ್. ಗಿರೀಶ್ ಅವರ ಪಾತ್ರ ಪ್ರಮುಖವಾಗಿತ್ತು. ಅವರ ಈ ನಿಷ್ಠಾವಂತ ಸೇವೆಯನ್ನು ಪರಿಗಣಿಸಿರುವ ಸರ್ಕಾರ, ಈಗ ಅವರಿಗೆ ಬಡ್ತಿ ನೀಡಿದೆ.
ಆಡಳಿತಾತ್ಮಕ ಹಿತದೃಷ್ಟಿಯಿಂದ ಗುಪ್ತಚರ ವಿಭಾಗದ ಐಜಿಪಿ ಮತ್ತು ಬೆಂಗಳೂರು ಕೇಂದ್ರ ವಲಯದ ಡಿಐಜಿಪಿ ಹುದ್ದೆಗಳನ್ನು ಸಿಐಡಿ (CID) ವಿಭಾಗದ ಹುದ್ದೆಗಳಿಗೆ ಸಮಾನವೆಂದು ಸರ್ಕಾರ ಈ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಸಂಜಯ್ ಬಿ. ಎಸ್. ಈ ಆದೇಶ ಹೊರಡಿಸಿದ್ದಾರೆ.
@timesofindia pic.twitter.com/t87VMSqN07