ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಸಂಪುಟದಲ್ಲಿ ಕಾಂಗ್ರೆಸ್ ನ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ. ನಾಳೆ ಸಚಿವರಾಗಿ ಇಬ್ಬರು ಕಾಂಗ್ರೆಸ್ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರಾಜೇಶ್ ಕುಮಾರ್ ಮತ್ತು ತಿರು ವಿಶ್ವನಾಥ್ ಅವರ ಹೆಸರನ್ನು ಎಐಸಿಸಿ ಪ್ರಕಟಿಸಿದೆ. ತಮಿಳುನಾಡಿನಲ್ಲಿ 59 ವರ್ಷದ ನಂತರ ಕಾಂಗ್ರೆಸ್ ಶಾಸಕರು ಸಚಿವ ಸಂಪುಟಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ನಿಯೋಜಿತ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ 234 ಸ್ಥಾನಗಳಲ್ಲಿ 108 ಸ್ಥಾನಗಳನ್ನು ಗೆದ್ದುಕೊಂಡಿತು. ಬಹುಮತಕ್ಕೆ 10 ಕಡಿಮೆಯಾಗಿ ನಂತರ ಐದು ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ಮತ್ತು ಎಡರಂಗ, ವಿಸಿಕೆ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಬೆಂಬಲ ಪಡೆದುಕೊಂಡಿತು. ಮೇ 13 ರಂದು ನಡೆದ ವಿಶ್ವಾಸಮತಯಾಚನೆ ವೇಳೆ ಎಐಎಡಿಎಂಕೆ ಒಂದು ಬಣ ಬೆಂಬಲಿಸಿತು. ವಿಜಯ್ ಅವರನ್ನು 144 ಶಾಸಕರು ಬೆಂಬಲಿಸಿದರು. ಅವರಲ್ಲಿ 24 ಎಐಎಡಿಎಂಕೆ ಶಾಸಕರು ಸೇರಿದ್ದಾರೆ.
ಸಂಪುಟಕ್ಕೆ ಎಐಎಡಿಎಂಕೆ ಬಂಡಾಯ ಶಾಸಕರ ಸೇರ್ಪಡೆ ಇಲ್ಲ:
ಸಿಎಂ ವಿಜಯ್ ನೇತೃತ್ವದ ಸಚಿವ ಸಂಪುಟಕ್ಕೆ ಎಐಎಡಿಎಂಕೆ ಬಂಡಾಯ ನಾಯಕರನ್ನು ಸೇರಿಸಿಕೊಳ್ಳುವ ಬಗ್ಗೆ ತನ್ನ ನಿಲುವನ್ನು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಬುಧವಾರ ಸ್ಪಷ್ಟಪಡಿಸಿದೆ.
ಎಐಎಡಿಎಂಕೆ ಪಕ್ಷಾಂತರಿಗಳನ್ನು ಸರ್ಕಾರಕ್ಕೆ ಸೇರಿಸಿಕೊಂಡರೆ ತಮ್ಮ ಪಕ್ಷವು ಟಿವಿಕೆಗೆ ಬೆಂಬಲ ನೀಡುವ ನಿರ್ಧಾರವನ್ನು ಮರುಪರಿಶೀಲಿಸುತ್ತದೆ ಎಂದು ತಮಿಳುನಾಡು ಸಿಪಿಐ(ಎಂ) ಕಾರ್ಯದರ್ಶಿ ಪಿ. ಷಣ್ಮುಗಂ ಕಟು ಎಚ್ಚರಿಕೆ ನೀಡಿದ ಒಂದು ದಿನದ ನಂತರ ಈ ಸ್ಪಷ್ಟನೆ ನೀಡಲಾಗಿದೆ.
ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ ತಮಿಳುನಾಡು ಸಚಿವ ಆಧವ್ ಅರ್ಜುನ, ಎಐಎಡಿಎಂಕೆ ಶಾಸಕರನ್ನು ಸಂಪುಟದಲ್ಲಿ ಸೇರಿಸಲಾಗುವುದಿಲ್ಲ ಮತ್ತು ಈ ಕುರಿತ ವರದಿಗಳು ಕೇವಲ ಊಹಾಪೋಹಗಳಾಗಿವೆ. ಮೈತ್ರಿಕೂಟದ ಭವಿಷ್ಯದ ಬಗ್ಗೆ ಹೇಳುವುದಾದರೆ ಟಿವಿಕೆ ನೇತೃತ್ವದ ಒಕ್ಕೂಟವು ಅಖಂಡವಾಗಿದೆ ಮತ್ತು ಸಿಎಂ ವಿಜಯ್ ಶೀಘ್ರದಲ್ಲೇ ಸಂಪುಟ ವಿಸ್ತರಣೆಯನ್ನು ನಡೆಸಲಿದ್ದಾರೆ. ಮುಖ್ಯಮಂತ್ರಿಯವರು ಸಂಪುಟವು ಒಂದೇ ಕುಟುಂಬದಂತೆ ಕಾರ್ಯನಿರ್ವಹಿಸಬೇಕೆಂದು ಬಯಸುತ್ತಾರೆ. ಬೆಂಬಲ ನೀಡಿದ ಪಕ್ಷಗಳು ಸಂಪುಟದಲ್ಲಿ ಪ್ರತಿನಿಧಿಸಬೇಕೆಂದು ಅವರು ಬಯಸುತ್ತಾರೆ ಎಂದು ಹೇಳಿದ್ದಾರೆ.