ಬೆಂಗಳೂರು : ಕೇರಳ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ವಿ.ಡಿ. ಸತೀಶನ್ ಅವರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.
ಕೇರಳ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ವಿ.ಡಿ. ಸತೀಶನ್ ಅವರಿಗೆ ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸಲಾಗಿದೆ. ವಿದ್ಯಾರ್ಥಿ ದೆಸೆಯಲ್ಲಿ ಎನ್ಎಸ್ಯುಐ ಮೂಲಕ ರಾಜಕೀಯ ಪ್ರವೇಶಿಸಿ, ಕಳೆದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸತೀಶನ್ ಅವರು ಅಪಾರ ಅನುಭವ ಹೊಂದಿದ್ದಾರೆ. 2021 ರಿಂದ 2026ರ ವರೆಗೆ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದ ಇವರ ಸಂಘಟನಾಶೀಲತೆ ಮತ್ತು ಜನಸಾಮಾನ್ಯರೊಂದಿಗಿನ ಒಡನಾಟವು ಇಂದು ಅವರನ್ನು ಉನ್ನತ ಸ್ಥಾನಕ್ಕೆ ತಲುಪಿಸಿದೆ. ಅವರ ನಾಯಕತ್ವದಲ್ಲಿ ಕೇರಳದಲ್ಲಿ ಜಾತ್ಯತೀತತೆ ಹಾಗೂ ಸಾಮಾಜಿಕ ನ್ಯಾಯದ ಆಶಯಗಳೊಂದಿಗೆ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ಆಡಳಿತವು ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಲಾಗಿದ್ದು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಮತ್ತು ರಾಷ್ಟ್ರದ ಹಿತಕ್ಕಾಗಿ ಜೊತೆಗೂಡಿ ಕೆಲಸ ಮಾಡುವ ಆಶಯ ವ್ಯಕ್ತವಾಗಿದೆ ಎಂದಿದ್ದಾರೆ.
ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ”ಕೇರಳಂ ಕಾಂಗ್ರೆಸ್ನ ಶಾಸಕಾಂಗ ಪಕ್ಷದ ನಾಯಕ ಹಾಗೂ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ವಿ.ಡಿ.ಸತೀಶನ್ ಅವರಿಗೆ ಅಭಿನಂದನೆಗಳು. ವಿದ್ಯಾರ್ಥಿಯಾಗಿರುವಾಗಲೇ ಎನ್ಎಸ್ಯುಐ ಮೂಲಕ ರಾಜಕೀಯ ರಂಗ ಪ್ರವೇಶಿಸಿ, ಬಳಿಕ 6 ಬಾರಿ ಶಾಸಕರಾಗಿ, 2021 ರಿಂದ 2026ರ ವರೆಗೆ ವಿರೋಧ ಪಕ್ಷದ ನಾಯಕರಾಗಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದ್ದ ಸತೀಶನ್ ಅವರ ರಾಜಕೀಯ ಅನುಭವ, ಸಂಘಟನಾಶೀಲತೆ, ಜನಸಾಮಾನ್ಯರ ಜೊತೆಗಿನ ಒಡನಾಟವು ಅವರನ್ನು ಇಲ್ಲಿಯವರೆಗೆ ಕೈಹಿಡಿದು ನಡೆಸಿದೆ ಎಂದು ಭಾವಿಸಿದ್ದೇನೆ. ಸತೀಶನ್ ಅವರ ನಾಯಕತ್ವದಲ್ಲಿ ಕೇರಳಂನಲ್ಲಿ ನಮ್ಮ ಪಕ್ಷವು ಜಾತ್ಯತೀತ, ಸಾಮಾಜಿಕ ನ್ಯಾಯದ ಆಶಯಗಳಡಿ ಸರ್ವರನ್ನೂ ಒಳಗೊಂಡ ಸಮಗ್ರ ಅಭಿವೃದ್ಧಿಯ ಆಡಳಿತ ನೀಡಲಿದೆ ಎಂಬ ಪೂರ್ಣ ವಿಶ್ವಾಸವಿದೆ. ಒಕ್ಕೂಟ ತತ್ವದಡಿ ಎರಡೂ ರಾಜ್ಯಗಳ ಮತ್ತು ರಾಷ್ಟ್ರದ ಹಿತಕ್ಕಾಗಿ ಜೊತೆಸೇರಿ ಕೆಲಸ ಮಾಡೋಣ. ಕೇರಳಂನ ಜನತೆಗೆ ಹಾಗೂ ನೂತನ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು” ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.