ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಜಾರಿಯಲ್ಲಿರುವ ‘ಸೇತುಬಂಧ’ (Setubandha) ಉಪಕ್ರಮದ ಮಾಹಿತಿಯನ್ನು SATS ತಂತ್ರಾಂಶದಲ್ಲಿ ಕಡ್ಡಾಯವಾಗಿ ದಾಖಲಿಸುವಂತೆ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಮಹತ್ವದ ಜ್ಞಾಪನ ಹೊರಡಿಸಿದೆ.
DSERT ನಿರ್ದೇಶಕರು ಹೊರಡಿಸಿರುವ ಜ್ಞಾಪನದ ಪ್ರಕಾರ, ಶಾಲೆಗಳಲ್ಲಿ ಈಗಾಗಲೇ ಸೇತುಬಂಧ ಕಾರ್ಯಕ್ರಮ ಆರಂಭವಾಗಿದ್ದು, ಪೂರ್ವಪರೀಕ್ಷೆ ಹಾಗೂ ಸಾಫಲ್ಯ ಪರೀಕ್ಷೆಗಳ ಶ್ರೇಣಿಗಳನ್ನು SATS ತಂತ್ರಾಂಶದಲ್ಲಿರುವ ಸೇತುಬಂಧ ಮಾಡ್ಯೂಲ್ನಲ್ಲಿ ದಾಖಲಿಸಬೇಕು ಎಂದು ಸೂಚಿಸಲಾಗಿದೆ.
ಯಾವ ತರಗತಿಗಳ ಮಾಹಿತಿಯನ್ನು ದಾಖಲಿಸಬೇಕು?
4ಎ, 4ಬಿ ಹಾಗೂ 5ಎ, 5ಬಿ ನಮೂನೆಗಳ ವಿದ್ಯಾರ್ಥಿಗಳ ಮಾಹಿತಿಯನ್ನು ಸೇತುಬಂಧ ಮಾಡ್ಯೂಲ್ನಲ್ಲಿ ದಾಖಲಿಸಬೇಕಿದೆ. ಜೊತೆಗೆ, ಸಾಫಲ್ಯ ಪರೀಕ್ಷೆಯಲ್ಲಿ ‘ಬಿ’ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ನಿರಂತರ ಪರಿಹಾರಾತ್ಮಕ ಬೋಧನಾ ಕ್ರಮಗಳನ್ನು ಕೈಗೊಳ್ಳಲು ಹಾಗೂ ಅವರ ಕಲಿಕಾ ಪ್ರಗತಿಯನ್ನು ಸೆಪ್ಟೆಂಬರ್ ಮತ್ತು ಡಿಸೆಂಬರ್ ಅಂತ್ಯದಲ್ಲಿ ಮೌಲ್ಯಮಾಪನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.
ಶಿಕ್ಷಕರು ಏನು ಮಾಡಬೇಕು?
2025-26ನೇ ಸಾಲಿನಲ್ಲಿ LBAಗೆ ನೀಡಲಾಗಿರುವ Login Credentials ಬಳಸಿ ಶಿಕ್ಷಕರು ತಮ್ಮ ತರಗತಿ ಹಾಗೂ ವಿಷಯವಾರು ಪೂರ್ವಪರೀಕ್ಷೆ ಮತ್ತು ಸಾಫಲ್ಯ ಪರೀಕ್ಷೆಗಳ ಶ್ರೇಣಿಗಳನ್ನು SATS ಸೇತುಬಂಧ ಮಾಡ್ಯೂಲ್ನಲ್ಲಿ ದಾಖಲಿಸಬೇಕು.
ಶಾಲಾ ಮಟ್ಟದಲ್ಲಿ ಮುಖ್ಯ ಶಿಕ್ಷಕರ ಲಾಗಿನ್ ಮೂಲಕ ವರದಿಗಳನ್ನು (Reports) ಸೃಜಿಸಿ ಪರಿಶೀಲಿಸಬಹುದಾಗಿದೆ. ಇದರಿಂದ ಭೌತಿಕ ನಮೂನೆಗಳನ್ನು ಪ್ರತ್ಯೇಕವಾಗಿ ನಿರ್ವಹಿಸುವ ಅಗತ್ಯವಿರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಜೂನ್ 25ರೊಳಗೆ ಮಾಹಿತಿ ಅಪ್ಲೋಡ್ ಕಡ್ಡಾಯ
ಡಯಟ್ ಪ್ರಾಂಶುಪಾಲರು, ಸೇತುಬಂಧ ನೋಡಲ್ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಮನ್ವಯಾಧಿಕಾರಿಗಳು ಈ ಬಗ್ಗೆ ಎಲ್ಲಾ ಶಾಲೆಗಳಿಗೆ ಮಾಹಿತಿ ತಲುಪಿಸಿ, 2026ರ ಜೂನ್ 25ರೊಳಗೆ ಪೂರ್ವಪರೀಕ್ಷೆ ಮತ್ತು ಸಾಫಲ್ಯ ಪರೀಕ್ಷೆಗಳ ಮಾಹಿತಿಯನ್ನು SATSನಲ್ಲಿ ದಾಖಲಿಸುವಂತೆ ಕ್ರಮವಹಿಸಬೇಕು ಎಂದು ಸೂಚಿಸಲಾಗಿದೆ.
ಯಾರಿಗೆ ಜ್ಞಾಪನ ಕಳುಹಿಸಲಾಗಿದೆ?
- ರಾಜ್ಯದ ಎಲ್ಲಾ ಉಪನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ)
- ಡಯಟ್ ಹಂತದ ಸೇತುಬಂಧ ನೋಡಲ್ ಅಧಿಕಾರಿಗಳು
- ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳು
- ರಾಜ್ಯದ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು











