ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಬಹುಕೋಟಿ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಎಸ್ಐಟಿ ಅಧಿಕಾರಿಗಳು ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಹಾಗೂ ಇತರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳಿಸಿರುವ ಎಸ್ಐಟಿ ಅಧಿಕಾರಿಗಳು ಹಗರಣದ ಕಿಂಗ್ ಪಿನ್ ಶ್ರೀಕಿ, ರಾಬಿನ್ ಖಂಡೆವಾಲಾ, ಮೊಹಮ್ಮದ್ ನಲಪಾಡ್ ಸೇರಿದಂತೆ ಇತರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಚಾರ್ಜ್ ಶೀಟ್ ನಲ್ಲಿ ನಲಪಾಡ್ ಗೆ ಹಣ ಸಂದಾಯವಾಗಿರುವ ಬಗ್ಗೆ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ನಲಪಾಡ್ ಆರೋಪಿಗಳ ಜೊತೆ ನಿರಂತರ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ. ಬಿಟ್ ಕಾಯಿನ್ ನಗದೀಕರಣಕ್ಕೆ ಶ್ರೀಕಿ, ನಲಪಾಡ್ ಸಂಪರ್ಕದಲ್ಲಿದ. ಸ್ನೇಹಿತರ ಮೂಲಕ ನಲಪಾಡ್ ಹಣ ನಗದೀಕರಣ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಮುಂಬೈ ಮೂಲದ ಸ್ನೇಹಿತನ ಮೂಲಕ ಹವಾಲಾ ರೂಪದಲ್ಲಿ ಹಣ ನಗದೀಕರಣವಾಗಿದೆ. ಕಮಿಷನ್ ನಲ್ಲಿ ಮೊಹಮ್ಮದ್ ನಲಪಾಡ್ ಗೂ ಪಾಲು ಹೋಗಿದ್ದು ಪತ್ತೆಯಾಗಿದೆ. ಈ ವಿಚಾರವನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಬಿಟ್ ಕಾಯಿನ್ ಹಗರಣದ ಬಗ್ಗೆ ಜಾರಿ ನಿರ್ದೇಶನಾಲಯ (ED)ದಿಂದಲೂ ತನಿಖೆ ನಡೆಯುತ್ತಿದೆ. ನಲಪಾಡ್, ಶ್ರೀಕಿ ಸೇರಿ ಕೆಲವರ ಮನೆ ಮೇಲೆ ಇಡಿ ಅಧಿಕಾರಿಗಳು ಈ ಹಿಂದೆ ದಾಳಿ ನಡೆಸಿದ್ದರು. ಶ್ರೀಕಿ, ಸುನೀಶ್ ಹೆಗ್ಡೆ, ರಾಬಿನ್ ಖಂಡೇವಾಲನನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಕಸ್ಟಡಿಗೆ ಪಡೆದು ಆರೋಪಿಗಳ ವಿಚಾರಣೆ ಬಳಿಕ ನಲಪಾಡ್ ಗೂ ನೋಟಿಸ್ ಜಾರಿ ಮಾಡಿದ್ದರು.
ಎರಡು ಬಾರಿ ಇಡಿ ಅಧಿಕಾರಿಗಳು ನಲಪಾಡ್ ಗೆ ನೋಟಿಸ್ ನೀಡಿದ್ದಾರೆ. ಈಗ ಮೂರನೇ ಬಾರಿ ನೋಟಿಸ್ ನೀಡಲು ಇಡಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಈ ಮಧ್ಯೆ ಎಸ್ಐಟಿ ತನಿಖೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.