ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರು ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ರಾಜಧಾನಿಯನ್ನು ಸ್ಟಾರ್ಟ್ಅಪ್ ಹಬ್ನಿಂದ ಡ್ರಗ್ಸ್, ಹಿಂಸಾಚಾರ ಮತ್ತು ಅಪರಾಧಗಳ ಅಡ್ಡೆಯಾಗಿ ಮಾಡಿರುವುದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಿಜವಾದ ಸಾಧನೆ ಎಂದು ಗುಡುಗಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿರುವುದಕ್ಕೆ NCRB ಅಂಕಿ-ಅಂಶಗಳೇ ಸಾಕ್ಷಿ. 2021ರಲ್ಲಿ 15,277 ಇದ್ದ ಅಪರಾಧ ಪ್ರಕರಣಗಳು, 2024ರಲ್ಲಿ 31,223ಕ್ಕೆ ಏರಿಕೆ — ಅಂದರೆ ಕೇವಲ 4 ವರ್ಷಗಳಲ್ಲಿ ದ್ವಿಗುಣ!
2024ರಲ್ಲಿ ರಾಜ್ಯ ರಾಜಧಾನಿಯಲ್ಲಿ ದಾಖಲಾಗಿರುವುದು, 5,612 ಹಿಂಸಾತ್ಮಕ ಅಪರಾಧ ಪ್ರಕರಣಗಳು ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಭಾರಿ ಹೆಚ್ಚಳ. ಇದು ಅಭಿವೃದ್ಧಿಯ ಕರ್ನಾಟಕವಲ್ಲ… ಇದು ಕಾಂಗ್ರೆಸ್ ಆಡಳಿತದಲ್ಲಿ ಅಪರಾಧಿಗಳ ಸ್ವರ್ಗವಾಗಿ ಬದಲಾಗುತ್ತಿರುವ ಕರ್ನಾಟಕ!
ರಾಜ್ಯದ ಗೃಹ ಸಚಿವರಾದ ಡಾ.ಪರಮೇಶ್ವರ್ ಅವರಿಗೆ ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧಗಳ ಬಗ್ಗೆ ಕೇಳಿದರೆ “ನನಗೆ ಗೊತ್ತಿಲ್ಲ” ಎನ್ನುವ ಉತ್ತರ ಮಾತ್ರ ಸಿಗಬಹುದು, ಇತ್ತ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ “ಗ್ಯಾರೆಂಟಿ”ಗಳ ಜಾಹೀರಾತಿಗೆ ಹಾಗೂ ಕುರ್ಚಿ ಕಿತ್ತಾಟಕ್ಕೆ ಸಮಯ ಇದೆ. ಜನರ ಸುರಕ್ಷತೆ ಅವರಿಗೆ ಕೇವಲ ಆಯ್ಕೆ ಆಗಿರುವುದು ಕರ್ನಾಟಕದ ದುರಂತ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು ಜಾಗತಿಕ ಹೂಡಿಕೆ, ತಂತ್ರಜ್ಞಾನ ಮತ್ತು ಉದ್ಯೋಗಗಳ ಕೇಂದ್ರವಾಗಬೇಕಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಇಂದು ಡ್ರಗ್ಸ್, ಗ್ಯಾಂಗ್ವಾರ್, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಸೈಬರ್ ಕ್ರೈಮ್ಗಳ ರಾಜಧಾನಿಯಾಗಿ ಮಾರ್ಪಡುತ್ತಿದೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಸಂಪೂರ್ಣ ವಿಫಲವಾದ ಕಾಂಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ನೈತಿಕತೆ ಉಳಿದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.