ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣಾ ಅವ್ಯವಸ್ಥೆ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದು, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರು ನಗರದಲ್ಲಿ ಸರಿಯಾಗಿ ಕಸನಿರ್ವಹಣೆಯಾಗುತ್ತಿಲ್ಲ. ಬೀದಿ ಬೀದಿಗಳಲ್ಲಿ, ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ಕೊಳೆತು ನಾರುತ್ತಿದೆ. ಇಡೀ ನಗರದಲ್ಲಿ ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಎದ್ದುರಾಗಿದೆ. ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಆರ್.ಅಶೋಕ್ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “Brand Bengaluru” ಅಂತ ಬೊಗಳೆ ಬಿಟ್ಟು, ಇಡೀ ಸಿಲಿಕಾನ್ ಸಿಟಿಯನ್ನು “Garbage Bengaluru” ಮಾಡಿದ್ದೇ ನಿಮ್ಮ ಸಾಧನೆಯೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ? ಎಂದು ಪ್ರಶ್ನಿಸಿದ್ದಾರೆ.
ಒಮ್ಮೆ ನಿಮ್ಮ ಎಸಿ ಕಾರಿನ ಗಾಜು ಇಳಿಸಿ, ಮೂಗು ಮುಚ್ಚಿಕೊಳ್ಳದೆ ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುವ ಧೈರ್ಯ ಮಾಡಿ! ಎಂ.ಜಿ. ರಸ್ತೆ, ಬನ್ನೇರುಘಟ್ಟ ರಸ್ತೆ, ಎಚ್ಎಸ್ಆರ್ ಲೇಔಟ್ಗಳಲ್ಲೇ ಕಸದ ಲಾರಿಗಳನ್ನು ನಿಲ್ಲಿಸಿ ರಸ್ತೆಗಳನ್ನೇ ಕಸದ ತೊಟ್ಟಿ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ನಿಮ್ಮ ಆಡಳಿತದಲ್ಲಿ ಬೆಂಗಳೂರಿಗರಿಗೆ ಸಿಗುತ್ತಿರುವುದು ಇದೇನಾ?
- ರಸ್ತೆ ತುಂಬಾ ಉಸಿರುಗಟ್ಟಿಸುವ ನಾರುವ ದುರ್ವಾಸನೆ.
- ರಸ್ತೆ ರಸ್ತೆಯಲ್ಲೂ ಹರಿಯುತ್ತಿರುವ ಕಸದ ವಿಷದ ನೀರು.
- ಕಸದ ಲಾರಿಗಳಿಂದಾಗಿ ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ನರಕ
- ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ನಾಗರಿಕರ ಬದುಕು.
ಬೆಂಗಳೂರಿನ ಜನರಿಗೆ ಉತ್ತರಿಸಿ:
- ಗ್ರೇಟರ್ ಬೆಂಗಳೂರು ಪ್ರಾಧಿಕಾರ ತಂದಿದ್ದು ಕಮಿಷನ್ ಹೊಡೆಯಲೋ ಅಥವಾ ರಸ್ತೆಗಳಲ್ಲೇ ಕಸ ಸುರಿಯಲೋ?
- ಅಧಿಕಾರಿಗಳು-ಗುತ್ತಿಗೆದಾರರ ಒಳಜಗಳದ ಪರಿಣಾಮವನ್ನು ಬೆಂಗಳೂರಿನ ತೆರಿಗೆದಾರರು ಯಾಕೆ ಹೊರಬೇಕು?
- ಕೋಟಿ ಕೋಟಿ ಸುರಿದು “Brand Bengaluru” ಎಂದು ಜಾಹೀರಾತು ಕೊಡುವ ನಿಮಗೆ, ಕಣ್ಣೆದುರೇ ಕಾಣುತ್ತಿರುವ “Smell Bengaluru” ನಾಚಿಕೆ ತರುವುದಿಲ್ಲವೇ?
ಇದು ಕೇವಲ ಆಡಳಿತ ವೈಫಲ್ಯವಲ್ಲ, ಬೆಂಗಳೂರಿನ ಜನರಿಗೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಅನ್ಯಾಯ, ಮೋಸ. ಈಗಲಾದರೂ ಎಚ್ಚೆತ್ತುಕೊಂಡು ತಕ್ಷಣ ಕಸದ ಅವ್ಯವಸ್ಥೆಗೆ ಅಂತ್ಯ ಹಾಡಿ..ಇಲ್ಲದಿದ್ದರೆ, ಇದೇ ಬೆಂಗಳೂರಿನ ಜನ ನಿಮ್ಮ ಸರ್ಕಾರವನ್ನು ಕಸದ ಬುಟ್ಟಿಗೆ ಎಸೆಯುವ ದಿನ ದೂರವಿಲ್ಲ ಎಂದು ಎಚ್ಚರಿಸಿದ್ದಾರೆ.