ತಮಿಳುನಾಡಿನಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ವಿಜಯ್ ನೇತೃತ್ವದ ಟಿವಿಕೆ (TVK) ಸರ್ಕಾರ ರಚಿಸಲು ಸಜ್ಜಾಗಿದೆ. ಮೇ 7ರಂದು ನಾಳೆ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.
ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ, ಕಾಂಗ್ರೆಸ್ ಮೈತ್ರಿಯೊಂದಿಗೆ ಸರ್ಕಾರ ರಚಿಸಲಿದೆ. ಕಾಂಗ್ರೆಸ್ ಬೆಂಬಲ ಘೋಷಿಸುವ ಮೊದಲೇ ವಿಜಯ್ ಅವರು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ಪತ್ರ ಬರೆದು ಸರ್ಕಾರ ರಚಿಸಲು ಆಹ್ವಾನಿಸುವಂತೆ ಕೋರಿದ್ದರು. ಗೊಂದಲಗಳ ನಡುವೆಯೇ ವಿಜಯ್ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಎರಡು ವಾರಗಳಲ್ಲಿ ಸದನದಲ್ಲಿ ಬಹುಮತ ಸಾಬೀತುಪಡಿಸುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಬೆಂಬಲ: 5 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್, ವಿಜಯ್ ಅವರಿಗೆ ಬೆಂಬಲ ನೀಡಲು ನಿರ್ಧರಿಸಿದೆ. ವರದಿಗಳ ಪ್ರಕಾರ, ಕಾಂಗ್ರೆಸ್ ಎರಡು ಸಚಿವ ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ. ಕಾಂಗ್ರೆಸ್ ಬೆಂಬಲದ ನಂತರವೂ ಟಿವಿಕೆಗೆ ಬಹುಮತಕ್ಕೆ (118) ಇನ್ನೂ 5 ಸ್ಥಾನಗಳ ಕೊರತೆಯಿದೆ.
ಇತರ ಪಕ್ಷಗಳ ನಡೆ: ಎಡಪಕ್ಷಗಳಾದ ಸಿಪಿಐ ಮತ್ತು ಸಿಪಿಐ(ಎಂ) ಬೆಂಬಲ ನೀಡುವ ಸಾಧ್ಯತೆಯಿದೆ. ಈಗಾಗಲೇ ಟಿವಿಕೆ ಕಡೆಯಿಂದ ಸಿಪಿಐಗೆ ಆಹ್ವಾನ ಹೋಗಿದೆ. ಮತ್ತೊಂದೆಡೆ, ಎಐಎಡಿಎಂಕೆ (AIADMK) ನಾಯಕ ಸಿ.ವಿ. ಷಣ್ಮುಗಂ ಅವರ ಕಚೇರಿಯಲ್ಲಿ ಸುಮಾರು 35 ಶಾಸಕರು ಸಭೆ ಸೇರಿ ವಿಜಯ್ ಅವರಿಗೆ ಬೆಂಬಲ ನೀಡುವ ಬಗ್ಗೆ ಚರ್ಚಿಸಿರುವುದು ಪಕ್ಷದಲ್ಲಿ ಬಿರುಕು ಮೂಡಿರುವ ಸಂಕೇತ ನೀಡಿದೆ.
ಬೆಂಬಲಿಗರಿಗೆ ವಿಜಯ್ ಧನ್ಯವಾದ: ಚುನಾವಣಾ ಯಶಸ್ಸಿನ ನಂತರ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ವಿಜಯ್, “ಆರಂಭದಲ್ಲಿ ನಮ್ಮನ್ನು ಅನೇಕರು ಹೀಯಾಳಿಸಿದರು, ಆದರೆ ನಾವು ಯಾರನ್ನೂ ಅವಲಂಬಿಸದೆ ಜನರ ಮೇಲೆ ನಂಬಿಕೆ ಇಟ್ಟು ಮುನ್ನಡೆದೆವು. ಯುವ ಮತದಾರರು ನಮ್ಮ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ” ಎಂದು ಹೇಳಿದ್ದಾರೆ.
ವಿಜಯ್ ಅವರು ಇಂದು ಮಧ್ಯಾಹ್ನ 3:30ಕ್ಕೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದ್ದಾರೆ. ರಾಜ್ಯಪಾಲರು ಶಾಸಕರ ಬೆಂಬಲ ಪತ್ರವನ್ನು ಸಲ್ಲಿಸಲು ಅಥವಾ ಸದನದಲ್ಲಿ ಬಹುಮತ ಸಾಬೀತುಪಡಿಸಲು ಸೂಚಿಸುವ ಸಾಧ್ಯತೆಯಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮೇ 7ರಂದು ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.