ಬೆಂಗಳೂರು: ರಾಜ್ಯದ ಅಭಿಯಂತರರಿಗೆ (ಇಂಜಿನಿಯರ್) ಕರ್ನಾಟಕ ಸರ್ಕಾರ ಐತಿಹಾಸಿಕ ಕೊಡುಗೆಯೊಂದನ್ನು ನೀಡಿದ್ದು, ಇಂಜಿನಿಯರ್ಗಳು ತಮ್ಮ ಹೆಸರಿನ ಮುಂದೆ ಅಧಿಕೃತವಾಗಿ ‘Er’ (Engineer - ಅಭಿಯಂತರರು) ಎಂಬ ಪೂರ್ವಪ್ರತ್ಯಯ ಅಥವಾ ಶೀರ್ಷಿಕೆಯನ್ನು (Title) ಬಳಸಲು ಅನುಮತಿ ನೀಡಿ ಅಧಿಕೃತ ಆದೇಶ ಹೊರಡಿಸಿದೆ. ಇದರೊಂದಿಗೆ ಪ್ರತಿ ವರ್ಷ ಸೆಪ್ಟೆಂಬರ್ 15 ಅನ್ನು ಅಧಿಕೃತವಾಗಿ 'ಇಂಜಿನಿಯರ್ಸ್ ದಿನ' ಎಂದು ಆಚರಿಸುವುದಾಗಿಯೂ ಘೋಷಿಸಿದೆ.
ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು (ಸಿಆಸುಇ) ಮಂಗಳವಾರ (ಸೆ. 15) ಈ ಸಂಬಂಧ ಮಹತ್ವದ ಸರ್ಕಾರಿ ಆದೇಶವನ್ನು (ಸಂಖ್ಯೆ: ಸಿಆಸುಇ 144 ಎಸ್ಸಿಇ 2026) ಪ್ರಕಟಿಸಿದೆ.
ಸರ್ ಎಂ.ವಿ. ಕೊಡುಗೆಗೆ ಸಂದ ಗೌರವ
ಆಧುನಿಕ ಮೈಸೂರು ರಾಜ್ಯದ ನಿರ್ಮಾತೃ, ಶ್ರೇಷ್ಠ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯನವರು ದೇಶದ ನೀರಾವರಿ, ಶಿಕ್ಷಣ, ಕೈಗಾರಿಕೆ ಹಾಗೂ ಆರ್ಥಿಕ ಕ್ಷೇತ್ರಕ್ಕೆ ನೀಡಿರುವ ಅನುಪಮ ಕೊಡುಗೆಯನ್ನು ಸರ್ಕಾರ ಸ್ಮರಿಸಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ದಿವಾನರಾಗಿದ್ದ ಸರ್ ಎಂ.ವಿ. ಅವರು ನಿರ್ಮಿಸಿದ ಕೆ.ಆರ್.ಎಸ್ ಅಣೆಕಟ್ಟು, ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ಸಾಬೂನು ಕಾರ್ಖಾನೆ, ಮೈಸೂರು ವಿಶ್ವವಿದ್ಯಾನಿಲಯ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತುಗಳು ನಾಡಿನ ಪ್ರಗತಿಗೆ ಭದ್ರ ಬುನಾದಿ ಹಾಕಿವೆ ಎಂದು ಆದೇಶದ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.
ಕೇವಲ ಅಕ್ಷರಗಳಲ್ಲ, ಸೇವೆಯ ಸಂಕೇತ
ಸಮಾಜದ ಪ್ರಗತಿ ಹಾಗೂ ಆಧುನಿಕ ಜಗತ್ತಿನ ನಿರ್ಮಾಣದಲ್ಲಿ ಇಂಜಿನಿಯರ್ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಾಂತ್ರಿಕ ಪರಿಹಾರಗಳ ಮೂಲಕ ಭವಿಷ್ಯವನ್ನು ರೂಪಿಸುವ ಇಂಜಿನಿಯರ್ಗಳು ತಮ್ಮ ಹೆಸರಿನ ಮುಂದೆ ‘Er’ ಎಂದು ಹೆಮ್ಮೆಯಿಂದ ಬಳಸಿಕೊಳ್ಳಬಹುದು. ಇದು ಕೇವಲ ಎರಡು ಅಕ್ಷರಗಳಾಗಿರದೆ, ಅವರ ಜೀವಿತಾವಧಿಯ ಸೇವೆ ಮತ್ತು ವೃತ್ತಿಪರತೆಗೆ ಸಂದ ಗೌರವವಾಗಿದೆ ಎಂದು ಸರ್ಕಾರ ತಿಳಿಸಿದೆ.
ರಾಜ್ಯಪಾಲರ ಆದೇಶದಂತೆ ಸಿಆಸುಇ ಸರ್ಕಾರದ ಅಧೀನ ಕಾರ್ಯದರ್ಶಿ ನಾಗಪ್ಪ ಎಸ್. ಪರೀಟ ಅವರು ಈ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಎಲ್ಲಾ ಇಲಾಖೆಗಳು ಹಾಗೂ ಗೆಜೆಟ್ ಮುದ್ರಣಾಲಯಕ್ಕೆ ಸುತ್ತೋಲೆ ರವಾನಿಸಿದ್ದಾರೆ. ಸರ್ಕಾರದ ಈ ನಿರ್ಧಾರಕ್ಕೆ ರಾಜ್ಯಾದ್ಯಂತ ಇಂಜಿನಿಯರಿಂಗ್ ಸಮುದಾಯದಿಂದ ಭಾರಿ ಮೆಚ್ಚುಗೆ ಮತ್ತು ಹರ್ಷ ವ್ಯಕ್ತವಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

