ಬೆಂಗಳೂರು: ನರೇಂದ್ರ ಮೋದಿ ಜೀ ಅವರು ದೇಶದ ರಾಜಕೀಯ ಸಂಸ್ಕೃತಿಯನ್ನು ಬದಲಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷ ಒಡೆದಾಳುವ ನೀತಿ ಪಾಲಿಸುತ್ತಿದೆ. ಓಲೈಕೆ ರಾಜಕಾರಣ ಮಾಡಿಕೊಂಡಿದೆ. ಭ್ರಷ್ಟಾಚಾರದಲ್ಲೇ ಮುಳುಗಿದೆ. ಇದನ್ನು ತೊಲಗಿಸಲು ನಾವು ಮುಂದಾಗಿದ್ದೇವೆ ಎಂದು ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರು ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಐ) ಮತ್ತು ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಕೋಟ್ಯಂತರ ಜನರಿಗೆ ಆರೋಗ್ಯ ಸೇವೆ ಒದಗಿಸಲಾಗಿದೆ. ಇದು ವಿಶ್ವದ ಅತಿದೊಡ್ಡ ಆರೋಗ್ಯ ಸೇವೆ ಎಂದು ಹೆಸರು ಪಡೆದಿದೆ. 75 ವರ್ಷ ಮೀರಿದ ಎಲ್ಲಾ ಜನರಿಗೆ ಐದು ಲಕ್ಷ ರೂ. ವರೆಗೆ ಆರೋಗ್ಯ ಸೌಲಭ್ಯ ಸಿಗುತ್ತಿದೆ. ದೇಶದಲ್ಲಿ ವೈದ್ಯಕೀಯ ಸೀಟುಗಳು, ಸ್ನಾತಕೋತ್ತರ ಸೀಟುಗಳು, ವೈದ್ಯಕೀಯ ಕಾಲೇಜುಗಳು ಹೆಚ್ಚಳವಾಗಿವೆ. ಇತ್ತೀಚೆಗೆ ಹೆಣ್ಣು ಮಕ್ಕಳಿಗೆ ಎಚ್ಪಿವಿ ಲಸಿಕೆ ನೀಡಲು ಆರಂಭಿಸಿದ್ದೇವೆ ಎಂದು ವಿವರಿಸಿದರು.
ಮೋದಿಯವರ ಗ್ಯಾನ್ ಮಂತ್ರ...
ಪ್ರಧಾನಿ ಮೋದಿ ಅವರು ಗ್ಯಾನ್ (ಜಿವೈಎಎನ್) ಮಂತ್ರವನ್ನು ನೀಡಿದ್ದಾರೆ. ಗ್ಯಾನ್ ಎಂದರೆ ಜಿ- ಬಡವರು, ವೈ-ಯುವಕರು, ಎ-ಅನ್ನದಾತರು ಮತ್ತು ಎನ್-ನಾರೀಶಕ್ತಿ ಎಂಬುದಾಗಿದೆ. ಬಡತನ ನಿವಾರಣೆಗೆ ಕ್ರಮ ವಹಿಸಲಾಗಿದೆ. ಯುವಕರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಅನ್ನದಾತರಿಗೆ ಶಕ್ತಿ ನೀಡಲಾಗಿದೆ. ನಾರೀಶಕ್ತಿ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ಸೇವಾ ಸಂಕಲ್ಪ ಅಭಿಯಾನ...
ಸೇವಾ ಸುಶಾಶನ ಮತ್ತು ಗರೀಬ್ ಕಲ್ಯಾಣ ಎಂಬುದು ನಮ್ಮ ಮಂತ್ರವಾಗಿದೆ. ಈ ನಿಟ್ಟಿನಲ್ಲಿ ಸೇವಾ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸ್ವಚ್ಛತಾ ಕಾರ್ಯ, ರಕ್ತದಾನ ಶಿಬಿರ, ಮೆಡಿಕಲ್ ಕ್ಯಾಂಪ್ ಇತ್ಯಾದಿ ಮೂಲಕ ಸೇವಾ ಕಾರ್ಯ ಹಮ್ಮಿಕೊಳ್ಳಲಾಗುವುದು. ಕೋಟ್ಯಂತರ ಕಾರ್ಯಕರ್ತರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದರು. ಸೇವಾ ಸಂಕಲ್ಪದ ಅಂಗವಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ ಆಯೋಜಿಸಿದ್ದೇವೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಗೌರವಿಸುತ್ತಿದ್ದೇವೆ ಎಂದು ಹೇಳಿದರು.
ಬೈಕ್ ರ್ಯಾಲಿ, ಪಾದಯಾತ್ರೆ ಸಹ ನಡೆಸಲಿದ್ದೇವೆ. ವಿಕಸಿತ ಭಾರತಕ್ಕಾಗಿ ಶಪಥ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. 2047 ರ ಹೊತ್ತಿಗೆ ಎಲ್ಲಾ ನಾಗರಿಕರು ದೇಶಕ್ಕಾಗಿ ನಾವು ದುಡಿಯುತ್ತೇವೆ ಎಂಬ ಶಪಥ ಮಾಡಲಿದ್ದಾರೆ ಎಂದರು.
ವಡಾನಗರ- ವಾರಾಣಸಿ ಸೇವಾಯಾತ್ರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಸ್ಮರಿಸಲು ವಡಾನಗರದಿಂದ ವಾರಾಣಸಿ (ಕಾಶಿ) ಸೇವಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ವಡಾನಗರ ಮೋದಿ ಅವರ ಜನ್ಮಸ್ಥಳ. ವಾರಾಣಸಿ ಅವರ ಕ್ಷೇತ್ರ. ಎರಡು ಯಾತ್ರೆಗಳು ಇಲ್ಲಿ ನಡೆಯಲಿವೆ. ಸರ್ಕಾರದ ಸೌಲಭ್ಯಗಳು ಕೊನೆಯ ಫಲಾನುಭವಿಗೂ ತಲುಪಿರುವ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದರು
ಸೇವಾಸೇತು ಅಭಿಯಾನ..
ಅಭಿಯಾನದಲ್ಲಿ ಬ್ಲಾಕ್ ಮಟ್ಟದಲ್ಲಿ ನಡೆಯಲಿದೆ. ವಾರ್ಡ್ ವಾರು ಶಿಬಿರಗಳನ್ನು ಆಯೋಜಿಸಲಾಗುವುದು. ಫಲಾನುಭವಿಗಳ ನೋಂದಣಿ ಮಾಡಲಾಗುವುದು. ಸೇವಾ ಕಿ ರಂಗ್ ಕಾರ್ಯಕ್ರಮದಲ್ಲಿ ಇನೋವೇಷನ್ ಸವಾಲುಗಳು ಇರಲಿದೆ. ಯುವಕರು, ವಿದ್ಯಾರ್ಥಿಗಳು, ಉದ್ಯೋಗಿಗಳನ್ನು ಇದರಲ್ಲಿ ಒಳಗೊಳ್ಳುವಂತೆ ಮಾಡಲಾಗುವುದು. ಯುವಕರು ಮತ್ತು ನವೋದ್ಯಮಿಗಳನ್ನು ಬೆಸೆಯುವ ಕಾರ್ಯಕ್ರಮ ಇರಲಿದೆ ಎಂದರು.
ಸುಶಾಶನ ಸಂವಾದದಲ್ಲಿ ಉತ್ತಮ ಆಡಳಿತ, ಪಾರದರ್ಶಕತೆ ಮತ್ತು ಸಾರ್ವಜನಿಕ ಕಲ್ಯಾಣದ ಕುರಿತು ಪಕ್ಷದ ಹಿರಿಯ ಮುಖಂಡರು ವಿಕಸಿತ ಭಾರತದ ಕಲ್ಪನೆಯನ್ನು ತಿಳಿಸಲಿದ್ದಾರೆ. ಕೊನೆಯಲ್ಲಿ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ದೇಶದಾದ್ಯಂತ ಹನ್ನೆರಡು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ನಮ್ಮ ಪಕ್ಷದ ಎಲ್ಲಾ ಮುಖಂಡರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಸೇವಾ- ಸುಶಾಶನ- ಬಡವರ ಕಲ್ಯಾಣ ಎಂಬುದು ಮೋದಿ ಅವರ ಮಂತ್ರವಾಗಿದೆ ಎಂದರು.
ಅಭಿವೃದ್ಧಿಗೆ ಮಾತ್ರವೇ ಆದ್ಯತೆ ನೀಡಿರುವ ಮೋದಿ ಅವರು, ಓಲೈಕೆಯಿಂದ ದೂರವಿದ್ದು, ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿಸುತ್ತಿದ್ದಾರೆ. ಉತ್ತರದಾಯಿತ್ವ ಇರಬೇಕು ಎಂಬುದನ್ನು ಪ್ರತಿಪಾದಿಸಿದ್ದಾರೆ ಎಂದರು.
ನಮ್ಮ ಎಲ್ಲಾ ಮುಖ್ಯಮಂತ್ರಿಗಳು ಮೋದಿ ಅವರ ಮಂತ್ರಗಳ ಪಾಲನೆಗೆ ಆದ್ಯತೆ ನೀಡಿದ್ದಾರೆ. ಹೇಳಿದ್ದನ್ನೇ ಮಾಡುವ, ಮಾಡಿದ್ದನ್ನೇ ಹೇಳುವ ಸಂಸ್ಕೃತಿ ನಮಗೆ ಮುಖ್ಯವಾಗಿದೆ. ಕೋಟ್ಯಂತರ ಕಾರ್ಯಕರ್ತರು ದೇಶದ ಮೂಲೆಮೂಲೆಗಳಲ್ಲಿ ಸೇವಾ ಸಂಕಲ್ಪ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಿದ್ದಾರೆ ಎಂದು ಹೇಳಿದರು.
ಮೋದಿ ಅವರು ವಿಶ್ವ ಕಂಡ ಶ್ರೇಷ್ಠ ಪ್ರಜಾಪ್ರಭುತ್ವವಾದಿ ನಾಯಕ. ಇವರ ನೇತೃತ್ವದಲ್ಲಿ ಜಾಗತಿಕ ಮಟ್ಟದಲ್ಲಿ ಹಲವು ಬದಲಾವಣೆ ಆಗಿವೆ. ನಾವು ಕೇವಲ 2029 ರ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಯಾವುದನ್ನೂ ಮಾಡುತ್ತಿಲ್ಲ. 2047ರ ವಿಕಸಿತ ಭಾರತ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ.ಎನ್. ಅಶ್ವಥನಾರಾಯಣ್, ಸಂಸದರಾದ ಪಿ.ಸಿ.ಮೋಹನ್, ಡಾ.ಮಂಜುನಾಥ್, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಸೇವಾ ಸಂಕಲ್ಪ ಅಭಿಯಾನದ ರಾಜ್ಯ ಸಂಚಾಲಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಸ್. ನಂದೀಶ್ ರೆಡ್ಡಿ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.