ಬೆಂಗಳೂರು: ಮಾಜಿ ವಿಧಾನ ಪರಿಷತ್ ಸದಸ್ಯ (MLC) ದಯಾನಂದ್ ರೆಡ್ಡಿ ಅವರನ್ನು ಅಪಹರಿಸಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ವಿವರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನೇಕಲ್ ತಾಲೂಕಿನ ಹುಸ್ಕೂರು ಬಳಿ ಈ ಘಟನೆ ನಡೆದಿದೆ. ತಡರಾತ್ರಿ ‘ಗೋಲ್ಡ್ ಕಾಯಿನ್ ಕ್ಲಬ್’ನಿಂದ ಹೊರಬರುತ್ತಿದ್ದ ದಯಾನಂದ್ ರೆಡ್ಡಿ ಅವರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ, ಸಿನಿಮೀಯ ಶೈಲಿಯಲ್ಲಿ ಅಪಹರಣ ಮಾಡಿದ್ದರು.ಆರೋಪಿಗಳು ಉಡುಗೊರೆ (ಗಿಫ್ಟ್) ನೀಡುವುದಾಗಿ ನೆಪವೊಡ್ಡಿ ಕಾರಿನ ಬಳಿ ತೆರಳಿ, ಒಳಗೆ ನುಗ್ಗಿದ್ದಾರೆ. ನಂತರ ಗನ್ ತೋರಿಸಿ ಬೆದರಿಸಿ, ಅವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು.
ಆರೋಪಿಗಳು 3 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದರು. ಕುತ್ತಿಗೆಗೆ ಗನ್ ಇಟ್ಟು, “ನಿನ್ನನ್ನು ಕೊಲ್ಲಲು 10 ಕೋಟಿ ಸುಫಾರಿ ನೀಡಿದ್ದಾರೆ” ಎಂದು ಪ್ರಾಣ ಬೆದರಿಕೆ ಹಾಕಿದ್ದರು. ನಂತರದ ಮಾತುಕತೆಯಲ್ಲಿ ಹಣದ ಬೇಡಿಕೆಯನ್ನು 2 ಕೋಟಿಗೆ ಇಳಿಸಲಾಗಿತ್ತು.ಹಣವನ್ನು ಬೆಳಿಗ್ಗೆ ಬ್ಯಾಂಕ್ನಿಂದ ಪಡೆದು ನೀಡುವುದಾಗಿ ದಯಾನಂದ್ ರೆಡ್ಡಿ ಭರವಸೆ ನೀಡಿದ ಬಳಿಕ, ಆರೋಪಿಗಳು ಮುಂಜಾನೆ 4 ಗಂಟೆ ಸುಮಾರಿಗೆ ಅವರನ್ನು ಬಿಟ್ಟು ಕಳುಹಿಸಿದ್ದರು.
ಕಾರ್ಯಾಚರಣೆ ಮತ್ತು ಬಂಧನ: ಈ ಘಟನೆ ಕುರಿತು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ತೀವ್ರ ಶೋಧ ನಡೆಸಿ, ಕೇರಳ ಮೂಲದ ರೋಮಿಯೋ, ಪ್ರವೀಣ್, ಆಶಿಕ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಆರೋಪಿಗಳ ವಿಚಾರಣೆಯನ್ನು ಮುಂದುವರಿಸಿದ್ದು, ಕೃತ್ಯದ ಹಿಂದಿನ ನಿಖರ ಕಾರಣಗಳು ಮತ್ತು ಇತರರ ಶಾಮೀಲುವಿನ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.