ಸೇವೆಯಲ್ಲಿರುವ ಶಿಕ್ಷಕರಿಗೂ (In-service teachers) ಟಿಇಟಿ (TET) ಅರ್ಹತೆ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ. 2025ರ ತೀರ್ಪನ್ನು ಮರುಪರಿಶೀಲಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್, ಶಿಕ್ಷಕರು ಟಿಇಟಿ ಪಾಸಾಗಲು ಆಗಸ್ಟ್ 31, 2028 ರವರೆಗೆ ಗಡುವನ್ನು ವಿಸ್ತರಿಸಿದೆ. ಮಕ್ಕಳ ಗುಣಮಟ್ಟದ ಶಿಕ್ಷಣದ ಹಕ್ಕಿಗಾಗಿ ಟಿಇಟಿ ಅವಶ್ಯಕವಾಗಿದ್ದು, ಅರ್ಹತೆ ಪಡೆಯದ ಶಿಕ್ಷಕರು ಸೇವೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ.
ಸೇವೆಯಲ್ಲಿರುವ ಶಿಕ್ಷಕರಿಗೆ ಟಿಇಟಿ ಕಡ್ಡಾಯ ಎಂಬ 2025ರ ತೀರ್ಪನ್ನು ಜಸ್ಟಿಸ್ ದೀಪಾಂಕರ್ ದತ್ತ ಮತ್ತು ಜಸ್ಟಿಸ್ ಮನ್ಮೋಹನ್ ಅವರ ನೇತೃತ್ವದ ನ್ಯಾಯಪೀಠ ಎತ್ತಿಹಿಡಿದಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಕರ ಸೇವೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಟಿಇಟಿ ಕೇವಲ ಕಾನೂನಾತ್ಮಕ ವಿಷಯವಷ್ಟೇ ಅಲ್ಲ, ಇದು ಸಂವಿಧಾನದ 21ಎ ವಿಧಿಯ ಅಡಿಯಲ್ಲಿ ಮಕ್ಕಳ ‘ಗುಣಮಟ್ಟದ ಶಿಕ್ಷಣದ ಹಕ್ಕಿಗೆ’ ಸಂಬಂಧಿಸಿದ ವಿಷಯವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
2025ರ ತೀರ್ಪಿನ ಹಿನ್ನೆಲೆ
2025ರ ಸೆಪ್ಟೆಂಬರ್ 1 ರಂದು ‘ಅಂಜುಮನ್ ಇಶಾತ್-ಎ-ತಾಲೀಮ್ ಟ್ರಸ್ಟ್ vs ಮಹಾರಾಷ್ಟ್ರ ಸರ್ಕಾರ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಆರ್ಟಿಇ (RTE) ಕಾಯ್ದೆ-2009 ರ ಪ್ರಕಾರ ಟಿಇಟಿ ಅರ್ಹತೆ ಕಡ್ಡಾಯ ಎಂದು ತಿಳಿಸಿತ್ತು. 2009ಕ್ಕೂ ಮುನ್ನ ನೇಮಕಗೊಂಡ ಶಿಕ್ಷಕರೂ ಟಿಇಟಿ ಪಾಸಾಗಬೇಕು. ಸೇವೆಯಿಂದ ನಿವೃತ್ತಿಗೆ ಇನ್ನು 5 ವರ್ಷ ಬಾಕಿ ಇರುವ ಶಿಕ್ಷಕರು ಎರಡು ವರ್ಷಗಳಲ್ಲಿ ಟಿಇಟಿ ಅರ್ಹತೆ ಪಡೆಯಬೇಕು. ಅಲ್ಲದೆ, ಬಡ್ತಿ ಪಡೆಯಲು ಕೂಡ ಟಿಇಟಿ ಕಡ್ಡಾಯವಾಗಿದೆ. ಈ ತೀರ್ಪಿನ ವಿರುದ್ಧ ವಿವಿಧ ರಾಜ್ಯಗಳು, ಶಿಕ್ಷಕರ ಸಂಘಟನೆಗಳು ಸುಮಾರು 70 ಮರುಪರಿಶೀಲನಾ ಅರ್ಜಿಗಳನ್ನು ಸಲ್ಲಿಸಿದ್ದವು.
ಶಿಕ್ಷಕರ ವಾದ ಮತ್ತು ಕೋರ್ಟ್ ಪ್ರತಿಕ್ರಿಯೆ: 2010ಕ್ಕೂ ಮುನ್ನ ನೇಮಕವಾದ ಶಿಕ್ಷಕರಿಗೆ ಟಿಇಟಿ ಅನ್ವಯಿಸುವುದು ಅನ್ಯಾಯ ಎಂದು ಶಿಕ್ಷಕರು ವಾದಿಸಿದ್ದರು. ಆ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ನಿಯಮಗಳ ಪ್ರಕಾರ ನೇಮಕವಾಗಿದ್ದೆವು ಮತ್ತು ಎನ್ಸಿಟಿಇ (NCTE) 2010ರ ಅಧಿಸೂಚನೆಯಲ್ಲಿ ವಿನಾಯಿತಿ ನೀಡಲಾಗಿತ್ತು ಎಂದು ಅವರು ತಿಳಿಸಿದ್ದರು. ಟಿಇಟಿ ಪಾಸಾಗದಿದ್ದರೆ ದೊಡ್ಡ ಸಂಖ್ಯೆಯಲ್ಲಿ ಶಿಕ್ಷಕರು ಉದ್ಯೋಗ ಕಳೆದುಕೊಳ್ಳುತ್ತಾರೆ, ಇದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗುತ್ತದೆ ಎಂಬ ವಾದವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
ಆರ್ಟಿಇ ಕಾಯ್ದೆ ಜಾರಿಯಾಗಿ 15 ವರ್ಷಗಳು ಮತ್ತು 2017ರ ತಿದ್ದುಪಡಿ ಜಾರಿಯಾಗಿ ದಶಕ ಕಳೆದಿದೆ, ಇಷ್ಟು ಸಮಯ ಶಿಕ್ಷಕರಿಗೆ ಟಿಇಟಿ ಪಾಸಾಗಲು ಸಾಕಷ್ಟಿತ್ತು ಎಂದು ಕೋರ್ಟ್ ಹೇಳಿದೆ. ಶಿಕ್ಷಕರ ಸೇವೆ ರಕ್ಷಿಸಬೇಕೆಂಬ ಕಾರಣಕ್ಕಾಗಿ ಮಕ್ಕಳ ಶಿಕ್ಷಣದೊಂದಿಗೆ ರಾಜಿ ಮಾಡಿಕೊಳ್ಳಲಾಗದು ಎಂದು ತಿಳಿಸಿರುವ ನ್ಯಾಯಾಲಯವು, ಆಗಸ್ಟ್ 31, 2028 ರೊಳಗೆ ಟಿಇಟಿ ಅರ್ಹತೆ ಪಡೆಯದ ಶಿಕ್ಷಕರು ಸೇವೆಯಲ್ಲಿ ಮುಂದುವರಿಯಲು ಅವಕಾಶವಿರುವುದಿಲ್ಲ ಎಂದು ಖಡಕ್ಕಾಗಿ ಹೇಳಿದೆ.