ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶನಿವಾರ ಸಂಜೆ 4 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಹತ್ವದ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.
ಮುಂದಿನ ಶಾಸಕಾಂಗ ಪಕ್ಷದ ನಾಯಕರಾಗಿ ಡಿ.ಕೆ. ಶಿವಕುಮಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ. ಸಿದ್ದರಾಮಯ್ಯ ಅವರೇ ಮುಂದಿನ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ಅವರ ಹೆಸರು ಸೂಚಿಸಲಿದ್ದು, ಶಾಸಕಾಂಗ ಪಕ್ಷದ ಸದಸ್ಯರು ಅವಿರೋಧವಾಗಿ ನೂತನ ನಾಯಕರನ್ನಾಗಿ ಡಿ.ಕೆ. ಶಿವಕುಮಾರ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಶಾಸಕಾಂಗ ಪಕ್ಷದ ನಿರ್ಣಯ ಆಧರಿಸಿ ನೂತನ ಮುಖ್ಯಮಂತ್ರಿ ಹೆಸರನ್ನು ಎಐಸಿಸಿ ಅಧಿಕೃತವಾಗಿ ಘೋಷಿಸಲಿದೆ. ನೂತನ ಮುಖ್ಯಮಂತ್ರಿ ಪ್ರಮಾಣ ವಚನ ದಿನಾಂಕದ ಬಗ್ಗೆ ನಿರ್ಧಾರವಾಗಲಿದೆ. ವಿಧಾನಸೌಧ ಭವ್ಯ ಮೆಟ್ಟಿಲಿನ ಎದುರು ಸಿದ್ಧತೆ ನಡೆಸಲಾಗಿದೆ.
ಸಭೆಯ ನಂತರ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಹಿರಿಯ ನಾಯಕರು ಲೋಕಭವನಕ್ಕೆ ತೆರಳಿ ರಾಜ್ಯಪಾಲರ ಭೇಟಿ ಮಾಡಲಿದ್ದಾರೆ. ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ. ಶಿವಕುಮಾರ್ ಸರ್ಕಾರ ರಚನೆ ಹಕ್ಕು ಮಂಡಿಸಲಿದ್ದಾರೆ.
ನಾಲ್ವರು ಶಾಸಕರು ಗೈರು
ಸಿ.ಎಲ್.ಪಿ. ಸಭೆಗೆ ನಾಲ್ವರು ಶಾಸಕರು ಗೈರು ಹಾಜರಾಗುವ ಸಾಧ್ಯತೆ ಇದೆ. ಅನಾರೋಗ್ಯದ ಕಾರಣದಿಂದ ಕಾಗವಾಡ ಶಾಸಕ ರಾಜು ಕಾಗೆ ಸಿ.ಎಲ್.ಪಿ. ಸಭೆಯಲ್ಲಿ ಭಾಗವಹಿಸುವುದಿಲ್ಲ. ತಂದೆ ನಿಧನದ ಹಿನ್ನೆಲೆ ಪಾವಗಡ ಶಾಸಕ ವೆಂಕಟೇಶ್ ಕೂಡ ಬರುವುದಿಲ್ಲ. ರಹೀಂಮ್ ಖಾನ್ ಹಜ್ ಯಾತ್ರೆಯಲ್ಲಿದ್ದಾರೆ. ಕೆ.ಎನ್. ರಾಜಣ್ಣ ವಿದೇಶದಲ್ಲಿದ್ದು, ಇಂದಿನ ಸಭೆಗೆ ಗೈರು ಹಾಜರಾಗಲಿದ್ದಾರೆ ಎನ್ನಲಾಗಿದೆ.