ದೇಶದಲ್ಲಿ ಇಂಧನ ಕೊರತೆಯಿಲ್ಲ ಮತ್ತು ಸಾಕಷ್ಟು ದಾಸ್ತಾನು ಇದೆ ಎಂದು ಕೇಂದ್ರ ಸರ್ಕಾರ ಒಂದು ಕಡೆ ಹೇಳುತ್ತಿದ್ದರೂ, ಕೆಲವು ಕಡೆ ಪರಿಸ್ಥಿತಿ ಇದಕ್ಕೆ ಭಿನ್ನವಾಗಿ ಕಾಣಿಸುತ್ತಿದೆ.
ಹಲವು ಪ್ರದೇಶಗಳಲ್ಲಿ ಇಂಧನ ಕೊರತೆ ಆತಂಕ ಮೂಡಿಸುತ್ತಿದೆ. ನಾಗ್ಪುರದಲ್ಲಿ ಕಂಡುಬಂದ ಒಂದು ದೃಶ್ಯ ತೀವ್ರ ಆತಂಕಕ್ಕೆ ಕಾರಣವಾಗಿದೆ. ಅಲ್ಲಿ ಒಂದು ಸರ್ವಿಸ್ ಸ್ಟೇಷನ್ ಬಳಿ ಹೆದ್ದಾರಿಯ ಎರಡೂ ಬದಿಗಳಲ್ಲಿ ಸುಮಾರು 30 ಟ್ರಕ್ಗಳು ಸಾಲಾಗಿ ನಿಂತಿವೆ. ಇವೆಲ್ಲವೂ ಡೀಸೆಲ್ಗಾಗಿ ಕಾಯುತ್ತಿವೆ. ಅವುಗಳಲ್ಲಿ ಬಟ್ಟೆಗಳು, ಪ್ಯಾಕ್ ಮಾಡಿದ ತಿಂಡಿಗಳು, ಅಮೆಜಾನ್ ಪ್ಯಾಕೇಜ್ಗಳು ಮತ್ತು ರೈಲ್ವೆ ಉಪಕರಣಗಳವರೆಗೆ ಎಲ್ಲವೂ ಇವೆ. ಅವುಗಳಲ್ಲಿ ಹೆಚ್ಚಿನ ವಾಹನಗಳು ಡೀಸೆಲ್ಗಾಗಿ ಗಂಟೆಗಟ್ಟಲೆ ಅಲ್ಲಿ ಕಾಯುತ್ತಿವೆ.
ಹೆಚ್ಚುತ್ತಿರುವ ಜಾಗತಿಕ ತೈಲ ಬೆಲೆಗಳಿಗೆ ಪ್ರತಿಕ್ರಿಯೆಯಾಗಿ ದೇಶದ ಖಾಸಗಿ ಗ್ಯಾಸ್-ಪಂಪ್ ಆಪರೇಟರ್ಗಳು ಡೀಸೆಲ್ ಮಾರಾಟವನ್ನು ಕಡಿಮೆ ಮಾಡಿದ್ದಾರೆ ಅಥವಾ ಬೆಲೆಗಳನ್ನು ಹೆಚ್ಚಿಸಿದ್ದಾರೆ. ಇದರ ಪರಿಣಾಮವಾಗಿ ಹೆಚ್ಚಾದ ಬೇಡಿಕೆಯನ್ನು ತಡೆದುಕೊಳ್ಳಲು ಸರ್ಕಾರಿ ಸ್ವಾಮ್ಯದ ರಿಫೈನರಿಗಳು ತೀವ್ರ ತೊಂದರೆ ಅನುಭವಿಸುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಮೊದಲ ಬಾರಿಗೆ, ಸರ್ಕಾರಿ ನಿಯಂತ್ರಿತ ಬೆಲೆಗಳಲ್ಲಿ ಏರಿಕೆ ಈಗ ಅನಿವಾರ್ಯವಾಗಲಿದೆ. ಇದರಿಂದ ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳಲು ಜನರು ಮುಗಿಬೀಳುತ್ತಿರುವುದು ಮತ್ತಷ್ಟು ತೀವ್ರಗೊಂಡಿದೆ.
ದೇಶದ ಸರಕುಗಳಲ್ಲಿ ಹೆಚ್ಚಿನ ಭಾಗವನ್ನು ದೇಶಾದ್ಯಂತ ಸಾಗಿಸುವ ಟ್ರಕ್ ಚಾಲಕರಿಗೆ ಇದರಿಂದಾಗಿ ದಿನಗಟ್ಟಲೆ ಪಂಪ್ಗಳು ಖಾಲಿಯಾಗಿರುವುದು ಮತ್ತು ಸುಡುವ ಬಿಸಿಲಿನಲ್ಲಿ ರಸ್ತೆ ಬದಿಗಳಲ್ಲಿ ಸುದೀರ್ಘ ಕಾಯುವಿಕೆ ತಪ್ಪುತ್ತಿಲ್ಲ. ಡೀಸೆಲ್ ಸಿಗದೆ ಟ್ರಕ್ ಚಾಲಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
“ನಾವು ಡೀಸೆಲ್ಗಾಗಿ ಸುಮಾರು 80 ಕಿಲೋಮೀಟರ್ ಪ್ರಯಾಣಿಸಿದ್ದೇವೆ. 15-16 ಪಂಪ್ಗಳ ಬಳಿ ನೋಡಿದೆವು, ಆದರೆ ಡೀಸೆಲ್ ಸಿಗಲಿಲ್ಲ” ಎಂದು ಕಲ್ಲಿದ್ದಲು ಟ್ರಕ್ ಚಾಲಕರೊಬ್ಬರು ತೀವ್ರ ಆವೇದನೆ ವ್ಯಕ್ತಪಡಿಸಿದ್ದಾರೆ. ಕೊನೆಗೆ ಫ್ಯೂಯಲ್ ಟ್ಯಾಂಕ್ ಬಹುತೇಕ ಖಾಲಿಯಾದ್ದರಿಂದ ಇಲ್ಲಿ ನಿಲ್ಲಲೇಬೇಕಾಯಿತು ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಸಾಮಾನ್ಯವಾಗಿ ಬೇಡಿಕೆಯಲ್ಲಿ ಮೂರನೇ ಒಂದು ಭಾಗವನ್ನು ಮಾತ್ರ ಪೂರೈಸಲು ಸಾಧ್ಯವಾಗುತ್ತಿದೆ ಎಂದು ಮತ್ತು ಹೆಚ್ಚಿನ ಗ್ರಾಹಕರು ತೃಪ್ತರಾಗುವ ಮೊದಲೇ ಇಂಧನ ಖಾಲಿಯಾಗುತ್ತಿದೆ ಎಂದು ಪೆಟ್ರೋಲ್ ಪಂಪ್ ನಿರ್ವಾಹಕರು ತಿಳಿಸಿದ್ದಾರೆ. ಈ ನಡುವೆ, ದೇಶದಲ್ಲಿ ಎಲ್ಲಿಯೂ ಇಂಧನ ಅಭಾವವಿಲ್ಲ ಮತ್ತು ಸಾಕಷ್ಟು ದಾಸ್ತಾನು ಇದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಘೋಷಿಸಿದ್ದಾರೆ. ದೇಶದ ಪ್ರತಿ ಪೆಟ್ರೋಲ್ ಪಂಪ್ನಲ್ಲಿ ಪೆಟ್ರೋಲ್, ಡೀಸೆಲ್ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ವಾಸ್ತವದಲ್ಲಿ ಪರಿಸ್ಥಿತಿ ಇದಕ್ಕೆ ಭಿನ್ನವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಡೀಸೆಲ್ ಮಾರಾಟದ ಮೇಲೆ ಮಿತಿ
ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ದೇಶವಾಗಿರುವ ಭಾರತವು ಪರ್ಷಿಯನ್ ಕೊಲ್ಲಿಯಲ್ಲಿ 10 ವಾರಗಳ ಕಾಲ ನಡೆದ ಯುದ್ಧದ ಪರಿಣಾಮಗಳೊಂದಿಗೆ ಹೋರಾಡುತ್ತಿದೆ. ದೇಶಾದ್ಯಂತ ಟ್ರಕ್ ಚಾಲಕರು ಕೆಲಸದ ಕಡಿತವನ್ನು ಎದುರಿಸುತ್ತಿದ್ದಾರೆ. ಪೆಟ್ರೋಲ್ ಪಂಪ್ ಮಾಲೀಕರು ಮಾರಾಟವನ್ನು ಸೀಮಿತಗೊಳಿಸುತ್ತಿದ್ದಾರೆ ಮತ್ತು ಪ್ರತಿ ಟ್ರಕ್ಗೆ 50 ರಿಂದ 100 ಲೀಟರ್ಗಳವರೆಗೆ ಮಾತ್ರ ಇಂಧನವನ್ನು ನೀಡುತ್ತಿದ್ದಾರೆ ಎಂದು ಚಾಲಕರು ದೂರುತ್ತಿದ್ದಾರೆ. ಇದರ ಪರಿಣಾಮವಾಗಿ ಜನನಿಬಿಡ ಸರಕು ಸಾಗಣೆ ಕಾರಿಡಾರ್ಗಳಲ್ಲಿ ಪ್ರಯಾಣಕ್ಕೆ ಹೆಚ್ಚಿನ ಸಮಯ ತಗುಲುತ್ತಿದೆ.
ದೇಶದ ಶುದ್ಧೀಕರಣ ಘಟಕಗಳ ವ್ಯವಸ್ಥೆಯಲ್ಲಿ ಒಟ್ಟಾರೆಯಾಗಿ ಪೂರೈಕೆ ಚೆನ್ನಾಗಿಯೇ ಇದ್ದರೂ, ಖಾಸಗಿ ರಿಟೇಲರ್ಗಳು ಮಾರಾಟವನ್ನು ಕಡಿಮೆ ಮಾಡಿರುವುದು, ಕಡಿಮೆ ಪಂಪ್ ಬೆಲೆಗಳ ಕಾರಣದಿಂದಾಗಿ ಬಲ್ಕ್ ಗ್ರಾಹಕರು ರಿಟೇಲ್ ಔಟ್ಲೆಟ್ಗಳತ್ತ ಮುಖ ಮಾಡಿರುವುದು ಮತ್ತು ಇಂಧನ ಬೆಲೆ ಏರಿಕೆಯ ಮುನ್ನೆಚ್ಚರಿಕಾ ಕ್ರಮವಾಗಿ ಜನರು ಖರೀದಿಸುತ್ತಿರುವುದು ಅಡಚಣೆಯನ್ನು ಸೃಷ್ಟಿಸಿದೆ ಎಂದು ಡೇಟಾ ಇಂಟೆಲಿಜೆನ್ಸ್ ಸಂಸ್ಥೆ ‘ಕ್ಲೆಪ್ಲರ್’ನ ವಿಶ್ಲೇಷಕ ಸುಮಿತ್ ರಿಟೋಲಿಯಾ ತಿಳಿಸಿದ್ದಾರೆ.
ಭಾರತದಲ್ಲಿ ಒಟ್ಟು ಡೀಸೆಲ್ ಬಳಕೆ 8.3 ಮಿಲಿಯನ್ ಟನ್ ಅಷ್ಟೇ ಸ್ಥಿರವಾಗಿದ್ದರೂ, ಏಪ್ರಿಲ್ನಲ್ಲಿ ಸರ್ಕಾರಿ ಸ್ವಾಮ್ಯದ ರಿಫೈನರಿಗಳಲ್ಲಿ ಡೀಸೆಲ್ ಮಾರಾಟವು ಶೇಕಡಾ 4.8 ರಷ್ಟು ಹೆಚ್ಚಾಗಿ 7.6 ಮಿಲಿಯನ್ ಟನ್ಗಳಿಗೆ ತಲುಪಿದೆ. ಇದು ಅಸಮತೋಲನಕ್ಕೆ ಸಾಕ್ಷಿಯಾಗಿದೆ.ಈ ಬಿಕ್ಕಟ್ಟು ಸರ್ಕಾರಿ ಸ್ವಾಮ್ಯದ ರಿಫೈನರಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಇಂಧನಗಳನ್ನು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಅವು ದಿನಕ್ಕೆ ಸುಮಾರು 1,000 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿವೆ ಎಂದು ಅಂದಾಜಿಸಲಾಗಿದೆ. ಕಳೆದ ಹಣಕಾಸು ವರ್ಷದ ಲಾಭಗಳು ಪ್ರಸ್ತುತ ತ್ರೈಮಾಸಿಕದಲ್ಲಿ ನಾಶವಾಗುವ ಸಾಧ್ಯತೆಯಿದೆ.
ಖಾಸಗಿ ಇಂಧನ ಕೇಂದ್ರಗಳು ಮಾರಾಟವನ್ನು ಕಡಿಮೆ ಮಾಡುವುದು ಅಥವಾ ಬೆಲೆ ಏರಿಕೆ ಮಾಡುತ್ತಿರುವುದರಿಂದ ದೇಶಾದ್ಯಂತ ಟ್ರಕ್ ಚಾಲಕರು ಡೀಸೆಲ್ಗಾಗಿ ದೀರ್ಘಕಾಲ ಕಾಯಬೇಕಾಗುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಸರ್ಕಾರಿ ಸಂಸ್ಥೆಗಳು ಬೇಡಿಕೆಯನ್ನು ಪೂರೈಸಲು ಕಷ್ಟಪಡುತ್ತಿರುವುದರಿಂದ ಅಭಾವ ಉಂಟಾಗುತ್ತಿದೆ ಎಂದು ವಿಶ್ಲೇಷಿಸಿದ್ದಾರೆ. ಈ ಪರಿಸ್ಥಿತಿಯು ದೇಶಾದ್ಯಂತ ಸರಕು ಸಾಗಣೆಯ ಮೇಲೆ ಪರಿಣಾಮ ಬೀರಿದೆ. ಶೀಘ್ರದಲ್ಲೇ ಸ್ವಲ್ಪ ಬೆಲೆ ಏರಿಕೆ ನಿರೀಕ್ಷಿಸಲಾಗಿದ್ದರೂ, ಅದು ಇಂಧನ ಕಂಪನಿಗಳ ನಷ್ಟವನ್ನು ಸಂಪೂರ್ಣವಾಗಿ ತುಂಬಲು ಸಾಧ್ಯವಾಗದಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸರ್ಕಾರಿ ಸಂಸ್ಥೆಗಳ ಅಂದಾಜಿನ ಪ್ರಕಾರ, ಬೆಲೆ ಏರಿಕೆ ಅನಿವಾರ್ಯವಾಗಿದ್ದರೂ, ಅದು ಅಲ್ಪ ಪ್ರಮಾಣದಲ್ಲಿರಲಿದೆ ಎಂದು ತಿಳಿದುಬಂದಿದೆ. ನಷ್ಟವನ್ನು ತಡೆಯಲು ಅಗತ್ಯವಿರುವ 15-20 ರೂಪಾಯಿ ಏರಿಕೆಯ ಬದಲು, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲೀಟರ್ಗೆ ಕೇವಲ 5 ರೂಪಾಯಿಗಳಿಗೆ ಮಾತ್ರ ಈ ಏರಿಕೆ ಸೀಮಿತವಾಗಲಿದೆ. ಮಧ್ಯಪ್ರಾಚ್ಯದ ಅಸ್ಥಿರತೆಯು ಕಚ್ಚಾ ತೈಲದ ಪ್ರೀಮಿಯಂಗಳು, ಸಾರಿಗೆ ಮತ್ತು ವಿಮೆ ವೆಚ್ಚಗಳನ್ನು ಹೆಚ್ಚಿಸಿದೆ. ಮತ್ತೊಂದೆಡೆ, ರೂಪಾಯಿ ಮೌಲ್ಯ ಕುಸಿತವು ದೇಶೀಯ ಇಂಧನ ಮಾರುಕಟ್ಟೆಯ ಮೇಲಿನ ಒತ್ತಡವನ್ನು ಮತ್ತಷ್ಟು ತೀವ್ರಗೊಳಿಸಿದೆ.