ನವದೆಹಲಿ- ಅಂತರರಾಷ್ಟ್ರೀಯ ಹಣಕಾಸು ಕಾರ್ಯಪಡೆ (FATF)ಯ ‘ಗ್ರೇ ಲಿಸ್ಟ್’ನಿಂದ ತಪ್ಪಿಸಿಕೊಳ್ಳುವ ಕುತಂತ್ರದ ಭಾಗವಾಗಿ, ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಮೇಲಿನ ಬಹುಮಾನದ ಮೊತ್ತವನ್ನು ಪಾಕಿಸ್ತಾನವು 70 ಲಕ್ಷ ಪಾಕಿಸ್ತಾನಿ ರೂಪಾಯಿಗಳಿಗೆ (PKR) ಏರಿಸಿದೆ.
ಅಕ್ಟೋಬರ್ನಲ್ಲಿ ನಡೆಯಲಿರುವ FATF ಸರ್ವಸದಸ್ಯರ ಸಭೆಯ (ಪ್ಲೀನರಿ) ಮುನ್ನ, ಜಾಗತಿಕ ಸಮುದಾಯವನ್ನು ದಾರಿ ತಪ್ಪಿಸಲು ಪಾಕಿಸ್ತಾನ ಈ ನಾಟಕೀಯ ಕ್ರಮಕ್ಕೆ ಮುಂದಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಮಸೂದ್ ಅಜರ್ ದೇಶದಲ್ಲಿಲ್ಲ ಮತ್ತು ಅಫ್ಘಾನಿಸ್ತಾನಕ್ಕೆ ಪಲಾಯನ ಮಾಡಿದ್ದಾನೆ ಎಂದು ಪಾಕಿಸ್ತಾನವು 2021ರಿಂದಲೂ ಪದೇ ಪದೇ ಹೇಳಿಕೊಳ್ಳುತ್ತಾ ಬಂದಿದೆ.
ಆರಂಭದಲ್ಲಿ ಆತನ ಬಂಧನಕ್ಕೆ ಮಾಹಿತಿ ನೀಡುವವರಿಗೆ 50 ಲಕ್ಷ PKR ಬಹುಮಾನ ಘೋಷಿಸಿದ್ದ ಪಾಕಿಸ್ತಾನ, ಐದು ವರ್ಷಗಳ ಬಳಿಕ ಈಗ ಅದನ್ನು 70 ಲಕ್ಷ PKRಗೆ ಹೆಚ್ಚಿಸಿದೆ.
ಆದರೆ, ಕಳೆದ ಆರು ತಿಂಗಳುಗಳಲ್ಲಿ ಭಾರತೀಯ ಗುಪ್ತಚರ ಸಂಸ್ಥೆಗಳು ನಡೆಸಿರುವ ತಾಂತ್ರಿಕ ವಿಶ್ಲೇಷಣೆಯ ಪ್ರಕಾರ, ಫೆಬ್ರವರಿ 2019ರ ಪುಲ್ವಾಮಾ ದಾಳಿ ಸೇರಿದಂತೆ ಭಾರತದ ವಿರುದ್ಧದ ಹಲವು ಭಯೋತ್ಪಾದಕ ಕೃತ್ಯಗಳ ರೂವಾರಿ ಮಸೂದ್ ಅಜರ್ ಪ್ರಸ್ತುತ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನವಾಬ್ಶಾಹ್ನಲ್ಲಿ ಸುರಕ್ಷಿತವಾಗಿ ಅಡಗಿದ್ದಾನೆ.
ಮುಂಬೈ ದಾಳಿ ಉಗ್ರರ ಹೆಸರು ಪ್ರಕಟಿಸಿ ನಾಟಕ
ಮುಂಬೈ ದಾಳಿ ಉಗ್ರರ ಹೆಸರು ಪ್ರಕಟಿಸಿ ನಾಟಕ
ಪಾಕಿಸ್ತಾನದ ಫೆಡರಲ್ ತನಿಖಾ ಸಂಸ್ಥೆ (FIA) ಬಿಡುಗಡೆ ಮಾಡಿರುವ 2026ರ ‘ಅತ್ಯಂತ ಬೇಕಾಗಿರುವ ಭಯೋತ್ಪಾದಕರ’ ಪರಿಷ್ಕೃತ ‘ರೆಡ್ ಬುಕ್’ನಲ್ಲಿ 26/11 ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 19 ಉಗ್ರರ ಹೆಸರುಗಳಿವೆ. ಆದರೆ ಅಂತರರಾಷ್ಟ್ರೀಯ ಒತ್ತಡದಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನವು ಈ ಪಟ್ಟಿಯಲ್ಲಿಯೂ ಕರಾಮತ್ತು ಮಾಡಿದೆ.
ಮಾಹಿತಿ ಮುಚ್ಚಿಹಾಕಿದ ಪಾಕ್: ಪಟ್ಟಿಯಲ್ಲಿರುವ ಟರ್ಬತ್ನ ಮುಹಮ್ಮದ್ ಖಾನ್ (ಅಲ್-ಹುಸೈನಿ ದೋಣಿ ಒದಗಿಸಿದಾತ) ಮತ್ತು ಬಹವಾಲ್ನಗರದ ಅಬ್ದುಲ್ ರೆಹಮಾನ್ ಅವರ ಹೆಸರುಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಆದರೆ ಲಷ್ಕರ್-ಎ-ತೈಬಾ (LeT) ಜೊತೆಗಿನ ಅವರ ನಂಟು ಮತ್ತು ಭಾವಚಿತ್ರಗಳನ್ನು ರಹಸ್ಯವಾಗಿ ತೆಗೆದುಹಾಕಲಾಗಿದೆ.
ಭಯೋತ್ಪಾದಕರ ಸಂಖ್ಯೆ ಏರಿಕೆ: ಕಳೆದ ಐದು ವರ್ಷಗಳಲ್ಲಿ ಪಾಕಿಸ್ತಾನದ ಎಫ್ಐಎ ಪಟ್ಟಿಯಲ್ಲಿರುವ ವಾಂಟೆಡ್ ಉಗ್ರರ ಸಂಖ್ಯೆ 1,330ರಿಂದ 1,804ಕ್ಕೆ (ಸುಮಾರು ಶೇಕಡಾ 35ರಷ್ಟು) ಏರಿಕೆಯಾಗಿದೆ.
ಇವರೆಲ್ಲರೂ ಪಾಕಿಸ್ತಾನದಲ್ಲೇ ಇದ್ದರೂ, ಅಂತರರಾಷ್ಟ್ರೀಯ ಪರಿಶೀಲನೆಯಿಂದ ಗಮನ ಬೇರೆಡೆ ಸೆಳೆಯಲು ಮಾತ್ರ ಈ ಪಟ್ಟಿಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಜೈಶ್ ಪ್ರಧಾನ ಕಚೇರಿ ಧ್ವಂಸ
ಜೈಶ್ ಪ್ರಧಾನ ಕಚೇರಿ ಧ್ವಂಸ
ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ನಿರ್ಣಾಯಕ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯು ಪಾಕಿಸ್ತಾನದ ಉಗ್ರರ ಹೆಡೆಮುರಿಕಟ್ಟಿದೆ. ಈ ವೇಳೆ ಭಾರತ ನಡೆಸಿದ ನಿಖರ ದಾಳಿಯಲ್ಲಿ (Precision Strikes) ಪಾಕಿಸ್ತಾನದ ಭೂಪ್ರದೇಶದೊಳಗೆ ಸುಮಾರು 100 ಕಿ.ಮೀ. ದೂರದಲ್ಲಿದ್ದ ಬಹವಾಲ್ಪುರದ ಜೈಶ್ ಪ್ರಧಾನ ಕಚೇರಿ ‘ಮರ್ಕಜ್ ಸುಭಾನಲ್ಲಾ’ ಸಂಪೂರ್ಣವಾಗಿ ನಾಶವಾಯಿತು.
2015ರಿಂದ ಕಾರ್ಯನಿರ್ವಹಿಸುತ್ತಿದ್ದ ಈ ಕೇಂದ್ರವು ಜೈಶ್ ಉಗ್ರರಿಗೆ ಶಸ್ತ್ರಾಸ್ತ್ರ, ದೈಹಿಕ ಮತ್ತು ಧಾರ್ಮಿಕ ತರಬೇತಿ ನೀಡುವ ಪ್ರಮುಖ ಕೇಂದ್ರವಾಗಿತ್ತು. ಇಲ್ಲಿಯೇ ಮೌಲಾನಾ ಮಸೂದ್ ಅಜರ್, ಮುಫ್ತಿ ಅಬ್ದುಲ್ ರೌಫ್ ಅಸ್ಗರ್ ಮತ್ತು ಇತರ ಕುಟುಂಬದವರ ನಿವಾಸಗಳಿದ್ದು, ಭಾರತ-ವಿರೋಧಿ ಪ್ರಚಾರದ ಭಾಷಣಗಳನ್ನು ಇಲ್ಲಿಂದಲೇ ಬಿತ್ತರಿಸಲಾಗುತ್ತಿತ್ತು.
ಪ್ರಸ್ತುತ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಕಪ್ಪುಪಟ್ಟಿ ಅಥವಾ ಗ್ರೇ ಲಿಸ್ಟ್ ಭೀತಿಯಿಂದ ನಲುಗಿರುವ ಪಾಕಿಸ್ತಾನ, ಇಂತಹ ತಂತ್ರಗಳ ಮೂಲಕ ಜಾಗತಿಕ ಸಂಸ್ಥೆಗಳನ್ನು ನಂಬಿಸಲು ವಿಫಲ ಯತ್ನ ನಡೆಸುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ.