ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರೈತರ ಹಿತದೃಷ್ಟಿಯಿಂದ ಹಾಗೂ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಹಲವು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಮುಖ್ಯವಾಗಿ ರೈತರ ಆದಾಯ ಹೆಚ್ಚಿಸಲು ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು (MSP) ಗಣನೀಯವಾಗಿ ಏರಿಕೆ ಮಾಡಲಾಗಿದ್ದು, ಭತ್ತದ ಬೆಲೆಯಲ್ಲಿ ಏರಿಕೆ ಮಾಡುವ ಮೂಲಕ ಕೃಷಿಕರಿಗೆ ದೊಡ್ಡ ಮಟ್ಟದ ಆರ್ಥಿಕ ನೆರವು ನೀಡಲು ಸರ್ಕಾರ ಮುಂದಾಗಿದೆ. ಇದರೊಂದಿಗೆ ದೇಶದ ಕಲ್ಲಿದ್ದಲು ನಿಕ್ಷೇಪಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಬೃಹತ್ ಹೂಡಿಕೆಯ ಯೋಜನೆಗಳಿಗೆ ಚಾಲನೆ ನೀಡಲಾಗಿದೆ.ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮೋದಿ ಸರ್ಕಾರವು ಹಲವಾರು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಅವುಗಳ ವಿವರ ಹೀಗಿದೆ:
- ಕೋಲ್ ಗ್ಯಾಸಿಫಿಕೇಶನ್ (ಕಲ್ಲಿದ್ದಲು ಅನಿಲೀಕರಣ): ಸುಮಾರು 37,500 ಕೋಟಿ ರೂ. ವೆಚ್ಚದ ಕಲ್ಲಿದ್ದಲು ಅನಿಲೀಕರಣ ಯೋಜನೆಗೆ ಸಚಿವ ಸಂಪುಟವು ಅನುಮೋದನೆ ನೀಡಿದೆ.
- ಬೆಂಬಲ ಬೆಲೆ ಏರಿಕೆ: ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು (MSP) ಸರ್ಕಾರ ಹೆಚ್ಚಿಸಿದೆ. ಇದಕ್ಕಾಗಿ ಸರ್ಕಾರವು 2 ಲಕ್ಷದ 60 ಸಾವಿರ ಕೋಟಿ ರೂ. ಮೀಸಲಿಡಲಿದೆ. ಹೂಡಿಕೆ ವೆಚ್ಚದ ಮೇಲೆ ಶೇಕಡಾ 50 ರಷ್ಟು ಲಾಭವನ್ನು ಸೇರಿಸಿ ಈ ದರವನ್ನು ನಿಗದಿಪಡಿಸಲಾಗಿದೆ.
- ಭತ್ತದ ಬೆಲೆ: ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು 2,441 ರೂ. ಗೆ ನಿಗದಿಪಡಿಸಲಾಗಿದೆ. ಭತ್ತದ ಗ್ರೇಡ್-ಎ ರಕಕ್ಕೆ ಬೆಂಬಲ ಬೆಲೆಯನ್ನು 2,461 ರೂ. ಗೆ ನಿಗದಿ ಮಾಡಲಾಗಿದೆ.
- ವಿಮಾನ ನಿಲ್ದಾಣ: ನಾಗ್ಪುರ ವಿಮಾನ ನಿಲ್ದಾಣದ ಆಧುನೀಕರಣಕ್ಕೂ ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದೆ.
- ಇಂಧನ ಸ್ವಾವಲಂಬನೆ: ಕಲ್ಲಿದ್ದಲು ಅನಿಲೀಕರಣದಿಂದಾಗಿ ಎಲ್ಎನ್ಜಿ (LNG) ಆಮದು ಮಾಡಿಕೊಳ್ಳುವ ಹೊರೆ ಕಡಿಮೆಯಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
- ಕಲ್ಲಿದ್ದಲು ನಿಕ್ಷೇಪ: ಭಾರತದಲ್ಲಿ 401 ಬಿಲಿಯನ್ ಟನ್ ಕಲ್ಲಿದ್ದಲು ನಿಕ್ಷೇಪಗಳಿದ್ದು, ಇದು ಮುಂದಿನ 400 ವರ್ಷಗಳಿಗೆ ಸಾಕಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಕ್ಷೇತ್ರದಲ್ಲಿ ಸುಮಾರು 3 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ನಿರೀಕ್ಷಿಸಲಾಗಿದೆ.