ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ಮಗನಿಯಾ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ನೀಟ್ (NEET) ಪರೀಕ್ಷೆ ಬರೆದಿದ್ದ ಆಕಾಂಕ್ಷ ಚತುರ್ವೇದಿ ಎಂಬ ವಿದ್ಯಾರ್ಥಿನಿ ಮನೆಯ ಫ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಯಲ್ಲಿ ತನಗೆ 650 ಅಂಕಗಳು ಬರುತ್ತವೆ ಎಂದು ಆಕಾಂಕ್ಷ ನಿರೀಕ್ಷಿಸಿದ್ದಳು. ಆದರೆ, ಪೇಪರ್ ಸೋರಿಕೆ ಮತ್ತು ಪರೀಕ್ಷೆ ರದ್ದಾದಂತಹ ಬೆಳವಣಿಗೆಗಳಿಂದಾಗಿ ಆಕೆ ತೀವ್ರ ಖಿನ್ನತೆಗೆ ಒಳಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ಕುಟುಂಬದ ಸದಸ್ಯರು ನೋವಿನಿಂದ ತಿಳಿಸಿದ್ದಾರೆ. ಆಕಾಂಕ್ಷಳ ಕುಟುಂಬದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲದಿದ್ದರೂ, ಆಕೆಯ ತಂದೆ ಕೃಷ್ಣ ಕುಮಾರ್ ಚತುರ್ವೇದಿ ಅವರು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 3 ಲಕ್ಷ ರೂಪಾಯಿ ಸಾಲ ಪಡೆದು, ಮಗಳನ್ನು ನಾಗ್ಪುರದ ಖಾಸಗಿ ಕೋಚಿಂಗ್ ಸೆಂಟರ್ನಲ್ಲಿ ಓದಿಸಿದ್ದರು. ವೃತ್ತಿಯಲ್ಲಿ ರೈತರಾಗಿರುವ ತಂದೆ, ಮಗಳ ವಿದ್ಯಾಭ್ಯಾಸಕ್ಕಾಗಿ ನಾಗ್ಪುರದಲ್ಲಿ ಅಡುಗೆ ಕೆಲಸವನ್ನೂ (ಕುಕ್) ಮಾಡಿದ್ದರು. ನೀಟ್ ಪರೀಕ್ಷೆ ಮುಗಿದ ನಂತರ, ಈ ಬಾರಿ ಮಗಳು ಹೇಗಾದರೂ ಮಾಡಿ ಡಾಕ್ಟರ್ ಆಗುತ್ತಾಳೆ ಎಂಬ ನಂಬಿಕೆ ಆ ಕುಟುಂಬಕ್ಕಿತ್ತು. ಆದರೆ ಪೇಪರ್ ಸೋರಿಕೆಯ ಸುದ್ದಿಯು ಅವರ ಸಂತೋಷವನ್ನು ಕಸಿದುಕೊಂಡಿತು.
ಘಟನಾ ಸ್ಥಳದಲ್ಲಿ ದೊರೆತ ಸುಸೈಡ್ ನೋಟ್ ಕಣ್ಣೀರು ತರಿಸುವಂತಿದೆ. “ಕ್ಷಮಿಸಿ ಮಮ್ಮಿ, ಪಾಪಾ.. ನನ್ನ ಮೇಲೆ ಅಪಾರ ನಂಬಿಕೆಯಿಟ್ಟು ನನ್ನನ್ನು ಡಾಕ್ಟರ್ ಮಾಡಬೇಕೆಂದುಕೊಂಡಿದ್ದೀರಿ. ಆದರೆ ನನಗೆ ಮತ್ತೆ ನೀಟ್ ಪರೀಕ್ಷೆ ಬರೆಯುವ ಧೈರ್ಯವಿಲ್ಲ. ನಿಮ್ಮನ್ನು ಸಾಲದ ಸುಳಿಗೆ ಸಿಲುಕಿಸಿದೆ. ಮತ್ತೆ ಪರೀಕ್ಷೆ ಬರೆದರೂ, ಫಲಿತಾಂಶ ಚೆನ್ನಾಗಿ ಬರುತ್ತೆ ಎಂಬ ಗ್ಯಾರಂಟಿ ಇಲ್ಲ” ಎಂದು ಆಕಾಂಕ್ಷ ತನ್ನ ನೋವನ್ನು ಬರೆದುಕೊಂಡಿದ್ದಾಳೆ.
ನೀಟ್ ಯುಜಿ (NEET UG) 2026 ಪರೀಕ್ಷೆ ರದ್ದಾಗಿರುವುದು ದೇಶಾದ್ಯಂತ ಲಕ್ಷಾಂತರ ಅಭ್ಯರ್ಥಿಗಳಿಗೆ ದೊಡ್ಡ ಆಘಾತವನ್ನುಂಟುಮಾಡಿದೆ. ಮೇ 3 ರಂದು ನಡೆದ ಈ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿರುವುದನ್ನು ಮೇ 7 ರ ಸಂಜೆ ಎನ್ಟಿಎ (NTA) ಗುರುತಿಸಿತ್ತು. ಇದರಿಂದಾಗಿ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ಒಪ್ಪಿಸಿ, ಮೇ 12 ರಂದು ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಯಿತು. ನಂತರ ಮೇ 15 ರಂದು ಶಿಕ್ಷಣ ಸಚಿವಾಲಯ ಮತ್ತು ಎನ್ಟಿಎಗಳು ಮೇ 21 ರಂದು ಮರುಪರೀಕ್ಷೆ ನಡೆಸುವುದಾಗಿ ಘೋಷಿಸಿದವು. ಸದ್ಯ ಈ ಪ್ರಕರಣವನ್ನು ಸಿಬಿಐ (CBI) ತನಿಖೆ ನಡೆಸುತ್ತಿದ್ದು, ಇದುವರೆಗೆ 13 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಒಂದು ಕಡೆ ಪರೀಕ್ಷಾ ವಿಧಾನದಲ್ಲಿ ಬದಲಾವಣೆ ತಂದು ಪೆನ್-ಪೇಪರ್ ಮೋಡ್ ಬದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಜಾರಿಗೆ ತರಬೇಕೆಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದರೆ, ಮತ್ತೊಂದೆಡೆ ಲೀಕೇಜ್ ಜಾಲದ ಆರೋಪಿಗಳ ಮೇಲೆ ತನಿಖಾ ಸಂಸ್ಥೆಗಳು ಕಠಿಣ ಕ್ರಮ ಕೈಗೊಳ್ಳುತ್ತಿವೆ.