ಮೈಸೂರು.. ರಾಜ್ಯದ ಅತಿಹೆಚ್ಚು ಸ್ವಚ್ಛತೆಯಿಂದ ಕೂಡಿರುವ ನಗರ ಎಂದೇ ಖ್ಯಾತಿಯನ್ನು ಪಡೆದ ನಗರ. ಮೈಸೂರು ಎಂದರೆ ಸ್ವಚ್ಛತೆ, ಸ್ವಚ್ಛತೆ ಎಂದರೆ ಮೈಸೂರು ಎಂದು ಸ್ಥಳೀಯರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಆದರೆ ಇದು ಎಷ್ಟು ಸತ್ಯ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿಬಿಡುತ್ತದೆ ನಗರದ ಸಬ್ ಅರ್ಬನ್ ಬಸ್ ಸ್ಟ್ಯಾಂಡ್ ಸುತ್ತಲಿನ ವಾತಾವರಣ. ಹೌದು, ಈ ಬಸ್ ಸ್ಟಾಂಡ್ ಎದುರಿಗಿನ ಕಾಂಪೌಂಡ್ಗಳಲ್ಲಿ ಮೂತ್ರ ವಿಸರ್ಜನೆ ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಮಲಬಾರ್ ಅಂಗಡಿ ಎದುರಿಗಿನ ಕಾಂಪೌಂಡ್ ಇರುವುದು ಇದೇ ಕೆಲಸಕ್ಕೆ ಎಂಬಂತಿದೆ ಪರಿಸ್ಥಿತಿ.
ಇನ್ನು ಹಾರ್ಡಿಂಜ್ ಸರ್ಕಲ್ನಿಂದ ಬಸ್ ನಿಲ್ದಾಣದ ಕಡೆಗೆ ಬರುವ ಫುಟ್ಪಾತ್ ಪಾದಾಚಾರಿಗಳಿಗಿಂತ ವ್ಯಾಪಾರಕ್ಕೆ ಹೆಚ್ಚು ಬಳಕೆಯಾಗುತ್ತಿದೆ. ಇದನ್ನು ಪ್ರಶ್ನಿಸುವ ಕೆಲಸವನ್ನು ಅಲ್ಲೇ ಪಕ್ಕದಲ್ಲಿ ಸದಾ ಇರುವ ಪೊಲೀಸರು ಯಾವತ್ತಿಗೂ ಮಾಡಿಲ್ಲ.
ಇನ್ನು ಬಸ್ ಸ್ಟಾಂಡ್ ಪ್ರವೇಶದ ಬಳಿ ಪ್ರತಿ ಮಳೆಗಾಲದಲ್ಲೂ ಗುಂಡಿ ನಿರ್ಮಾಣವಾಗಲಿದೆ. ಹೀಗೆ ಸ್ವಚ್ಛ ನಗರಿಯ ಮುಖ್ಯ ಬಸ್ ನಿಲ್ದಾಣವೇ ಅನೈರ್ಮಲ್ಯ ಹಾಗೂ ಅವ್ಯವಸ್ಥೆಯ ತಾಣವಾಗಿದ್ದು, ಐದಾರು ವರ್ಷಗಳಿಂದ ಈ ಪರಿಸ್ಥಿತಿ ಮುಂದುವರಿಯುತ್ತಾ ಬಂದಿದೆ.
ಇದೀಗ ಈ ಪೈಕಿ ಒಂದು ಸಮಸ್ಯೆಯನ್ನು ಬಗೆಹರಿಸಲು ಪಾಲಿಕೆ ಮನಸ್ಸು ಮಾಡಿದೆ ಎಂದು ವ್ಯಕ್ತಿಯೊಬ್ಬರು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೊ ಹಂಚಿಕೊಂಡಿದ್ದು, ಮಲಬಾರ್ ಎದುರಿನ ಗೋಡೆಗಳಿಗೆ ಗಾಜುಗಳನ್ನು ಅಳವಡಿಸಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.
ಈ ಮೂಲಕ ಮೂತ್ರ ವಿಸರ್ಜನೆ ಮಾಡುವ ಕಿಡಿಗೇಡಿಗಳಿಗೆ ಬ್ರೇಕ್ ಹಾಕುವ ಉದ್ದೇಶವಿದ್ದು, ಗಾಜಿನ ಕನ್ನಡಿ ಇರುವುದರಿಂದ ಕಾಂಪೌಂಡ್ ಮೇಲೆ ಮೂತ್ರ ವಿಸರ್ಜನೆ ಮಾಡಲು ಸಾಧ್ಯವಿಲ್ಲ ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.