ಮೊನ್ನೆಯಷ್ಟೇ ( ಮೇ 4 ) ಪ್ರಕಟವಾದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶದಲ್ಲಿ ತಮಿಳುನಾಡು ಫಲಿತಾಂಶ ಭಾರೀ ಚರ್ಚೆಗೆ ಕಾರಣವಾಗಿದೆ.
ಅಧಿಕಾರದಲ್ಲಿದ್ದ ಡಿಎಂಕೆ ಮತ್ತೊಮ್ಮೆ ಸರ್ಕಾರ ರಚನೆ ಮಾಡಲಿದೆ ಎಂದು ಹಲವಾರು ಸಮೀಕ್ಷೆಗಳು ಊಹಿಸಿದ್ದವು ಹಾಗೂ ಸ್ವತಃ ಡಿಎಂಕೆ ಸಹ ಮತ್ತೊಮ್ಮೆ ಸರ್ಕಾರ ಎಂದು ವಿಶ್ವಾಸ ವ್ಯಕ್ತಪಡಿಸಿತ್ತು.
ಆದರೆ ಫಲಿತಾಂಶ ಆ ಲೆಕ್ಕಾಚಾರಗಳನ್ನೆಲ್ಲ ಉಲ್ಟಾ ಮಾಡಿದೆ. ವಿಜಯ್ ನೇತೃತ್ವದ ಹೊಸ ಪಕ್ಷ ಟಿವಿಕೆ 108 ಸೀಟುಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಡಿಎಂಕೆ 59 ಸೀಟುಗಳಿಗೆ ತೃಪ್ತಿಪಟ್ಟುಕೊಂಡಿದ್ದು, ಅಧಿಕಾರ ಕಳೆದುಕೊಂಡಿದೆ. ಹೀಗೆ ದಶಕಗಳ ಇತಿಹಾಸವಿರುವ ಪಕ್ಷವನ್ನು ಎರಡು ವರ್ಷಗಳ ಹಿಂದೆ ಸ್ಥಾಪನೆಗೊಂಡ ಪಕ್ಷ ಸೋಲಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿದ್ದು, ಇದರ ಕುರಿತು ನಿರ್ದೇಶಕ ರಾಮ್ಗೋಪಾಲ್ ವರ್ಮಾ ಟ್ವೀಟ್ ಮಾಡಿ ಚರ್ಚೆ ಹುಟ್ಟುಹಾಕಿದ್ದಾರೆ.
ಯಾವುದಾದರೊಂದು ವೈರಲ್ ವಿಷಯದ ಬಗ್ಗೆ ತನ್ನದೇ ಶೈಲಿಯಲ್ಲಿ ಟ್ವೀಟ್ ಮಾಡುವ ವರ್ಮಾ ಈ ಬಾರಿ ಕರುಣಾನಿಧಿ ಜತೆ ವಿಜಯ್ ಇರುವ ಫೋಟೊ ಹಂಚಿಕೊಂಡು ಡಿಎಂಕೆ ಪಕ್ಷ ನಾಶವಾಯಿತು ಎಂದಿದ್ದಾರೆ.
ಈ ಹಿಂದಿನ ಕಾರ್ಯಕ್ರಮವೊಂದರ ಫೋಟೊ ಇದಾಗಿದ್ದು, ಇದರಲ್ಲಿ ಕರುಣಾನಿಧಿ ರಿಬ್ಬನ್ ಕಟ್ ಮಾಡುತ್ತಿದ್ದಾರೆ. ಇವರ ಹಿಂದೆ ಬಾಲ್ಯದ ವಿಜಯ್ ಸಹ ಇದ್ದಾರೆ. ಈ ಫೋಟೊ ಹಂಚಿಕೊಂಡಿರುವ ರಾಮ್ ಗೋಪಾಲ್ ವರ್ಮಾ ‘ಕರುಣಾನಿಧಿಗೆ ತನ್ನ ಬೆನ್ನ ಹಿಂದೆ ನಿಂತಿರುವ ಹುಡುಗ ಒಂದು ದಿನ ತನ್ನ ಪಕ್ಷವನ್ನು ನಾಶ ಮಾಡುತ್ತಾನೆ ಎಂದು ಕನಸನ್ನೂ ಕಂಡಿರಲಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಇನ್ನು ಈ ಟ್ವೀಟ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ರಾಜಕೀಯದಲ್ಲಿ ಏಳು ಬೀಳು ಸಹಜ. ಇಂತಹ ಸೋಲುಗಳನ್ನು ಡಿಎಂಕೆ ಅನುಭವಿಸಿದೆ. ಕೇವಲ ಒಂದು ಸೋಲನ್ನು ಪಕ್ಷದ ನಾಶ ಎಂದರೆ ಹೇಗೆ, ತಲೆಯಲ್ಲಿ ಬುದ್ದಿ ಇಲ್ಲದೇ ನಾಶ ಎಂಬ ಪದ ಬಳಸಬೇಡಿ, ಆ ಪಕ್ಷಕ್ಕೆ ಪುಟಿದೇಳುವುದು ಚೆನ್ನಾಗಿ ತಿಳಿದಿದೆ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಆಡಳಿತ ಪಕ್ಷದಲ್ಲಿ ಕೂರುವ ಡಿಎಂಕೆಗಿಂತ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವ ಡಿಎಂಕೆ ಇನ್ನೂ ಅಪಾಯಕಾರಿ ಅದಕ್ಕೆ ಟಿವಿಕೆ ಸಿದ್ಧವಾಗಲಿ ಎಂದು ಎಚ್ಚರಿಕೆ ನೀಡಿದ್ದಾರೆ.

