ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಸದ್ಯ ಎಲ್ಲರ ಚಿತ್ತ ಸರ್ಕಾರ ರಚನೆಯತ್ತ ನೆಟ್ಟಿದೆ. 108 ಸೀಟುಗಳನ್ನು ಪಡೆದಿರುವ ಟಿವಿಕೆಗೆ ಸರ್ಕಾರ ರಚಿಸಲು ಇನ್ನೂ 10 ಶಾಸಕರ ಅಗತ್ಯವಿದ್ದು, ಕಾಂಗ್ರೆಸ್ ಜತೆ ಹಾಗೂ ಇತರೆ ಸಣ್ಣ ಪಕ್ಷಗಳ ಬೆಂಬಲ ಪಡೆದುಕೊಳ್ಳುವ ಸಾಧ್ಯತೆ ಇದೆ.
ಚುನಾವಣೆಗೂ ಮುನ್ನ ಮಾಡಿದ ಭಾಷಣದಲ್ಲಿ ಡಿಎಂಕೆ ತನ್ನ ರಾಜಕೀಯ ಶತ್ರು ಹಾಗೂ ಬಿಜೆಪಿ ತನ್ನ ಸಿದ್ಧಾಂತದ ಶತ್ರು ಎಂದು ಹೇಳಿದ್ದ ವಿಜಯ್ ಎನ್ಡಿಎ ಬೆಂಬಲಿತ ಎಐಎಡಿಎಂಕೆ ಜತೆ ಕೈ ಜೋಡಿಸುವುದಿಲ್ಲ ಎಂದೇ ಹೇಳಬಹುದು.
ಹೀಗಾಗಿ ಕಾಂಗ್ರೆಸ್ ಟಿವಿಕೆಗೆ ಬೆಂಬಲ ನೀಡುವುದು ಬಹುತೇಕ ಖಚಿತವಾಗಿದೆ. ಇನ್ನು ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಸಹ ತಮಿಳುನಾಡಿನಿಂದ ಬಿಜೆಪಿ ಹಾಗೂ ಆರ್ಎಸ್ಎಸ್ ಅನ್ನು ದೂರ ಇಡುವ ಕಾರಣದಿಂದಾಗಿ ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡುವ ಸಾಧ್ಯತೆ ಇದೆ ಎಂದಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಕುರಿತು ಡಿಎಂಕೆ ವಕ್ತಾರ ಸರವಣನ್ ಅಣ್ಣಾದುರೈ ಮಾತನಾಡಿದ್ದು, ‘ಮೇ 7ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ವಿಜಯ್ ಅವರಿಗೆ ಕೃತಜ್ಞತೆಗಳು. ಕಾಂಗ್ರೆಸ್ ಟಿವಿಕೆಗೆ ಬೆಂಬಲ ಸೂಚಿಸುವುದಾಗಿ ಹೇಳಿಕೊಂಡಿದೆ. ಇದನ್ನು ಬೆನ್ನಿಗೆ ಚೂರಿ ಹಾಕುವುದು ಎನ್ನುತ್ತಾರೆ. ಕಾಂಗ್ರೆಸ್ ತನ್ನ ನಿಲುವನ್ನು ಬದಲಿಸಿ ಬೆನ್ನಿಗೆ ಚೂರಿ ಹಾಕಿ ಟಿವಿಕೆ ಬೆಂಬಲಿಸಲು ಮುಂದಾಗಿದೆ. ಇದಕ್ಕೆ ಕಾರಣವನ್ನು ನೀಡುತ್ತಿರುವ ಕಾಂಗ್ರೆಸ್ ಬಿಜೆಪಿ ಹಾಗೂ ಆರ್ಎಸ್ಎಸ್ಗಳನ್ನು ರಾಜ್ಯದೊಳಗೆ ಬಿಟ್ಟುಕೊಳ್ಳದಿರುವುದು ಎಂದು ಹೇಳುತ್ತಿದೆ. ನಾವು ಈ ಕೆಲಸವನ್ನು ದಶಕಗಳಿಂದ ಮಾಡುತ್ತಾ ಬಂದಿದ್ದೇವೆ ನಮ್ಮ ಹತ್ತಿರ ಇದನ್ನು ಹೇಳಬೇಡಿ. ಈ ರೀತಿ ನಿರ್ಧಾರ ಬದಲಿಸಿದರೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವ ದೇಶದ ಇತರೆ ಪಕ್ಷಗಳಲ್ಲಿ ಇವರ ಬಗ್ಗೆ ಯಾವ ಅಭಿಪ್ರಾಯ ಮೂಡಬಹುದು’ ಎಂದು ಕಿಡಿಕಾರಿದ್ದಾರೆ.