ಮೇ 4ರಂದು ಹೊರಬಿದ್ದ ತಮಿಳುನಾಡು ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಸದ್ಯ ಭಾರೀ ಚರ್ಚೆಗಳನ್ನು ಹುಟ್ಟುಹಾಕಿದೆ.
ಟಿವಿಕೆ 108 ಸೀಟುಗಳನ್ನು ಪಡೆದುಕೊಂಡು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸಹ ಸರ್ಕಾರ ರಚಿಸಲು ಇನ್ನೂ 10 ಶಾಸಕರ ಬೆಂಬಲ ಅಗತ್ಯವಿದೆ. ಇನ್ನು ವಿಜಯ್ ಪೆರಂಬೂರು ಹಾಗೂ ತಿರುಚಿರಪಲ್ಲಿ ಪೂರ್ವ ಈ ಎರಡೂ ಕ್ಷೇತ್ರಗಳಲ್ಲಿ ಗೆದ್ದಿದ್ದು, ಈ ಪೈಕಿ ಒಂದು ಕ್ಷೇತ್ರವನ್ನು ಬಿಟ್ಟುಕೊಡಲಿದ್ದಾರೆ. ಅಲ್ಲದೇ ಸ್ಪೀಕರ್ ನೇಮಕ ಸಹ ಆಗಲಿದ್ದು, ಈ ಎರಡು ಕಾರಣಗಳಿಂದ ಟಿವಿಕೆ ಶಾಸಕರ ಬಲ 106ಕ್ಕೆ ಕುಸಿಯಲಿದೆ.
ಹೀಗಾಗಿ ಟಿವಿಕೆ ಸರ್ಕಾರ ರಚಿಸಲು ಇನ್ನೂ 12 ಶಾಸಕರ ಅಗತ್ಯವಿದ್ದು, ಇತರೆ ಪಕ್ಷಗಳ ಸಹಾಯ ಕೋರದೇ ಬೇರೆ ವಿಧಿ ಇಲ್ಲದಂತಾಗಿದೆ.
ಹೀಗಿರುವಾಗಲೇ ಕಾಂಗ್ರೆಸ್ನ ನಾಯಕ ಕೆಸಿ ವೇಣುಗೋಪಾಲ್ ಈ ಕುರಿತು ಮಾತನಾಡಿದ್ದು, ಟಿವಿಕೆ ಮುಖ್ಯಸ್ಥ ವಿಜಯ್ ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿಕೊಂಡಿದ್ದಾರೆ, ಅಲ್ಲದೇ ಪೆರುಮ್ತಲೈವರ್ ಕಾಮರಾಜು ಅವರ ಸಿದ್ಧಾಂತವನ್ನೂ ಸಹ ಅಳವಡಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ಗೆ ತಮಿಳುನಾಡಿನಲ್ಲಿ ಸಂವಿಧಾನ ಉಳಿಸುವ ಸರ್ಕಾರ ನಡೆಯಬೇಕೆಂಬ ಇಂಗಿತ ಮುಂಚಿನಿಂದಲೂ ಇದೆ, ಬಿಜೆಪಿ ಬೆಂಬಲದಿಂದ ತಮಿಳುನಾಡಿನಲ್ಲಿ ಸರ್ಕಾರ ನಡೆಯಬಾರದು ಎಂಬುದು ಸಹ ಅದರ ಧ್ಯೇಯವಾಗಿದೆ, ತಮಿಳುನಾಡು ಕಾಂಗ್ರೆಸ್ಗೆ ವಿಜಯ್ ಮನವಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಆಯ್ಕೆಯನ್ನು ಬಿಡಲಾಗಿದೆ ಎಂದೂ ಸಹ ವೇಣುಗೋಪಾಲ್ ತಿಳಿಸಿದ್ದಾರೆ.