ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಭರ್ಜರಿ ಮತ ಬೇಟೆಯಾಡಿರುವುದು ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕದ ಗೃಹ ಸಚಿವ ಜಿ. ಪರಮೇಶ್ವರ್ ಅವರು, ವಿಜಯ್ ಅವರ ಸಿನಿಮಾ ಜನಪ್ರಿಯತೆಯು ಇಷ್ಟು ದೊಡ್ಡ ಪ್ರಮಾಣದಲ್ಲಿ ಮತಗಳಾಗಿ ಪರಿವರ್ತನೆಯಾಗುತ್ತದೆ ಎಂದು ತಾವು ಊಹಿಸಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸಾಂಪ್ರದಾಯಿಕ ರಾಜಕೀಯ ಪಕ್ಷಗಳ ಭದ್ರಕೋಟೆಯನ್ನು ನಡುಗಿಸಿರುವ ವಿಜಯ್ ಅವರ ಈ ಪ್ರದರ್ಶನವು ತಮಿಳುನಾಡು ರಾಜಕಾರಣದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಜಯ್ ಅವರ ಜನಪ್ರಿಯತೆಯು ಕೇವಲ ಸಿನೆಮಾಗೆ ಸೀಮಿತವಾಗದೆ, ಇಷ್ಟು ದೊಡ್ಡ ಮಟ್ಟದಲ್ಲಿ ಮತಗಳಾಗಿ ಪರಿವರ್ತನೆಯಾಗುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ ಎಂದು ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ತಮಿಳುನಾಡಿನ ರಾಜಕಾರಣದಲ್ಲಿ ವಿಜಯ್ ಅವರ ಪಕ್ಷವು ಒಂದು ಪ್ರಬಲ ಶಕ್ತಿಯಾಗಿ ಹೊರಹೊಮ್ಮಿರುವುದನ್ನು ಅವರು ಗಮನಿಸಿದ್ದಾರೆ. ಆರಂಭದಲ್ಲಿ ವಿಜಯ್ ಅವರನ್ನು ಕೇವಲ ಒಬ್ಬ ನಟನಾಗಿ ನೋಡಲಾಗಿತ್ತು, ಆದರೆ ಈಗ ಅವರ ಪಕ್ಷವು ಪಡೆದಿರುವ ಮತಗಳ ಪ್ರಮಾಣವು ಎಲ್ಲರ ಗಮನ ಸೆಳೆಯುತ್ತಿದೆ.ಚುನಾವಣಾ ಫಲಿತಾಂಶದ ಟ್ರೆಂಡ್ ಮತ್ತು ಬದಲಾಗುತ್ತಿರುವ ರಾಜಕೀಯ ಸಮೀಕರಣಗಳ ಬಗ್ಗೆಯೂ ಅವರು ಮಾತನಾಡಿದ್ದು, ವಿಜಯ್ ಅವರ ಈ ಯಶಸ್ಸು ಮುಂದಿನ ದಿನಗಳಲ್ಲಿ ತಮಿಳುನಾಡು ರಾಜಕೀಯದಲ್ಲಿ ಹೊಸ ಆಯಾಮ ನೀಡಲಿದೆ ಎಂದು ತಿಳಿಸಿದ್ದಾರೆ.
ಡಿಎಂಕೆ ಮತ್ತು ಕಾಂಗ್ರೆಸ್ ದಶಕಗಳಿಂದಲೂ ಉತ್ತಮ ಬಾಂಧವ್ಯ ಹೊಂದಿವೆ. ಈ ಹಳೆಯ ಹೊಂದಾಣಿಕೆಯ ಆಧಾರದ ಮೇಲೆಯೇ ಹೈಕಮಾಂಡ್ ಮೈತ್ರಿಯನ್ನು ಮುಂದುವರಿಸಿದೆ” ಎಂದು ಅವರು ತಿಳಿಸಿದರು.ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳದಿರುವ ನಿರ್ಧಾರದ ಹಿಂದೆ ಹೈಕಮಾಂಡ್ನ ದೂರದೃಷ್ಟಿ ಇರುತ್ತದೆ. ಯಾವ ದೃಷ್ಟಿಕೋನದಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂಬುದನ್ನು ಗಮನಿಸಬೇಕು ಎಂದು ವಿವರಿಸಿದರು.ಮೈತ್ರಿಯಲ್ಲಿ ಬದಲಾವಣೆ ಮಾಡಬೇಕಿದ್ದರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಸಿ. ವೇಣುಗೋಪಾಲ್ ಅವರು ನಿರ್ಧಾರ ತೆಗೆದುಕೊಳ್ಳಬಹುದಿತ್ತು. ಆದರೆ, ಅವರು ಹಳೆಯ ಮಿತ್ರಪಕ್ಷದ ಮೇಲೆಯೇ ವಿಶ್ವಾಸವಿಟ್ಟಿದ್ದಾರೆ ಎಂದರು.