ಮೇ 4ರಂದು ಹೊರಬಿದ್ದ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಬಹುತೇಕರನ್ನು ಅಚ್ಚರಿಗೊಳಪಡಿಸಿದೆ. ದಶಕಗಳ ಇತಿಹಾಸವಿರುವ ಡಿಎಂಕೆ ಪಕ್ಷದ ವಿರುದ್ಧ ಎರಡು ವರ್ಷಗಳ ಹಿಂದಷ್ಟೇ ಸ್ಥಾಪನೆಯಾದ ಟಿವಿಕೆ ಗೆದ್ದು ಬೀಗಿದ್ದು, ಸದ್ಯ ಬಹುಮತಕ್ಕೆ ಕೊರತೆ ಇರುವ 10 ಸೀಟುಗಳನ್ನು ಹೊಂದಿಸಿ ಸರ್ಕಾರ ರಚಿಸಲು ಮುಂದಾಗಿದೆ.
ಟಿವಿಕೆ ಇದೇ ಮೊದಲ ಬಾರಿಗೆ ಸ್ಪರ್ಧಿಸಿದರೂ ಅದರ ಅಭ್ಯರ್ಥಿಗಳು ವಿಜಯ್ ಅಲೆಯಲ್ಲಿ ಬಲಿಷ್ಠ ರಾಜಕಾರಣಿಗಳನ್ನೇ ಬಗ್ಗುಬಡಿದಿದ್ದಾರೆ. ಆಟೊ ಡ್ರೈವರ್, ವಿಜಯ್ ಕಾರು ಚಾಲಕನ ಪುತ್ರ, ಗರ್ಭಿಣಿ ಮಹಿಳೆ ಹಾಗೂ ದಲಿತ ಅಭ್ಯರ್ಥಿಗಳು ಶಾಸಕರಾಗಿ ರೂಪುಗೊಂಡಿದ್ದಾರೆ.
ಹೀಗೆ ಹಲವಾರು ಹೊಸ ಮುಖಗಳಿಗೆ ಮಣೆ ಹಾಕಿರುವ ವಿಜಯ್ ಟಿವಿಕೆ ಪಕ್ಷ ಸದ್ಯ ಈ ವಿಷಯದ ಕುರಿತಾಗಿ ಸಾಕಷ್ಟು ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತಿದೆ. ಇನ್ನು ಟಿವಿಕೆ ಪಕ್ಷದಿಂದ ಶಾಸಕರಾದವರ ಪೈಕಿ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರೂ ಸಹ ಇದ್ದಾರೆ.
ಹೌದು, ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ಮೂಲದ ಸುನಿಲ್ ಆನಂದ್ ಎಂಬುವರು ಮೆಟ್ಟುಪಾಳ್ಯಂ ಕ್ಷೇತ್ರದಿಂದ ಎಂಎಲ್ಎ ಆಗಿ ಆಯ್ಕೆಯಾಗಿದ್ದಾರೆ. ಡಿಎಂಕೆಯ ಕವಿತಾ ಕಲ್ಯಾಣ ಸುಂದರಮ್ ವಿರುದ್ಧ ಟಿವಿಕೆ ಸುನಿಲ್ ಆನಂದ್ 7768 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.
ಇನ್ನು ಗೆಲುವಿನ ಬಳಿಕ ಮಾತನಾಡಿದ ಸುನಿಲ್ ಆನಂದ್ ವಿಜಯ್ ಅವರು ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳ ಹಾಗೆ ಹಣ ಕೊಟ್ಟು ಗೆದ್ದು ಸರ್ಕಾರ ನಡೆಸುವ ಉದ್ದೇಶವನ್ನು ಹೊಂದಿಲ್ಲ, ಅವರು ಲಂಚ ಪಡೆಯದೇ ಜನರಿಗೆ ಸರಿಯಾದ ಸೇವೆ ಮಾಡಬೇಕೆಂಬ ಉದ್ದೇಶದಿಂದ ಪಕ್ಷ ಸ್ಥಾಪಿಸಿದ್ದಾರೆ ಎಂದಿದ್ದಾರೆ.