ಶಿವಮೊಗ್ಗ: ವನ್ಯಜೀವಿ ಮತ್ತು ನಿರ್ವಹಣೆ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ದಕ್ಷ ಐಪಿಎಸ್ ಅಧಿಕಾರಿ ಹಾಗೂ ಮೂಲತಃ ವೈದ್ಯರಾಗಿರುವ ಡಾ. ಹರ್ಷ ಅವರು ಮಂಡಿಸಿದ ಸಂಶೋಧನಾ ಪ್ರಬಂಧವನ್ನು ಪುರಸ್ಕರಿಸಿ ಕುವೆಂಪು ವಿಶ್ವವಿದ್ಯಾಲಯವು ಬುಧವಾರದಂದು ನಡೆದ 35 ನೇ ಘಟಿಕೋತ್ಸವದಲ್ಲಿ ಪಿ.ಎಚ್.ಡಿ. ಪದವಿಯನ್ನು ಪ್ರದಾನ ಮಾಡಿದೆ.
ಡಾ. ಹರ್ಷ ಅವರು, “ನಾಗರಹೊಳೆ, ಬಂಡೀಪುರ ಮತ್ತು ಬಿಆರ್ಟಿ (ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ) ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿಗಳ ಜನಸಂಖ್ಯೆಯ ಸ್ಥಿರತೆಯ ಕುರಿತು ಒಂದು ಅಧ್ಯಯನ, ಮಾನವ-ಹುಲಿ ಸಂಘರ್ಷಕ್ಕೆ ವಿಶೇಷ ಉಲ್ಲೇಖದೊಂದಿಗೆ” ಎಂಬ ವಿಷಯದ ಕುರಿತು ಸುದೀರ್ಘ ಅಧ್ಯಯನ ನಡೆಸಿದ್ದರು.
ಸಂಶೋಧನೆಯಲ್ಲಿ ಕರ್ನಾಟಕದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಾದ ನಾಗರಹೊಳೆ ಮತ್ತು ಬಂಡೀಪುರಗಳಲ್ಲಿ ಹುಲಿಗಳ ಸಂಖ್ಯೆ ಹಾಗೂ ಅವುಗಳ ನೈಸರ್ಗಿಕ ವಾಸಸ್ಥಾನದ ಸಮತೋಲನದ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ನಡೆಸಲಾಗಿದೆ.
ಅರಣ್ಯ ಅಂಚಿನ ಗ್ರಾಮಗಳಲ್ಲಿ ಎದುರಾಗುತ್ತಿರುವ ಮಾನವ ಮತ್ತು ಹುಲಿಗಳ ನಡುವಿನ ಸಂಘರ್ಷಕ್ಕೆ ಕಾರಣಗಳು ಹಾಗೂ ಅದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅವರು ಪ್ರಬಂಧದಲ್ಲಿ ಮಹತ್ವದ ಅಂಶಗಳನ್ನು ಉಲ್ಲೇಖಿಸಿದ್ದಾರೆ.
ಕುವೆಂಪು ವಿಶ್ವವಿದ್ಯಾನಿಲಯದ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದ ಪ್ರಾಧ್ಯಾಪಕ ಡಾ. ವಿಜಯ ಕುಮಾರ್ ಅವರ ಮಾರ್ಗದರ್ಶನದಲ್ಲಿ ಡಾ. ಹರ್ಷ ಪಿ.ಎಸ್. ಅವರು ಐದು ವರ್ಷಗಳ ಕಾಲ ಕ್ಷೇತ್ರ ಆಧಾರಿತ ಅಧ್ಯಯನವನ್ನು ನಡೆಸಿದ್ದಾರೆ. ಪ್ರಸ್ತುತ ಡಾ.ಪಿ.ಎಸ್.ಹರ್ಷರವರು ಬಳ್ಳಾರಿ ವಲಯದ ಐಜಿಪಿ ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್, ಸಚಿವ ಡಾ.ಎಂ.ಸಿ. ಸುಧಾಕರ್, ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮೊದಲಾದವರಿದ್ದರು.